ETV Bharat / bharat

ಛತ್ತೀಸ್​ಗಢ ಚುನಾವಣೆ: ನಕ್ಸಲ್​ ಪೀಡಿತ 20 ಕ್ಷೇತ್ರಗಳ ಮೇಲೆ ಕಾಂಗ್ರೆಸ್​ ಕಣ್ಣು, ಕಾರ್ಯಕರ್ತರಿಗೆ ಹೊಸ ಟಾಸ್ಕ್​!

author img

By ETV Bharat Karnataka Team

Published : Nov 6, 2023, 5:21 PM IST

ಛತ್ತೀಸ್​ಗಢ ಚುನಾವಣೆ
ಛತ್ತೀಸ್​ಗಢ ಚುನಾವಣೆ

ಛತ್ತೀಸ್​ಗಢ ವಿಧಾನಸಭೆಗೆ ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ನಕ್ಸಲ್​ ಪೀಡಿತ ಪ್ರದೇಶಗಳ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾನ ಆಗುವಂತೆ ನೋಡಿಕೊಳ್ಳಲು ಕಾಂಗ್ರೆಸ್​ ತನ್ನ ಕಾರ್ಯಕರ್ತರಿಗೆ ಟಾಸ್ಕ್​ ನೀಡಿದೆ.

ನವದೆಹಲಿ: ಛತ್ತೀಸ್‌ಗಢ ವಿಧಾನಸಭೆಯ 20 ಸ್ಥಾನಗಳಿಗೆ ನಾಳೆ (ನವೆಂಬರ್​ 7) ಮೊದಲ ಹಂತದ ಚುನಾವಣೆ ನಡೆಯಲಿದ್ದು, ಒಂದು ದಿನ ಮುಂಚಿತವಾಗಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರಗಳನ್ನು ಪರಿಶೀಲಿಸಿದೆ. ಬೂತ್ ಮಟ್ಟದ ತಂಡಗಳು ಗರಿಷ್ಠ ಮತದಾನವಾಗುವಂತೆ ನೋಡಿಕೊಳ್ಳಬೇಕು. ನಕ್ಸಲ್​​ ಪೀಡಿತ ಬಸ್ತಾರ್ ಪ್ರದೇಶದಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಪೈಕಿ 11 ರಲ್ಲಿ ಹಾಲಿ ಕಾಂಗ್ರೆಸ್​ ಶಾಸಕರಿದ್ದು, ಈ ಸಂಖ್ಯೆ ಹೆಚ್ಚಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದೆ.

ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ವಾರ್ ರೂಮ್‌ಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಪ್ರತಿಸ್ಪರ್ಧಿಗಳಿಂದ ಯಾವುದೇ ಅಡಚಣೆ ಉಂಟಾಗದಂತೆ ಎಚ್ಚರ ವಹಿಸಬೇಕು. ಮತದಾರರು ಕೇಂದ್ರಗಳಿಗೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ನೋಡಿಕೊಳ್ಳಿ ಎಂದು ಬೂತ್​​ಮಟ್ಟದ ಸಮಿತಿಗಳಿಗೆ ನಾಯಕರು ಟಾಸ್ಕ್​ ನೀಡಿದ್ದಾರೆ.

ಮಾವೋವಾದಿ ಪೀಡಿತ ಬಸ್ತಾರ್‌ ಪ್ರದೇಶದಲ್ಲಿ ಕಾಂಗ್ರೆಸ್‌ 6 ಸ್ಥಾನಗಳನ್ನು ಜಯಿಸಿದ ಬಳಿಕ ಇಲ್ಲಿ ಕ್ರಿಯಾ ಯೋಜನೆ ಜಾರಿಗೆ ತರಲಾಯಿತು. ಸ್ಥಳೀಯ ಬೂತ್ ಮಟ್ಟದ ತಂಡಗಳನ್ನು ರೂಪಿಸಲಾಯಿತು. ತರಬೇತಿ ನೀಡುವುದರ ಮೂಲಕ ಮತದಾನಕ್ಕೆ ಸಿದ್ಧತೆ ಕೈಗೊಳ್ಳಲಾಯಿತು. ಈ ಪ್ರದೇಶದಲ್ಲಿ ಸರ್ಕಾರದದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಛತ್ತೀಸ್‌ಗಢದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಸಪ್ತಗಿರಿ ಉಲಕಾ 'ಈಟಿವಿ ಭಾರತ್‌'ಗೆ ತಿಳಿಸಿದರು.

