ETV Bharat / bharat

ಮಿಚೌಂಗ್ ಚಂಡಮಾರುತ: ಚೆನ್ನೈನಲ್ಲಿ ಭಾರತೀಯ ವಾಯುಪಡೆಯಿಂದ ಪರಿಹಾರ ಕಾರ್ಯಾಚರಣೆ ಮುಂದುವರಿಕೆ

author img

By ETV Bharat Karnataka Team

Published : Dec 7, 2023, 7:29 AM IST

ಮಿಚೌಂಗ್ ಚಂಡಮಾರುತ
ಮಿಚೌಂಗ್ ಚಂಡಮಾರುತ

ಮಿಚೌಂಗ್ ಚಂಡಮಾರುತದಿಂದ ತಮಿಳುನಾಡಿನ ಚೆನ್ನೈನಲ್ಲಿ ಉಂಟಾದ ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಸಂಕಷ್ಟದಲ್ಲಿರುವವರ ರಕ್ಷಣಾ ಕಾರ್ಯಾಚರಣೆಯನ್ನು ಭಾರತೀಯ ವಾಯುಪಡೆ ಮುಂದುವರಿಸಿದೆ.

ಚೆನ್ನೈ (ತಮಿಳುನಾಡು): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ತಮಿಳುನಾಡು, ಆಂಧ್ರಪ್ರದೇಶದಲ್ಲಿ ರುದ್ರನರ್ತನ ತೋರಿದ ಮಿಚೌಂಗ್ ಚಂಡಮಾರುತ ಸದ್ಯ ಶಾಂತವಾಗಿದೆ. ಆದರೆ, ಅದು ಸೃಷ್ಟಿಸಿದ ಅನಾಹುತಗಳಿಂದ ಮಾತ್ರ ಜನರು ಚೇತರಿಸಿಕೊಂಡಿಲ್ಲ. ಭಾರಿ ಮಳೆಯಿಂದಾಗಿ ಚೆನ್ನೈ ಸೇರಿದಂತೆ ವಿವಿಧ ನಗರಗಳ ಪ್ರದೇಶಗಳು ಜಲಾವೃತವಾಗಿವೆ. ಭಾರತೀಯ ವಾಯುಪಡೆಯ ರಕ್ಷಣಾ ಕಾರ್ಯಚರಣೆ ಇನ್ನೂ ಮುಂದುವರೆದಿದೆ.

ಚಂಡಮಾರುತ ಸುರಿಸಿದ ಭಾರಿ ಮಳೆಗೆ ಚೆನ್ನೈನ ಪಶ್ಚಿಮ ತಾಂಬರಂ, ಮುಡಿಚುರ್, ವೆಲಚೇರಿ ಮತ್ತು ಪಲ್ಲಿಕರನೈ ಪ್ರದೇಶಗಳು ಭಾರಿ ಹಾನಿಗೀಡಾಗಿವೆ. ಸರ್ಕಾರ ಮತ್ತು ವಾಯುಪಡೆಯ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ. ಪರಿಹಾರ ಸಾಮಗ್ರಿಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಚೇತಕ್ ಹೆಲಿಕಾಪ್ಟರ್‌ಗಳ ಮೂಲಕ ವಾಯುಪಡೆ ಸಿಬ್ಬಂದಿ ಜನರ ರಕ್ಷಣೆ ಮಾಡುತ್ತಿದ್ದಾರೆ. ತಾಂಬರಂ ಏರ್ ಫೋರ್ಸ್ ಸ್ಟೇಷನ್ ಚೆನ್ನೈನ ನೆರೆಪೀಡಿತ ಪ್ರದೇಶಗಳಿಗೆ ಅಗತ್ಯ ಸಾಮಗ್ರಿಗಳ ಸರಬರಾಜು ಮಾಡಿದೆ. ಸರಿಸುಮಾರು 400 ಕೆ.ಜಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದರು.

