ETV Bharat / bharat

370 ವಿಧಿ ರದ್ದಾಗಿ 365 ದಿನ ; ಜಮ್ಮು-ಕಾಶ್ಮೀರದಲ್ಲಾದ ಬದಲಾವಣೆ ಏನು?, ಜನ ಹೇಳೋದೇನು?

author img

By

Published : Aug 5, 2020, 8:41 AM IST

Jammu And Kashmir
ಜಮ್ಮು ಮತ್ತು ಕಾಶ್ಮೀರ

ಭಾರತವನ್ನು ನಂಬಿದ್ದ ಮತ್ತು ದೇಶವು ತಮ್ಮೊಂದಿಗೆ ನಿಂತಿದೆ ಎಂಬ ನಂಬಿಕೆ ಹೊಂದಿದ್ದ ಇಲ್ಲಿನ ಜನರು ವಿಧಿ ರದ್ದುಪಡಿಸಿದ ನಂತರ ಸರ್ಕಾರದ ಮೇಲಿನ ಎಲ್ಲಾ ವಿಶ್ವಾಸ ಕಳೆದುಕೊಂಡಿದ್ದಾರೆ. ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವರು ಸಂತೋಷವಾಗಿದ್ದರು. ಆದರೆ, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಲ್ಲಿ ಹೆಚ್ಚಿನವರು 370ನೇ ವಿಧಿ ರದ್ದುಗೊಳಿಸಿದ ಬಳಿಕ ಕೋಪಿಗೊಂಡಿದ್ದಾರಂತೆ..

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಒಂದು ವರ್ಷದ ಹಿಂದೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡು ಇಂದಿಗೆ ಒಂದು ವರ್ಷ ಸಂದಿದೆ. ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಇಬ್ಭಾಗ ಮಾಡಿದ ತಮ್ಮ ಐತಿಹಾಸಿಕ ನಿರ್ಧಾರದ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ಆಡಳಿತಾರೂಢ ಬಿಜೆಪಿ ಯೋಜಿಸುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಇಲ್ಲಿನ ಭಗಶಃ ಎಲ್ಲಾ ಪ್ರದೇಶಗಳ ಜನ ಇನ್ನೂ ಕೂಡ ಗೊಂದಲ ಹಾಗೂ ಭಯದಲ್ಲೇ ಬದುಕುತ್ತಿದ್ದಾರೆ ಎಂದು ಅನೇಕ ತಜ್ಞರು ಹೇಳುತ್ತಾರೆ.

ಸಂವಿಧಾನದ 370ನೇ ವಿಧಿ ರದ್ದತಿ ಕುರಿತು ಈಟಿವಿ ಭಾರತವು ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಪ್ರದೇಶಗಳ ಸ್ಥಳೀಯರೊಂದಿಗೆ ಮಾತನಾಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ತೆಗೆದು ಹಾಕಿದ ವಿಚಾರವಾಗಿ ಎಲ್ಲಾ ಬೆಳವಣಿಗೆಗಳನ್ನು ನಿಕಟವಾಗಿ ಅರಿತಿರುವ ತಜ್ಞರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದೆ.

ಹೂಡಿಕೆ ಆಕರ್ಷಣೆಗೆ ತಂತ್ರ : ಕಳೆದ ವರ್ಷದ ನವೆಂಬರ್ ತಿಂಗಳ ಮೊದಲ 15 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ ಹೂಡಿಕೆದಾರರನ್ನು ಆಕರ್ಷಿಸಲು ಲ್ಯಾಂಡ್​ ಬ್ಯಾಂಕಿಂಗ್​ ರಚಿಸಲು ಪ್ರಾರಂಭಿಸಿತು. ಕೇಂದ್ರ ಸರ್ಕಾರವು 370ನೇ ವಿಧಿ ರದ್ದುಪಡಿಸಿದ ಆಗಸ್ಟ್ 5ರ ನಿರ್ಧಾರದ ಕೇವಲ ನಾಲ್ಕು ತಿಂಗಳ ಅಂತರದಲ್ಲೇ ಬಂದ ಈ ಕ್ರಮದಿಂದ, ಮತ್ತೊಂದು 'ದೊಡ್ಡ ಅಭಿವೃದ್ಧಿ' ಶೀಘ್ರದಲ್ಲೇ ಸಂಭವಿಸಬಹುದು ಎಂಬ ವದಂತಿ ಬಂದವು. ಆದರೆ, ಮುಂಬರುವ ಜಮ್ಮು ಮತ್ತು ಕಾಶ್ಮೀರ ಜಾಗತಿಕ ಹೂಡಿಕೆದಾರರ ಶೃಂಗಸಭೆ-2020ರ ಹಿನ್ನೆಲೆ ಇದನ್ನು ಮಾಡಲಾಗುತ್ತದೆ ಎಂದು ಇಲ್ಲಿನ ಆಡಳಿತವು ಸ್ಪಷ್ಟಪಡಿಸಿದೆ.