ಆಡಳಿತ ವಿರೋಧಿ ಸಮೀಕ್ಷೆ: ಚುನಾವಣೆಗೂ ಮೊದಲು ಈ ಪ್ರದೇಶದಲ್ಲಿ ಪಕ್ಷದ ಶಾಸಕರ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಅರಿಯಲು ಸಮೀಕ್ಷೆ ನಡೆಸಲಾಗಿದೆ. ಜನರ ಅಭಿಪ್ರಾಯದ ಅನುಸಾರ ಸರ್ಕಾರದ ವಿರುದ್ಧ ಅಸಮಾಧಾನ ಇಲ್ಲದಿದ್ದರೂ, ಸ್ಥಳೀಯ ಶಾಸಕರ ಮೇಲೆ ಬೇಸರ ವ್ಯಕ್ತವಾಗಿತ್ತು. ಜನರ ವಿರೋಧಕ್ಕೆ ಒಳಗಾದ ಜನಪ್ರತಿನಿಧಿಗಳನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕಲಾಗಿದೆ.

ಹಿಂದಿನ ಸಿಎಂ ರಮಣ್ ಸಿಂಗ್ ಸರ್ಕಾರದ ಅವಧಿಯಲ್ಲಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದ 1,700 ಆದಿವಾಸಿಗಳನ್ನು ಬಿಡುಗಡೆ ಮಾಡಿದ್ದೇವೆ. ಬೀಡಿ ತಯಾರಿಕೆಯಲ್ಲಿ ಬಳಸುವ ಟೆಂಡು ಎಲೆಗಳನ್ನು ಕೀಳಲು ಉತ್ತಮ ಸಂಭಾವನೆಯನ್ನು ನೀಡುವುದರ ಜೊತೆಗೆ ಆದಿವಾಸಿಗಳಿಗೆ ಭೂಮಿಯ ಹಕ್ಕನ್ನು ನೀಡಲಾಗಿದೆ. ಇಲ್ಲಿ ಶಾಲೆಗಳು, ಬ್ಯಾಂಕ್‌ಗಳು, ರಸ್ತೆಗಳು ಮತ್ತು ಆಸ್ಪತ್ರೆಗಳು ಬೇಕಾಗಿವೆ. ಅದನ್ನು ನಮ್ಮ ಸರ್ಕಾರ ಮಾಡಿಕೊಡಲಿದೆ ಎಂದು ಉಲಕಾ ಹೇಳಿದರು.

ಈ ಬಾರಿಯ ಚುನಾವಣೆಯಲ್ಲೂ ಬಸ್ತಾರ್ ಪ್ರದೇಶದಲ್ಲಿ 11 ಸ್ಥಾನಗಳನ್ನು ಉಳಿಸಿಕೊಳ್ಳುವ ಭರವಸೆ ಇದೆ. ಮೊದಲ ಹಂತದ ಚುನಾವಣೆಯ ಕಾವು ಎರಡನೇ ಹಂತದ ಕ್ಷೇತ್ರಗಳಲ್ಲೂ ಪರಿಣಾಮ ಬೀರಲಿದೆ. ಮತ್ತೆ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಉಲಕಾ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹಠಾತ್​ ತಾಂತ್ರಿಕ ದೋಷ: ಸಿಎಂ ಕೆಸಿಆರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​​ ತುರ್ತು ಭೂಸ್ಪರ್ಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.