ಆಹಾರ ಪದಾರ್ಥಗಳ ದರ ದುಪ್ಪಟ್ಟು: ಮಿಚೌಂಗ್​ ಚಂಡಮಾರುತದ ಪ್ರಭಾವದಿಂದ ನಗರವು ತತ್ತರಿಸಿರುವ ಕಾರಣ ಭಾರತೀಯ ನೌಕಾಪಡೆಯು ಚೆನ್ನೈನ ಪಲ್ಲಿಕರನೈ ಮತ್ತು ತೊರೈಪಕ್ಕಂ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಗಳ್ನು ನಡೆಸುತ್ತಿದೆ. ಆಹಾರ ಪದಾರ್ಥಗಳಾದ ಹಾಲು, ನೀರು, ಬ್ರೆಡ್, ಬಿಸ್ಕೆಟ್ ಮತ್ತು ದಿನಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಅಂಗಡಿಗಳಲ್ಲಿ ಇವುಗಳ ದರ ದುಪ್ಪಟ್ಟಾಗಿದೆ ಎಂದು ಚೆನ್ನೈನ ಚೂಲೈಮೇಡು ಎಂಬಲ್ಲಿ ಮಳೆ ನೀರಿನಲ್ಲಿ ಸಿಲುಕಿದ ಸ್ಥಳೀಯರು ಹೇಳಿದರು.

ಸ್ಥಳೀಯ ಸಂಸ್ಥೆಗಳು ಮಳೆ ಮತ್ತು ಪ್ರವಾಹವನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿವೆ. ಜನರನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ ಎಂದು ಮಹಿಳಾ ಹೋರಾಟಗಾರ್ತಿ, ವಕೀಲೆಯಾಗಿರುವ ಸಿಧಾ ರಾಮಲಿಂಗಂ ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರದೇಶದಲ್ಲಿ ಎರಡು ನೀರು ಸಂಗ್ರಹಣಾ ಮೂಲಗಳಿದ್ದವು. ಅವುಗಳನ್ನು ಒತ್ತುವರಿ ಮಾಡಲಾಗಿದೆ. ಇದರಿಂದ ಈ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ. ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರದ ವಿರುದ್ಧ ಸ್ವಪಕ್ಷೀಯ ಸಂಸದ ಬೇಸರ: ಎಐಎಡಿಎಂಕೆ ಸಂಸದ ಪಿ.ರವೀಂದ್ರನಾಥ್, ಮಿಚೌಂಗ್​ ಚಂಡಮಾರುತದಿಂದಾಗಿ 40 ವರ್ಷಗಳ ನಂತರ ಚೆನ್ನೈ ಇಷ್ಟು ದೊಡ್ಡ ನಷ್ಟ ಅನುಭವಿಸಿದೆ. ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತಮಿಳು ಜನರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ನೆರವು ಮತ್ತು ಧನಸಹಾಯವನ್ನು ನೀಡುವಂತೆ ನಾನು ವಿನಂತಿಸುತ್ತೇನೆ. ರಾಜ್ಯ ಸರ್ಕಾರದ ಬಗ್ಗೆ ಕಾರ್ಯಾಚರಣೆಯ ಬಗ್ಗೆ ನನಗೆ ತುಸು ಅಸಮಾಧಾನವಿದೆ. ಅವರು ಜನರನ್ನು ಉಳಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಬುಧವಾರ ಮಿಚೌಂಗ್​ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳನ್ನು ಅವಲೋಕಿಸಿದರು. ಚೆನ್ನೈನಲ್ಲಿ ಮಳೆ ಪೀಡಿತ ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆಗೆ ಸೂಚಿಸಿದರು. ಚೆನ್ನೈನ ಉಪನಗರಗಳಲ್ಲಿ ಮಳೆ ನೀರು ನುಗ್ಗಿ ತೀವ್ರ ಸಂಕಷ್ಟ ಉಂಟಾಗಿದೆ. ಎಲ್ಲರಿಗೂ ಆಹಾರ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಲು ಅನೇಕ ಜನರು ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸಲಿದೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಇಳಿದ ಮಿಚೌಂಗ್​ ಅಬ್ಬರ: 2015ರ ಬಳಿಕ ಭೀಕರ ಮಳೆ ಕಂಡ ತಮಿಳುನಾಡು, ವಿಮಾನ ಸೇವೆ ಪುನಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.