ಜಮ್ಮು ಮತ್ತು ಕಾಶ್ಮೀರ ಜಾಗತಿಕ ಹೂಡಿಕೆದಾರರ ಶೃಂಗಸಭೆ -2020ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಅಲ್ಲಿಗೆ ಬರುವ ಹೂಡಿಕೆದಾರರನ್ನು ಆಕರ್ಷಿಸಲು ಜಮ್ಮು ಮತ್ತು ಕಾಶ್ಮೀರ ಎರಡೂ ಪ್ರದೇಶಗಳಲ್ಲಿ 5,000 ಕಣಿವೆ ಪ್ರದೇಶದಲ್ಲಿ ಅಂದರೆ ಅಂದಾಜು 624 ಎಕರೆ ಜಾಗದಲ್ಲಿ ಲ್ಯಾಂಡ್​ ಬ್ಯಾಂಕುಗಳ ರಚನೆಗಾಗಿ ನೋಡುತ್ತಿದ್ದೇವೆ. ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಬಳಸಬಹುದಾದ ಭೂಮಿಯನ್ನು ಗುರುತಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ್ ಕುಮಾರ್ ಹೇಳಿದ್ದಾರೆ.

ಈ ಶೃಂಗಸಭೆಯು ಜಮ್ಮು ಮತ್ತು ಕಾಶ್ಮೀರವನ್ನು ಕೈಗಾರಿಕಾ ಕೇಂದ್ರವಾಗಿ ಪರಿವರ್ತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಕುಮಾರ್ ಹೇಳಿದ್ದಾರೆ. ಅಲ್ಲದೆ ಇದು ವ್ಯವಹಾರ ಸ್ನೇಹಿ ನೀತಿಗಳನ್ನು ಪ್ರಸ್ತುತಪಡಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಜಮ್ಮು ಮತ್ತು ಕಾಶ್ಮೀರದ ಆಂತರಿಕ ಸಾಮರ್ಥ್ಯ, ಅಭಿವೃದ್ಧಿ ಮತ್ತು ಉದ್ಯೋಗದ ಆಕಾಂಕ್ಷೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಕಳೆದ ಏಪ್ರಿಲ್​ ತಿಂಗಳಿನಲ್ಲಿ ಶೃಂಗಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಸದ್ಯ ಸರ್ಕಾರದ ಮಾಹಿತಿ ಪ್ರಕಾರ ಈ ಶೃಂಗಸಭೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ. ಯಾಕೆಂದ್ರೆ, ಕೊರೊನಾ ವೈರಸ್ ಪರಿಸ್ಥಿತಿ ಸುಧಾರಿಸುವವರೆಗೆ ಮತ್ತು ಕೆಲ ವಿಷಯಗಳು ತಹಬದಿಗೆ ಬರುವವರೆಗೆ ಇದನ್ನು ಮುಂದೂಡಲಾಗುತ್ತದೆ. ಆದರೂ ವ್ಯವಹಾರ ಸಂಬಂಧಿ ಚಟುವಟಿಕೆಗಳನ್ನು ಬಲಪಡಿಸಲು ಈ ಅವಧಿಯನ್ನು ಬಳಸಿಕೊಳ್ಳಲು ಇಲ್ಲಿನ ಆಡಳಿತ ನಿರ್ಧರಿಸಿದೆ.

