ETV Bharat / bharat

ಜಿ20 ಸಭೆಗೆ ಕಾಶ್ಮೀರ ಕಣಿವೆ ಸಜ್ಜು; ನೆಲ, ಜಲ, ವಾಯು ಮೇಲೆಲ್ಲ ಭದ್ರತಾ ಪಡೆ ಕಟ್ಟೆಚ್ಚರ

author img

By

Published : May 21, 2023, 1:36 PM IST

G20 Hawk eye vigil tight security in Kashmir Valley
ಜಿ20 ಸಭೆಗೆ ಕಾಶ್ಮೀರ ಕಣಿವೆ ಸಜ್ಜು... ನೆಲ, ಜಲ, ವಾಯು ಮೂಲಕ ಕಣ್ಗಾವಲು

ಮೇ 22ರಿಂದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮಹತ್ವದ ಜಿ20 ಸಭೆಗಳು ನಡೆಯಲಿವೆ. ಇದು 1986ರ ನಂತರ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿದ್ದು ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ.

ಶ್ರೀನಗರ: ದೇಶದ ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಾಳೆಯಿಂದ (ಮೇ 22) ಮೂರು ದಿನಗಳ ಮಹತ್ವದ ಜಿ20 ಸಭೆಗಳು ಆರಂಭವಾಗಲಿವೆ. 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಶೇಷ ಕಲಂ ರದ್ದುಗೊಳಿಸಿದ ನಂತರ ನಡೆಯುತ್ತಿರುವ ಮೊದಲ ಜಾಗತಿಕ ಕಾರ್ಯಕ್ರಮ ಇದಾಗಿದೆ. ಆದ್ದರಿಂದ ಇಡೀ ಕಣಿವೆ ನಾಡಿನಾದ್ಯಂತ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಎಲ್ಲೆಡೆಯೂ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ.

ಭಯೋತ್ಪಾದಕ ಚಟುವಟಿಕೆ ಪೀಡಿತ ನಾಡಿನಲ್ಲಿ ಜಿ20 ಸಭೆಗಳನ್ನು ಸುಗಮವಾಗಿ ನಡೆಸುವುದು ಕೇಂದ್ರ ಸರ್ಕಾರಕ್ಕೆ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದರ ನಡುವೆ ಇತ್ತೀಚಿಗೆ ಉಗ್ರ ಚಟುವಟಿಕೆಗಳೂ ಹೆಚ್ಚಾಗಿವೆ. ಇದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಏಜೆನ್ಸಿಗಳ ಕಳವಳಕ್ಕೆ ಕಾರಣವಾಗಿದೆ. ಈ ಚಟುವಟಿಕೆಗಳ ನಿಯಂತ್ರಣಕ್ಕೆ ಪಡೆಗಳು ಸರ್ವ ರೀತಿಯಲ್ಲೂ ಪಯತ್ನಿಸುತ್ತಿವೆ ಎಂದು ವರದಿಯಾಗಿದೆ.

ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯುದ್ದಕ್ಕೂ ಕಟ್ಟೆಚ್ಚರ ಹೆಚ್ಚಿಸಲಾಗಿದೆ. ಪಠಾಣ್‌ಕೋಟ್ - ಜಮ್ಮು ಮತ್ತು ಜಮ್ಮು - ಪೂಂಚ್ ಮತ್ತು ಜಮ್ಮು - ಶ್ರೀನಗರ - ಗಂದರ್‌ಬಲ್ ರಾಷ್ಟ್ರೀಯ ಹೆದ್ದಾರಿಗಳ ನಿರ್ದಿಷ್ಟ ಸ್ಥಳಗಳಲ್ಲಿ ವಿಶೇಷ ನಾಕಾಗಳನ್ನೂ ಸ್ಥಾಪಿಸಲಾಗಿದೆ. ಜಿ20 ಸಮ್ಮೇಳನದ ಸ್ಥಳಗಳು, ವಿಮಾನ ನಿಲ್ದಾಣ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಸುಮಾರು 600 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಿವಿಲ್​ ಉಡುಪಿನಲ್ಲಿ ನಿಯೋಜಿಸಲಾಗಿದೆ.

