ETV Bharat / bharat

ಯುವ ಜೋಡಿಯ ಫೋಟೋ ಕ್ಲಿಕ್ಕಿಸಿದ ಆರೋಪ: 65 ವರ್ಷದ ವೃದ್ಧನ ಹೊಡೆದು ಕೊಲೆ

author img

By

Published : Mar 3, 2023, 9:55 PM IST

65-year-old-allegedly-beaten-to-death-after-he-took-picture-of-a-couple-in-intimate-situation
ಯುವ ಜೋಡಿಯ ಫೋಟೋ ಕ್ಲಿಕ್ಕಿಸಿದ ಆರೋಪ: 65 ವರ್ಷದ ವೃದ್ಧನ ಹೊಡೆದು ಕೊಲೆ

ಪಶ್ಚಿಮ ಬಂಗಾಳದ ಅಸನ್ಸೋಲ್​ನಲ್ಲಿ ಆತ್ಮೀಯವಾಗಿ ನಿಂತಿದ್ದ ಯುವ ಜೋಡಿಯ ಫೋಟೋ ತೆಗೆದ ಆರೋಪದ ಮೇಲೆ 65 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಅಸನ್ಸೋಲ್ (ಪಶ್ಚಿಮ ಬಂಗಾಳ): ಯುವಕ ಮತ್ತು ಯುವತಿಯ ಫೋಟೋ ಕ್ಲಿಕ್ಕಿಸಿದ ಆರೋಪದ ಮೇಲೆ ವೃದ್ಧೆಯೊಬ್ಬರನ್ನು ಹೊಡೆದು ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಅಸನ್ಸೋಲ್​ನಲ್ಲಿ ನಡೆದಿದೆ. 65 ವರ್ಷದ ಅಮರ್ ಸಿಂಗ್ ಎಂಬುವವರೇ ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮೃತ ಅಮರ್​ ಸಿಂಗ್, ತೃಣಮೂಲ ಕಾಂಗ್ರೆಸ್ ಟ್ರೇಡ್ ಯೂನಿಯನ್‌ನ ಕಾರ್ಯಕರ್ತರಾಗಿದ್ದರು. ಇಲ್ಲಿನ ಆರದಂಗ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ಸಂಜೆ ಹೊತ್ತು ಎಂದಿನಂತೆ ಹೊರಗಡೆ ಬಂದು ಅಮರ್ ಸಿಂಗ್ ಕುಳಿತಿದ್ದರು. ಇದೇ ವೇಳೆ, ಇದೇ ಸ್ಥಳದಲ್ಲಿ ನೆರೆಯ ಯುವತಿಯೊಬ್ಬಳು, ಬೇರೆ ಪ್ರದೇಶದ ಯುವಕನೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದರು ಎನ್ನಲಾಗಿದೆ.

ಫೋಟೋ ಕ್ಲಿಕ್ಕಿಸಿದ ಆರೋಪ: ಆಗ ಇದ್ದಕ್ಕಿದ್ದಂತೆ ಯುವತಿ ಜೊತೆಗಿದ್ದ ಯುವಕ, ಅಮರ್ ಸಿಂಗ್ ತಮ್ಮ ಚಿತ್ರವನ್ನು ತೆಗೆದಿದ್ದಾನೆ ಎಂದು ಗಲಾಟೆ ಮಾಡಿದ್ದಾನೆ. ಅಲ್ಲದೇ, ಇದರ ನಂತರದಲ್ಲಿ ಈ ಯುವಕ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿದ್ದಾನೆ. ಆಗ ಅಮರ್ ಸಿಂಗ್​ ಅವರಿಗೆ ಎಲ್ಲರೂ ಸೇರಿಕೊಂಡು ಮನ ಬಂದಂತೆ ಥಳಿಸಿದ್ದಾರೆ. ಇದರ ಪರಿಣಾಮ ಅಮರ್ ಸಿಂಗ್​ ಅವರಿಗೆ ಒಳಪೆಟ್ಟುಗಳು ಬಿದ್ದಿದ್ದವು. ಅಲ್ಲದೇ, ಯುವಕರ ದಾಳಿಯಲ್ಲಿ ಜರ್ಜರಿತರಾಗಿ ಮನೆಗೆ ಮರಳಿದ್ದರು ಎನ್ನಲಾಗಿದೆ.