ಡೊಮಿಸಿಲ್ ಆ್ಯಕ್ಟ್(ವಸತಿ ಕಾಯ್ದೆ)..

ಈ ವರ್ಷದ ಮಾರ್ಚ್ 31ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ರಾಜ್ಯ ಕಾನೂನುಗಳ ರೂಪಾಂತರ) ಆದೇಶ, 2020ರ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ನಿವಾಸ ಹೊಂದುವ ಹೊಸ ವ್ಯಾಖ್ಯಾನವನ್ನು ಪರಿಚಯಿಸಿತು. ಈ ಹೊಸ ಕಾಯ್ದೆಯು ಎಲ್ಲಾ ಭಾರತೀಯ ನಾಗರಿಕರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಆದರೆ, ಅರ್ಜಿ ಸಲ್ಲಿಸಲು ಬಯಸುವವರು ಕೆಲ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.

2019ರವರೆಗೆ ಜಮ್ಮು ಮತ್ತು ಕಾಶ್ಮೀರವು ಆರ್ಟಿಕಲ್ 370 ಮತ್ತು 35ಎ ಸಾಂವಿಧಾನಿಕ ನಿಬಂಧನೆಗಳ ಅಡಿ ವಿಶೇಷ ಸ್ಥಾನಮಾನ ಪಡೆದಿತ್ತು. ಇದರ ಪ್ರಕಾರ ಭಾರತದ ಉಳಿದ ಭಾಗಗಳ ಯಾರೊಬ್ಬರೂ, ಅಲ್ಲಿ ಖಾಯಂ ವಾಸ್ತವ್ಯ ಹಕ್ಕು ಪಡೆಯಲು ಅವಕಾಶವಿರಲಿಲ್ಲ. ಅಲ್ಲದೆ ಹೊರಗಿನವರಿಗೆ ಅಲ್ಲಿನ ಸ್ಥಳೀಯ ಉದ್ಯೋಗಕ್ಕಾಗಿ ಅಥವಾ ಅಲ್ಲಿನ ಸ್ವಂತ ಆಸ್ತಿಗೆ ಅರ್ಜಿ ಸಲ್ಲಿಸಲು ಕೂಡ ಸಾಧ್ಯವಿರಲಿಲ್ಲ.

ಹೊಸ ನಿಯಮವು ಕೇವಲ ನಾನ್​ ಗೆಜೆಟೆಡ್​ ವರ್ಗದ ನಾಲ್ಕು ಉದ್ಯೋಗಗಳನ್ನು ಜಮ್ಮು ಮತ್ತು ಕಾಶ್ಮೀರ ನಿವಾಸಿಗಳಿಗೆ ಕಾಯ್ದಿರಿಸಿದೆ. ಇಲ್ಲಿ ನೆಲೆಯೂರಲು ಅರ್ಜಿದಾರನಾಗಿ ಅರ್ಹತೆ ಪಡೆಯಲು ಅವರು ಪೂರೈಸಬೇಕಾದ ಕೆಲವು ಷರತ್ತುಗಳನ್ನು ಇದು ಪಟ್ಟಿ ಮಾಡುತ್ತದೆ. ಅರ್ಜಿದಾರರು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 15 ವರ್ಷಗಳಿಂದ ವಾಸಿಸುತ್ತಿರಬೇಕು ಅಥವಾ ರಾಜ್ಯದಲ್ಲಿ ಏಳು ವರ್ಷಗಳ ಕಾಲ ಅಧ್ಯಯನ ಮಾಡಿ 10ನೇ ತರಗತಿ ಅಥವಾ 12ನೇ ತರಗತಿ ಪರೀಕ್ಷೆಗೆ ಹಾಜರಾಗಿರಬೇಕು.

