ETV Bharat / bharat

ತಿರುಮಲ: ಆರು ವರ್ಷದ ಮಗು ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ

author img

By

Published : Aug 14, 2023, 10:57 AM IST

Updated : Aug 14, 2023, 12:42 PM IST

leopard
ಚಿರತೆ ಸೆರೆ

ತಿರುಮಲದಲ್ಲಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. ಈ ಕುರಿತು ತಿರುಪತಿ ತಿರುಮಲ ದೇವಸ್ಥಾನದ ಆಡಳಿತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರು ವರ್ಷದ ಬಾಳಕಿ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ

ತಿರುಪತಿ, ಆಂಧ್ರಪ್ರದೇಶ : ಕಳೆದ ಕೆಲ ದಿನಗಳ ಹಿಂದಷ್ಟೇ ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಆರು ವರ್ಷದ ಮಗುವನ್ನು ಬಲಿ ಪಡೆದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಭಾನುವಾರ ಮಧ್ಯರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು, ಎಸ್‌ವಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಟಿಟಿಡಿ ದೇವಸ್ಥಾನದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ( ಆಗಸ್ಟ್​ -11 ರಂದು) ಅಲಿಪಿರಿ - ತಿರುಮಲ ಮೆಟ್ಟಿಲುದಾರಿಯಲ್ಲಿ ಕುಟುಂಬಸ್ಥರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಆರು ವರ್ಷದ ಮಗುವನ್ನು ಚಿರತೆ ಎಳೆದೊಯ್ದು ಬಾಲಕಿಯ ದೇಹದ ಅರ್ಧ ಭಾಗವನ್ನು ತಿಂದು ಹಾಕಿತ್ತು. ಈ ಹಿನ್ನೆಲೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ನರಸಿಂಹಸ್ವಾಮಿ ದೇವಸ್ಥಾನದ ಅಕ್ಕಪಕ್ಕದ ಪ್ರದೇಶಲ್ಲಿ ಬೋನು ಇಟ್ಟಿತ್ತು.

ಚಿರತೆ ಬೋನಿಗೆ ಸಿಕ್ಕಿ ಹಾಕಿಕೊಳ್ಳುವ ಭರದಲ್ಲಿ ಸ್ವಲ್ಪ ಗಾಯಗೊಂಡಿದೆ. ಎಸ್‌ವಿ ಮೃಗಾಲಯಕ್ಕೆ ಸ್ಥಳಾಂತರಿಸಿದ ಬಳಿಕ ಚಿಕಿತ್ಸೆ ನೀಡಲಾಗುವುದು. ಹಾಗೆಯೇ, ಸೆರೆ ಸಿಕ್ಕ ಚಿರತೆಯು ನರಭಕ್ಷಕವೋ, ಅಲ್ಲವೋ ಎಂಬ ಬಗ್ಗೆ ಸಹ ಪರೀಕ್ಷೆ ನಡೆಸಲಾಗುವುದು. ಎಲ್ಲ ಪರೀಕ್ಷೆಗಳ ಬಳಿಕ ಎಲ್ಲಿ ಬಿಡಬೇಕು ಎಂದು ಪರಿಶೀಲಿಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಚಿರತೆ ದಾಳಿಗೆ ಮಗು ಬಲಿಯಾದ ಹಿನ್ನೆಲೆಯಲ್ಲಿ ಟಿಟಿಡಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಸಂಜೆ ಕತ್ತಲಾದ ನಂತರ ಅಲಿಪಿರಿ ಮತ್ತು ತಿರುಮಲದ ಪಾದಚಾರಿ ಮಾರ್ಗಗಳಲ್ಲಿ ಭಕ್ತರಿಗೆ ಅವಕಾಶ ನೀಡಬೇಕೋ, ಬೇಡವೋ ಎಂಬ ಕುರಿತು ಚರ್ಚೆ ನಡೆಸಿದ್ದಾರೆ. ಜೊತೆಗೆ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮಧ್ಯಾಹ್ನ 2 ಗಂಟೆಯ ನಂತರ ಮೆಟ್ಟಿಲುಗಳ ಮೇಲೆ ಬರಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಏಳನೇ ಮೈಲಿಯಲ್ಲಿ ಮಕ್ಕಳ ಕೈಗೆ ಟ್ಯಾಗ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿ, ಮಕ್ಕಳ ಪೋಷಕರ ವಿವರಗಳು, ನಗರ, ಫೋನ್ ಸಂಖ್ಯೆ, ಭದ್ರತಾ ಸಿಬ್ಬಂದಿಯ ಟೋಲ್-ಫ್ರೀ ಸಂಖ್ಯೆ ಮತ್ತು ಇತರ ವಿವರಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಚಿರತೆ ದಾಳಿ : 6 ವರ್ಷದ ಮಗು ಸಾವು