ಅಸ್ವಸ್ಥಗೊಂಡು ಮನೆಗೆ ತೆರಳಿದ್ದ ಅಮರ್​ ಸಿಂಗ್​: ಈ ವೇಳೆಗೆ ಅಮರ್ ಸಿಂಗ್ ಆಮ್ಲಜನಕದ ಕೊರತೆಯಿಂದ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಕುಟುಂಬ ಸದಸ್ಯರು, ಚಿಕಿತ್ಸೆಗಾಗಿ ಅವರನ್ನು ಅಸನ್ಸೋಲ್ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ನಂತರ ಕುಟುಂಬವು ಆಸ್ಪತ್ರೆಯಿಂದ ಅಮರ್ ಸಿಂಗ್ ಮೃತದೇಹವನ್ನು ಮೊದಲು, ಇಲ್ಲಿನ ಹಟ್ಟನ್ ರಸ್ತೆಯ ಮಾಸ್ಟರ್ ಪ್ಯಾರಾ ಪ್ರದೇಶದ ಇನ್ನೊಂದು ಮನೆಗೆ ಸಾಗಿಸಿದ್ದರು. ಆದರೆ, ಸ್ಥಳೀಯ ನಿವಾಸಿಗಳು ಮತ್ತು ರಾಜಕೀಯ ಮುಖಂಡರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಅಮರ್ ಸಿಂಗ್ ಅವರ ಕುಟುಂಬಕ್ಕೆ ಸಲಹೆ ನೀಡಿದ್ದರು.

ಮರಣೋತ್ತರ ಪರೀಕ್ಷೆ: ಆದ್ದರಿಂದ ಅದೇ ದಿನ ರಾತ್ರಿ ಮೃತದೇಹವನ್ನು ಮತ್ತೆ ಅಸನ್ಸೋಲ್ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ, ಅಮರ್ ಸಿಂಗ್ ಸಾವಿನ ಬಗ್ಗೆ ಪತ್ನಿ ಅಸನ್ಸೋಲ್ ದಕ್ಷಿಣ ಪೊಲೀಸ್ ಠಾಣೆಗೆ ರಾತ್ರಿಯೇ ದೂರು ನೀಡಿದ್ದಾರೆ. ಈ ಬಗ್ಗೆ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ, ಸ್ಥಳೀಯರ ಮಾಹಿತಿ ಪ್ರಕಾರ, ಯುವತಿಯು ಆರದಂಗ ಬಡಾವಣೆಯ ನಿವಾಸಿಯಾಗಿದ್ದು, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತರು ಹೊರಗಿನವರಾಗಿದ್ದಾರೆ. ಈ ಘಟನೆ ನಂತರ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈತನನ್ನು ಪತ್ತೆ ಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ, ಯುವತಿ ಪೋಷಕರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಯುವತಿ ನಿರಪರಾಧಿಯಾಗಿದ್ದು, ಅಮರ್ ಸಿಂಗ್ ಅನಾರೋಗ್ಯದಿಂದ ಸಾವನ್ನಪ್ಪಿರಬಹುದು ಎಂದು ಹೇಳಿಕೆ ನೀಡಿದ್ದಾರೆ.

ಸ್ಥಳೀಯ ನಿವಾಸಿಗಳ ಪ್ರತಿಭಟನೆ: ಸದ್ಯ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೆ ಕಾಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಡುವೆ ಅಮರ್ ಸಿಂಗ್ ಸಾವಿನ ಘಟನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ರಾತ್ರಿವರೆಗೂ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಆರೋಪ: ತನಿಖಾ ತಂಡ ಕಳುಹಿಸಲು ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.