ಕೇಂದ್ರ ಸರ್ಕಾರಿ ಅಧಿಕಾರಿಗಳ ಮಕ್ಕಳು (ಸೇನೆ, ಅರೆಸೈನಿಕ ಪಡೆಗಳು, ಐಎಎಸ್, ಐಪಿಎಸ್) ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಬ್ಯಾಂಕುಗಳು, ಕೇಂದ್ರ ವಿಶ್ವವಿದ್ಯಾಲಯಗಳ ನೌಕರರು, ಗೆಜೆಟೆಡ್ ಮತ್ತು ನಾನ್​ ಗೆಜೆಟೆಡ್​ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇವುಗಳಲ್ಲಿ ರಾಜ್ಯದ ಹೊರಗೆ ಕೆಲಸ ಮಾಡುವವರು ಕೂಡ ಸೇರುತ್ತಾರೆ.

ಪರಿಹಾರ ಮತ್ತು ಪುನರ್ವಸತಿ ಆಯುಕ್ತರಿಂದ ನೋಂದಾಯಿಸಿದ ವಲಸಿಗರು ಮೇಲೆ ತಿಳಿಸಿದ ಅವಶ್ಯಕತೆಗಳನ್ನು ಪೂರೈಸುವ ಅಗತ್ಯವಿಲ್ಲ. ಅವರು ಸುಲಭವಾಗಿ ನಿವಾಸ ಪ್ರಮಾಣ ಪತ್ರಕ್ಕೆ ಅರ್ಹರಾಗಿರುತ್ತಾರೆ. ಸರ್ಕಾರದ ಡೊಮಿಸಿಲ್ ಆ್ಯಕ್ಟ್ ನಿರ್ಧಾರವು ಕಣಿವೆ ನಾಡಿನ ಪ್ರಮುಖ ರಾಜಕೀಯ ನಾಯಕರಿಗೆ ಒಪ್ಪಿಗೆಯಾಗಿಲ್ಲ. ಹೀಗಾಗಿ ಇದರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಕಾಂಗ್ರೆಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಪೀಪಲ್ಸ್ ಕಾನ್ಫರೆನ್ಸ್, ಪೀಪಲ್ಸ್ ಮೂವ್​ಮೆಂಟ್ ಹಾಗೂ ಅಪ್ನಿ ಪಾರ್ಟಿ ಜಂಟಿಯಾಗಿ ಈ ಕ್ರಮದ ವಿರುದ್ಧ ಅಸಮಾಧಾನ ಹೊರಹಾಕಿವೆ.

'ಶಸ್ತ್ರಸಜ್ಜಿತ ಪಡೆಗಳಿಗೆ ಸ್ಟ್ರಾಟೆಜಿಕ್ ಪ್ರದೇಶಗಳು': ಈ ವರ್ಷದ ಜುಲೈ 17 ರಂದು ಜಮ್ಮು ಮತ್ತು ಕಾಶ್ಮೀರ ಆಡಳಿತವು ಕೇಂದ್ರಾಡಳಿತ ಪ್ರದೇಶದೊಳಗಿನ ಕೆಲ ಸ್ಥಳಗಳನ್ನು ಸಶಸ್ತ್ರ ಪಡೆಗಳ ನಿರ್ಮಾಣಕ್ಕೆ ಅನುಕೂಲವಾಗುವಂತೆ 'ಕಾರ್ಯತಂತ್ರದ ಪ್ರದೇಶಗಳು' ಎಂದು ಘೋಷಿಸಿತು.

ಈ ಕ್ರಮವನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ಮಂಡಳಿ ಲೆಫ್ಟಿನೆಂಟ್ ಗವರ್ನರ್ ಜಿಸಿ ಮುರ್ಮು ಅವರ ಅಧ್ಯಕ್ಷತೆಯಲ್ಲಿ ಅಂಗೀಕರಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಕಾರ್ಯತಂತ್ರದ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಡೆಸಲು ವಿಶೇಷ ವಿತರಣೆಯನ್ನು ಒದಗಿಸಲು ಕಟ್ಟಡ ನಿರ್ಮಾಣ ನಿಯಂತ್ರಣ ಕಾಯ್ದೆ 1988 ಮತ್ತು ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆ 1970 ತಿದ್ದುಪಡಿ ಮಾಡುವ ಪ್ರಸ್ತಾಪಕ್ಕೆ ಆಡಳಿತ ಮಂಡಳಿ ಅನುಮತಿ ನೀಡಿತು ಎಂದು ಅದು ಹೇಳಿದೆ.

ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಪ್ರಸ್ತಾಪಿಸಿರುವ ತಿದ್ದುಪಡಿಗಳು ಸಶಸ್ತ್ರ ಪಡೆಗಳ ಅವಶ್ಯಕತೆಗೆ ಅನುಗುಣವಾಗಿ ಕೆಲವು ಪ್ರದೇಶಗಳನ್ನು ಕಾರ್ಯತಂತ್ರದ ಪ್ರದೇಶಗಳು ಎಂದು ತಿಳಿಸಲು ದಾರಿ ಮಾಡಿಕೊಡುತ್ತವೆ. ಅಲ್ಲದೆ ಅಂತಹ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಯ ನಿಯಂತ್ರಣವು ವಿಶೇಷವಾಗಿದೆ. ಕೆಲವು ಸ್ಥಳಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವರ ಭದ್ರತಾ ಅಗತ್ಯಗಳನ್ನು ಅಭಿವೃದ್ಧಿಯ ಆಕಾಂಕ್ಷೆಗಳೊಂದಿಗೆ ಸಮನ್ವಯಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ಹೇಳಿಕೆ ಹೇಳಿದೆ.

ಇಷ್ಟಾಗಿಯೂ ಪ್ರಮುಖ ರಾಜಕೀಯ ಪಕ್ಷಗಳು ಈ ಕ್ರಮವನ್ನು ಟೀಕಿಸಿವೆ. ಇಲ್ಲಿನ ನ್ಯಾಷನಲ್​ ಕಾನ್ಫರೆನ್ಸ್ ಪಕ್ಷವು​, ಈ ನಿರ್ಧಾರವು ಜಮ್ಮು ಮತ್ತು ಕಾಶ್ಮೀರವನ್ನು ಮಿಲಿಟರಿ ಸ್ಥಾಪನೆಯನ್ನಾಗಿ ಪರಿವರ್ತಿಸುವ ಮತ್ತು ನಾಗರಿಕ ಅಧಿಕಾರವನ್ನು ದುರ್ಬಲಗೊಳಿಸುವ ಗುರಿ ಹೊಂದಿದೆ ಎಂದು ಆರೋಪಿಸಿದೆ. ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ನಯೀಮ್ ಅಖ್ತರ್, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದಕ್ಕಿಂತ ಈ ನಿರ್ಧಾರವು ಭಯಾನಕವಾಗಿದೆ ಎಂದು ಹೇಳಿದ್ದಾರೆ. ಸ್ಮಶಾನಗಳಿಗೆ ಸಹ ನಮಗೆ ಸಾಕಷ್ಟು ಭೂಮಿ ಉಳಿದಿಲ್ಲ ಎಂದು ತೋರುತ್ತದೆ. ಇದರರ್ಥ ಜಮ್ಮು ಮತ್ತು ಕಾಶ್ಮೀರದ ಯಾವುದೇ ನಿವಾಸಿಗಳಿಗೆ ಸ್ಥಳೀಯ ಸರ್ಕಾರದ ಮೂಲ ಕಾರ್ಯಗಳನ್ನು ನಿರ್ಧರಿಸುವಲ್ಲಿ ಯಾವುದೇ ಅಧಿಕಾರವಿಲ್ಲ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಆಡಳಿತದ ಅಧಿಕೃತ ವಕ್ತಾರರು, ಈ ನಿರ್ಧಾರವು ಅಸ್ತಿತ್ವದಲ್ಲಿರುವ ಯಾವುದೇ ಕಾನೂನುಗಳಿಗೆ ಯಾವುದೇ ತೊಡಕುಂಟು ಮಾಡದ ಕಾರಣ ಈ ಟೀಕೆಗಳು ಆಧಾರರಹಿತವಾಗಿದೆ ಎಂದು ಹೇಳಿದ್ದಾರೆ.