ನೆಲ, ಜಲ, ವಾಯು ಮೂಲಕ ಕಣ್ಗಾವಲು: ಜಿ20 ಸಮ್ಮೇಳನದ ಸ್ಥಳವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಇಲಾಖೆಯ ಎನ್‌ಎಸ್‌ಜಿ ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಕಮಾಂಡೋಗಳು ಸ್ವಾಧೀನಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ, ಸಿಆರ್‌ಪಿಎಫ್‌ನ ವಾಟರ್ ವಿಂಗ್ ಮತ್ತು ನೌಕಾಪಡೆಯ ಮಾರ್ಕೋಸ್ ಸ್ಕ್ವಾಡ್‌ನ ಕಮಾಂಡೋಗಳು ತಮ್ಮ ದೋಣಿಗಳಲ್ಲಿ ದಾಲ್ ಸರೋವರದಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ಆ್ಯಂಟಿ ಡ್ರೋನ್ ವ್ಯವಸ್ಥೆಯನ್ನೂ ಅಳವಡಿಸಲಾಗಿದ್ದು, ಸಮಾವೇಶ ನಡೆಯುವ ಸ್ಥಳವನ್ನು ವಿಮಾನ ಹಾರಾಟ ನಿಷೇಧಿತ ವಲಯವನ್ನಾಗಿ ಘೋಷಿಸಲಾಗಿದೆ. ಯಾವುದೇ ಅಪಾಯವನ್ನು ಎದುರಿಸಲು ನೆಲ, ಜಲ ಮತ್ತು ವಾಯು ಮೂಲಕ ಕಣ್ಗಾವಲು ಇರಿಸಲಾಗಿದೆ.

ಇಂದಿನಿಂದಲೇ ವಿದೇಶಿ ಅತಿಥಿಗಳ ಆಗಮನ: ಮೇ 22ರಿಂದ ಪ್ರಾರಂಭವಾಗುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದೇಶಿ ಅತಿಥಿಗಳು ಭಾನುವಾರದಿಂದಲೇ ಆಗಮಿಸಲಿದ್ದಾರೆ. ಆದ್ದರಿಂದ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GOC-in-C), ಉತ್ತರ ವಲಯ ಕಮಾಂಡ್, ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಉರಿ ಸೆಕ್ಟರ್‌ನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇನೆಯ ಸನ್ನದ್ಧತೆ ಮತ್ತು ಒಳನುಸುಳುವಿಕೆ ನಿಗ್ರಹ ಕ್ರಮಗಳನ್ನು ಸಹ ಅವರುಗಳು ಪರಿಶೀಲಿಸಿದರು.

ಇದನ್ನೂ ಓದಿ: G20 ಸಭೆಗೂ ಮುನ್ನ ಜಮ್ಮು ಕಾಶ್ಮೀರದಾದ್ಯಂತ ಮತ್ತೆ ಎನ್‌ಐಎ ದಾಳಿ

ಮಾರ್ಕೋಸ್ ಸ್ಕ್ವಾಡ್ ದಾಲ್ ಸರೋವರದಲ್ಲಿ ಬೀಡುಬಿಟ್ಟಿದೆ. ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಇತರ ಭದ್ರತಾ ಏಜೆನ್ಸಿಗಳ ಸಂಬಂಧಪಟ್ಟ ಅಧಿಕಾರಿಗಳು ನಿರಂತರವಾಗಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದಾರೆ. ಜೊತೆ-ಜೊತೆಗೆ ಅಗತ್ಯ ಸುಧಾರಣೆಗಳಿಗೂ ಸೂಚಿಸುತ್ತಿದ್ದಾರೆ. ಸಿಆರ್‌ಪಿಎಫ್‌ನ ವಾಟರ್ ವಿಂಗ್‌ನೊಂದಿಗೆ ನೌಕಾಪಡೆಯ ಮಾರ್ಕೋಸ್ ತಂಡವು ಇಂದು ದಾಲ್ ಸರೋವರದಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧತೆಯ ಕುರಿತು ಜಂಟಿ ಅಭ್ಯಾಸ ಕೂಡ ನಡೆಸಿದೆ.

