ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕೊರೊನಾ ವೈರಸ್ ಲಾಕ್ಡೌನ್ ನಿರ್ಬಂಧಗಳು ಜಿಲ್ಲಾದ್ಯಂತ ಮೇ 20 ರವರೆಗೆ ಮುಂದುವರಿಯಲಿವೆ ಎಂದು ಶ್ರೀನಗರ ಜಿಲ್ಲಾಡಳಿತ ಸೋಮವಾರ ತಿಳಿಸಿದೆ.
"ಪ್ರಸ್ತುತ ಆರೋಗ್ಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನಸಂಚಾರ, ವ್ಯಾಪಾರ ವಹಿವಾಟು ಸೇರಿದಂತೆ ಇತರ ಎಲ್ಲ ಸಾರ್ವಜನಿಕ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿಯಲ್ಲಿರುತ್ತವೆ" ಎಂದು ಜಿಲ್ಲಾ ಅಭಿವೃದ್ಧಿ ಆಯುಕ್ತ ಡಾ. ಶಾಹಿದ್ ಇಕ್ಬಾಲ್ ಈಟಿವಿ ಭಾರತ್ಗೆ ತಿಳಿಸಿದರು.
"ಜಿಲ್ಲೆಯ ಬಹುತೇಕ ಪ್ರದೇಶ ಕಂಟೈನ್ಮೆಂಟ್ ಅಥವಾ ಕೆಂಪು ವಲಯವಾಗಿದೆ. ಆದಾಗ್ಯೂ ಈ ಹಿಂದಿನಂತೆ ಅಗತ್ಯ ವಸ್ತುಗಳ ಸರಕು ಪೂರೈಕೆಗೆ ವಿನಾಯಿತಿ ನೀಡಲಾಗಿದೆ. ಅಗತ್ಯ ವಸ್ತುಗಳ ಸೇವೆಗಾಗಿ ಪಾಸ್ಗಳನ್ನು ನೀಡಲಾಗಿದ್ದು, ಪಾಸ್ಗಳ ದುರುಪಯೋಗ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಮಾಹಿತಿ ನೀಡಿದರು.
ಜಮ್ಮು ಮತ್ತು ಕಾಶ್ಮೀರದ 13 ಜಿಲ್ಲೆಗಳನ್ನು ಈಗಾಗಲೇ ಕೆಂಪು ವಲಯಗಳಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಬರುವ ದಿನಗಳಲ್ಲಿ ಕೋವಿಡ್-19 ಪ್ರಕರಣಗಳನ್ನು ಆಧರಿಸಿ ವಲಯಗಳನ್ನು ಮರುವರ್ಗೀಕರಣ ಮಾಡಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.