ಇಲ್ಲಿನ ಪರಿಸ್ಥಿತಿ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಜಮ್ಮು ಮತ್ತು ಕಾಶ್ಮೀರದ ವಿಶೇಚ ಸ್ಥಾನಮಾನ ರದ್ದತಿ ಬಗ್ಗೆ ಸ್ಥಳೀಯರು ಇನ್ನೂ ಗೊಂದಲದಲ್ಲಿದ್ದಾರೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಆಡಳಿತವು ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ಅವರೆಲ್ಲರೂ ಗೊಂದಲಕ್ಕೊಳಗಾಗಿದ್ದಾರೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರದ ಸಂಪೂರ್ಣ ಪರಿಸ್ಥಿತಿಯನ್ನು ವಿಶ್ಲೇಷಿಸಿದ ಕೆಲ ತಜ್ಞರು ಈ ನಿರ್ಧಾರ ಏಕಪಕ್ಷೀಯ ಮತ್ತು ಅವಕಾಶವಾದಿ ಎಂದು ತಿಳಿಸಿದ್ದಾರೆ.

ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ರಿಯಾಝ್​ ಮಸ್ರೂರ್ ಪ್ರಕಾರ, ಸರ್ಕಾರ ತೆಗೆದುಕೊಂಡ ನಿರ್ಧಾರ ಏಕಪಕ್ಷೀಯ ಮತ್ತು ಪ್ರಜಾಪ್ರಭುತ್ವ ವಿರೋಧಿ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನುಗಳನ್ನು ರಚಿಸಲಾಗುತ್ತದೆ ಮತ್ತು ತಿದ್ದುಪಡಿ ಮಾಡಲಾಗುತ್ತದೆ. ಕಾನೂನುಗಳನ್ನು ಜಾರಿಗೊಳಿಸಿದಾಗ, ನಾಗರಿಕರು ಅದನ್ನು ಅನುಸರಿಸಬೇಕು. ಇಲ್ಲದಿದ್ದರೆ ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕಾಶ್ಮೀರದಲ್ಲಿ ಕಳೆದ ವರ್ಷ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಜನರು ದೂರು ನೀಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಚುನಾಯಿತ ಸರ್ಕಾರವಿಲ್ಲ. ಆಡಳಿತ ಮಂಡಳಿಯ ಬ್ಯಾನರ್ ಅಡಿಯಲ್ಲಿ ಎರಡು-ಮೂರು ಅಧಿಕಾರಿಗಳನ್ನು ಆಳ್ವಿಕೆ ಮಾಡಲು ನಿಯೋಜಿಸಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ನಾವು ಈ ನಿರ್ಧಾರಗಳನ್ನು ವಿರೋಧಿಸುತ್ತೇವೆ ಎಂದು ಮಸ್ರೂರ್ ಹೇಳುತ್ತಾರೆ.

ಈ ಎಲ್ಲಾ ನಿರ್ಧಾರಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳಬಹುದಿತ್ತು. ಹಾಗಿದ್ದರೆ ಜನಸಾಮಾನ್ಯರಲ್ಲಿ ಅಂತಹ ಕೋಪ ಮತ್ತು ಅಸಮಾಧಾನ ಇರುತ್ತಿರಲಿಲ್ಲ ಎಂದು ನಾನು ನಂಬುತ್ತೇನೆ. ಒಂದು ವೇಳೆ ಇಲ್ಲಿ ಪ್ರಾದೇಶಿಕ ರಾಜಕೀಯ ವ್ಯವಸ್ಥೆ ಸಕ್ರಿಯವಾಗಿದ್ದರೆ, ಇಂತಹ ಸನ್ನಿವೇಶ ಬರುತ್ತಿರಲಿಲ್ಲ. ಒಂದು ಕಾನೂನಿನ ಅನುಷ್ಠಾನಕ್ಕೆ ಮುಂಚಿತವಾಗಿ ಈ ವಿಷಯದ ಬಗ್ಗೆ ಅವರ ಪ್ರತಿಕ್ರಿಯೆ ತಿಳಿಯಬಹುದಿತ್ತು. ಹೀಗಾಗಿ ಇಂದು ನಾವು ನೋಡುತ್ತಿರುವ ಬದಲಾವಣೆಗಳು ಏಕಪಕ್ಷೀಯ ಮತ್ತು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿದೆ ಎಂದು ಮಸ್ರೂರ್ ಹೇಳುತ್ತಾರೆ.