ಚಿರತೆಗೆ ಆಹಾರವಾದ 6 ವರ್ಷದ ಮಗು : ನೆಲ್ಲೂರು ಜಿಲ್ಲೆಯ ಪೋತಿರೆಡ್ಡಿಪಾಲೆಂನಿಂದ ಕುಟುಂಬವೊಂದು ದೇವರ ದರ್ಶನ ಪಡೆಯಲು ತಿರುಮಲಕ್ಕೆ ತೆರಳಿತ್ತು. ಆ.11 ರ ಶುಕ್ರವಾರ ರಾತ್ರಿ 8 ಗಂಟೆಗೆ ತಿರುಪತಿ ತಲುಪಿ ಬಳಿಕ ಅಲಿಪಿರಿ ಕಾಲುದಾರಿ ಮೂಲಕ ರಾತ್ರಿ 11 ಗಂಟೆ ವೇಳೆಗೆ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿತ್ತು. ಕಾಲ್ನಡಿಗೆ ಮೂಲಕ ಬೆಟ್ಟ ಹತ್ತಿ ಹೋಗುತ್ತಿದ್ದ ಕುಟುಂಬಸ್ಥರ ಮೇಲೆ ಚಿರತೆ ದಾಳಿ ಮಾಡಿದ್ದು, ಈ ವೇಳೆ 6 ವರ್ಷದ ಲಕ್ಷಿತಾ ಎಂಬ ಬಾಲಕಿಯನ್ನು ಕಾಡಿಗೆ ಎಳೆದೊಯ್ದಿತ್ತು. ಬಳಿಕ, ಪೋಷಕರು ಭದ್ರತಾ ಸಿಬ್ಬಂದಿಗೆ ದೂರು ನೀಡಿದ್ದರು. ಪೊಲೀಸರು ಶೋಧ ನಡೆಸಿದಾಗ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಮಗುವಿನ ಶವ ಪತ್ತೆಯಾಗಿತ್ತು.

ಇನ್ನೂ 5 ಚಿರತೆಗಳು ಓಡಾಡುತ್ತಿರುವ ಶಂಕೆ: ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸುತ್ತಮುತ್ತ ಇನ್ನೂ 5 ಚಿರತೆಗಳು ಸಂಚರಿಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲಲ್ಲಿ ಅಳವಡಿಸಲಾಗಿರುವ ಟ್ರ್ಯಾಪ್ ಕ್ಯಾಮರಾಗಳಲ್ಲಿ ಚಿರತೆಗಳ ದೃಶ್ಯ ಸೆರೆಯಾಗಿವೆ. ಈ ಹಿನ್ನೆಲೆ ಚಿರತೆಗಳಿಂದ ಭಕ್ತರ ಸುರಕ್ಷತೆ ಕುರಿತು ಟಿಟಿಡಿ ಮತ್ತು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ತಿರುಮಲ ಅನ್ನಮಯ್ಯ ಭವನದಲ್ಲಿ ಸಭೆ ನಡೆಸಿ ಚರ್ಚಿಸಲಿದ್ದಾರೆ.

Last Updated :Aug 14, 2023, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.