ದಾಲ್​ ಸರೋವರದ ದಡದಲ್ಲಿರುವ ಶೇರ್ ಕಾಶ್ಮೀರ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಜಿ20 ಸಮಾವೇಶವನ್ನು ಆಯೋಜಿಸಲಾಗಿದೆ. ಇದರೊಂದಿಗೆ ನೆಹರು ಪಾರ್ಕ್‌ನಿಂದ ನಿಶಾತ್ ಬಾಗ್ ಮತ್ತು ದಾಲ್ ಸರೋವರದ ಚಾರ್ ಚಿನಾರಿವರೆಗಿನ ಪ್ರದೇಶದಲ್ಲಿ ಸಾಮಾನ್ಯ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಜಮ್ಮುವಿನ ಪರ್ಗ್ವಾಲ್ ಸೆಕ್ಟರ್‌ನಲ್ಲಿರುವ ಚೆನಾಬ್ ನದಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ.

1986ರ ನಂತರ ಮೊದಲ ಅಂತಾರಾಷ್ಟ್ರೀಯ ಕಾರ್ಯಕ್ರಮ: 1986ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಇಷ್ಟು ದೊಡ್ಡ ಮಟ್ಟದ ನಡೆಯುತ್ತಿರುವ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಕಾಶ್ಮೀರದಲ್ಲಿ ಸಹಜತೆಯ ಪರಿಸ್ಥಿತಿಯನ್ನು ಪ್ರತಿಪಾದಿಸುವ ದೃಷ್ಟಿಯಿಂದಲೂ ಈ ಸಭೆಯು ಮಹತ್ವದ್ದಾಗಿದೆ. ಈ ಸಮ್ಮೇಳನವನ್ನು ವಿಫಲಗೊಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು ರೂಪಿಸಲಾಗುತ್ತಿದೆ ಎಂದು ಭಾರತವು ಪಾಕಿಸ್ತಾನ ವಿರುದ್ಧ ದೂಷಿಸಿದೆ.

ಇದೇ ವೇಳೆ ಜಿ20 ಸಮಾವೇಶದ ವೇಳೆ ಭಯೋತ್ಪಾದಕ ಸಂಘಟನೆಗಳು ಶ್ರೀನಗರ ಮಾತ್ರವಲ್ಲದೆ ರಾಜ್ಯದ ಇತರ ಭಾಗಗಳಲ್ಲಿಯೂ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿವೆ. ಇದರ ನಡುವೆ ಗುಲ್ಮಾರ್ಗ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಲು ರೂಪಿಸಲಾಗಿದ್ದ ಯೋಜನೆಯನ್ನು ಭದ್ರತಾ ಸಂಸ್ಥೆಗಳು ವಿಫಲಗೊಳಿಸಿವೆ. ಇಡೀ ರಾಜ್ಯದಲ್ಲಿ ಭದ್ರತಾ ಪಡೆಗಳನ್ನು ಅಲರ್ಟ್ ಮಾಡಲಾಗಿದೆ. ಸಮ್ಮೇಳನದ ಸ್ಥಳದಲ್ಲಿ ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಸೇನೆಯ ಪ್ಯಾರಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ.

ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಆರ್ಮಿ ಪ್ಯಾರಾ ಕಮಾಂಡೋಗಳ ಜೊತೆಗೆ ಪೊಲೀಸರ ಎಸ್‌ಒಜಿ ಸ್ಕ್ವಾಡ್ ಸಮ್ಮೇಳನದ ಸ್ಥಳ ಮತ್ತು ವಿದೇಶಿ ಅತಿಥಿಗಳು ಕಾಶ್ಮೀರದಲ್ಲಿ ತಂಗುವ ಅಥವಾ ಭೇಟಿ ನೀಡುವ ಎಲ್ಲ ಸ್ಥಳಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಶ್ರೀನಗರ ವಿಮಾನ ನಿಲ್ದಾಣದಿಂದ ಎಸ್‌ಕೆಐಸಿಸಿ ಮತ್ತು ಫೋರ್‌ಶೋರ್ ರಸ್ತೆಯವರೆಗಿನ ರಸ್ತೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯ ವಿಶೇಷ ತುಕಡಿಗಳು ನಿಯೋಜಿಸಿದ್ದು, ನಿರಂತರವಾಗಿ ಸ್ನಿಫರ್ ಡಾಗ್‌ಗಳು ಮತ್ತು ಸ್ಫೋಟಕ ಪತ್ತೆ ಸಂವೇದಕಗಳೊಂದಿಗೆ ತಪಾಸಣೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಶ್ರೀನಗರದಲ್ಲಿ ಮೇ 22 ರಿಂದ 24ರವರೆಗೆ ಜಿ20 ಸಭೆ: ಭದ್ರತೆಗೆ ಕಮಾಂಡೋಗಳ ನಿಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.