ಇದೇ ರೀತಿಯ ಅಭಿಪ್ರಾಯಗಳನ್ನು ಪ್ರತಿಧ್ವನಿಸುತ್ತಾ ಮತ್ತೊಬ್ಬ ಪತ್ರಕರ್ತ ಫಿರ್ದೌಸ್ ಇಲ್ಲಾಹಿ, ಕಾಶ್ಮೀರಿಗಳ ಧ್ವನಿಯನ್ನು ಹತ್ತಿಕ್ಕಲು ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದರು.

370 ಮತ್ತು 35ಎ ವಿಧಿಗಳನ್ನು ರದ್ದುಪಡಿಸುವುದು ಸೇರಿದಂತೆ ಇಂತಹ ಎಲ್ಲಾ ನಿರ್ಧಾರಗಳನ್ನು ಜನರು ತಮ್ಮ ಮನೆಯೊಳಗೆ ಇರುವಂತೆ ನಿರ್ಬಂಧಿಸಿದಾಗ ತೆಗೆದುಕೊಳ್ಳಲಾಗಿದೆ. ಇದು ತಪ್ಪು. ಸರಿಯಾದ ಮಾರ್ಗವನ್ನು ಅನುಸರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಜೊತೆಗೆ ಚುನಾಯಿತ ಸರ್ಕಾರವು ಇಲ್ಲಿರಬೇಕಿತ್ತು ಎಂದು ಇಲ್ಲಾಹಿ ಹೇಳಿದರು. ಇಲ್ಲಿನ ಜನರು ಇನ್ನೂ ಗೊಂದಲದಲ್ಲಿದ್ದಾರೆ. ಜನರು ಭಯದಿಂದ ಬದುಕುತ್ತಿದ್ದಾರೆ ಮತ್ತು ಯಾರೂ ಸಹ ಈ ಬಗ್ಗೆ ಮಾತನಾಡಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಇನ್ನೊಬ್ಬ ಹಿರಿಯ ಪತ್ರಕರ್ತ ಹಯಾ ಜಾವೇದ್, 370 ಮತ್ತು 35 ಎ ರದ್ದುಗೊಳಿಸುವಿಕೆಯು ಭಾರತ ಮತ್ತು ಜಮ್ಮು ಕಾಶ್ಮೀರದ ನಡುವಿನ ಸಂಬಂಧದಲ್ಲಿ ಬಿರುಕು ಉಂಟುಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತವನ್ನು ನಂಬಿದ್ದ ಮತ್ತು ದೇಶವು ತಮ್ಮೊಂದಿಗೆ ನಿಂತಿದೆ ಎಂಬ ನಂಬಿಕೆಯನ್ನು ಹೊಂದಿದ್ದ ಇಲ್ಲಿನ ಜನರು ವಿಧಿ ರದ್ದುಪಡಿಸಿದ ನಂತರ ಸರ್ಕಾರದ ಮೇಲಿನ ಎಲ್ಲಾ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವರು ಸಂತೋಷವಾಗಿದ್ದರು. ಆದರೆ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಲ್ಲಿ ಹೆಚ್ಚಿನವರು ಇದಾದ ಬಳಿಕ ಕೋಪಗೊಂಡಿದ್ದಾರೆ. ಸರ್ಕಾರದ ಈ ನಿರ್ಧಾರದ ನಂತರ ನಿರಾಶೆಗೊಂಡಿದ್ದಾರೆ ಎಂದು ಜಾವೇದ್ ಹೇಳಿದ್ದಾರೆ.

ವಿಧಿಗಳನ್ನು ರದ್ದುಪಡಿಸುವಾಗ ಬಿಜೆಪಿ ಹೇಳಿದ್ದ ಮಾತುಗಳಿಗೆ, ನೀಡಿದ್ದ ಭರವಸೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅವರು ಇಲ್ಲಿ ದ್ವೇಷದ ಬೀಜಗಳನ್ನು ಬಿತ್ತುತ್ತಿದ್ದಾರೆ ಎಂದು ಜಾವೇದ್ ಕಿಡಿಕಾರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.