ETV Bharat / assembly-elections

ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ: ಚುನಾವಣಾ ಕಾರ್ಯತಂತ್ರ ಚರ್ಚೆ

author img

By

Published : Mar 27, 2023, 6:43 AM IST

state-bjp-core-committee-meeting-held-by-amit-shah
ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ : ಚುನಾವಣಾ ಕಾರ್ಯತಂತ್ರ ಬಗ್ಗೆ ಸುದೀರ್ಘ ಚರ್ಚೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಮಿತ್​ ಶಾ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಚುನಾವಣಾ ಪ್ರಚಾರ ಸಮಿತಿ ಮತ್ತು ರಾಜ್ಯ ಕೋರ್​ ಕಮಿಟಿ ಸಭೆ ನಡೆಯಿತು.

ಬೆಂಗಳೂರು : ಬಿಜೆಪಿ ರಾಜ್ಯ ಚುನಾವಣಾ ಪ್ರಚಾರ ಸಮಿತಿ ಮತ್ತು ರಾಜ್ಯ ಕೋರ್ ಕಮಿಟಿ ಸಭೆ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆಯಿತು.‌ ನಗರದ ಖಾಸಗಿ ಹೊಟೇಲ್‌ನಲ್ಲಿ ತಡರಾತ್ರಿವರೆಗೆ ನಡೆದ ಸಭೆಯಲ್ಲಿ ಚುನಾವಣಾ ರಣತಂತ್ರದ ಬಗ್ಗೆ ಚರ್ಚಿಸಲಾಗಿದೆ. ರಾಜ್ಯದ ನಾಲ್ಕು ದಿಕ್ಕಿನಲ್ಲಿ ನಡೆದ ವಿಜಯ ಸಂಕಲ್ಪ ರಥಯಾತ್ರೆಯ ವರದಿಯನ್ನು ಸಭೆಯಲ್ಲಿ ಶಾ ಅವರಿಗೆ ಒಪ್ಪಿಸಲಾಯಿತು. ಬಿಜೆಪಿ ದುರ್ಬಲ ಇರುವ ಕಡೆಗಳಲ್ಲಿ ರಥಯಾತ್ರೆಗೆ ಸಿಕ್ಕ ಸ್ಪಂದನೆ, ಪಕ್ಷ ಸಂಘಟನೆ ಮೇಲಾದ ಲಾಭ, ಇತ್ಯಾದಿ ಮಾಹಿತಿ ವರದಿಯಲ್ಲಿದೆ.

ಮುಂದಿನ ಒಂದು ತಿಂಗಳ ಚುನಾವಣಾ ಪ್ರಚಾರದ ಬಗ್ಗೆ ತಂತ್ರಗಾರಿಕೆ, ಪ್ರಧಾನಿ ಮೋದಿಯವರ ರೋಡ್ ಶೋ, ರ್ಯಾಲಿಗಳ ಸ್ಥಳಗಳ ಬಗ್ಗೆ ಪ್ಲಾನಿಂಗ್ ನಡೆಯಿತು. ಮೀಸಲಾತಿ ಲಾಭದ ಬಗ್ಗೆ ಮಹತ್ವದ ಸಮಾಲೋಚನೆ ಆಗಿದೆ. ಈ ಬಗ್ಗೆ ಪರಿಣಾಮಕಾರಿಯಾಗಿ ಪ್ರಚಾರ ನಡೆಸಿ, ಮತಬೇಟೆ ಮಾಡುವ ಬಗ್ಗೆ ಸೂಚಿಸಲಾಗಿದೆ. ಮನೆ, ಮನೆ ಪ್ರಚಾರ ಚುರುಕುಗೊಳಿಸಲು ಸೂಚನೆ, ಡಬಲ್ ಇಂಜಿನ್ ಸರ್ಕಾರಗಳ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವುದು, ದುರ್ಬಲ ಕ್ಷೇತ್ರಗಳನ್ನು ಬಲಪಡಿಸಲು ನೀಡಿದ್ದ ಗುರಿ ಪ್ರಗತಿ ಬಗ್ಗೆಯೂ ಅಮಿತ್ ಶಾ ಮಾಹಿತಿ‌‌ ಪಡೆದರು. ಟಿಕೆಟ್ ಹಂಚಿಕೆ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲಾ ಸಮಿತಿಗಳಿಂದ ರಾಜ್ಯ ಘಟಕಕ್ಕೆ ಸಂಭಾವ್ಯರ ಪಟ್ಟಿ ರವಾನೆ ಬಗ್ಗೆ ಮಾಹಿತಿ, ಕ್ಷೇತ್ರವಾರು ಆಕಾಂಕ್ಷಿಗಳ ಪಟ್ಟಿಯ ಬಗ್ಗೆಯೂ ವಿವರ ಪಡೆದುಕೊಂಡರು.

ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎರಡೂ ಸಮಿತಿಗಳ ಅಪೇಕ್ಷಿತರು, ಕೋರ್ ಸಮಿತಿಯ ಸದಸ್ಯರಾದ ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಆರ್.ಅಶೋಕ್, ಬಿ.ಶ್ರೀರಾಮುಲು, ನಿರ್ಮಲ್‍ಕುಮಾರ್ ಸುರಾಣ, ರಾಜೇಶ್.ಜಿ.ವಿ, ವಿಶೇಷ ಆಹ್ವಾನಿತರಾದ ಅರುಣ್ ಸಿಂಗ್, ಡಿ.ಕೆ.ಅರುಣಾ, ಸಿ.ಟಿ.ರವಿ ಮತ್ತಿತರರು ಸಭೆಯಲ್ಲಿದ್ದರು.

ಚುನಾವಣಾ ಪ್ರಚಾರ ಸಮಿತಿಯ ಸದಸ್ಯ ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಆರ್.ಅಶೋಕ್, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಪ್ರಭು ಚವ್ಹಾಣ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ, ವಿ.ಶ್ರೀನಿವಾಸಪ್ರಸಾದ್, ಪಿ.ಸಿ.ಮೋಹನ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಬಿ.ವೈ.ವಿಜಯೇಂದ್ರ ಮತ್ತು ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು.

ಬಳಿಕ ಮಾತನಾಡಿದ ಸಿ.ಟಿ.ರವಿ, "ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ, ಪ್ರಚಾರ ಸಮಿತಿಗಳ ಸಭೆ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಕಳೆದ ಕೆಲ ತಿಂಗಳ ಸಂಘಟನೆ ಪರಿಣಾಮ ನಮ್ಮ ಪರ ಅಲೆ ಇದೆ. ಈಗಾಗಲೇ 26 ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಆಗಿದೆ. ಏಳು ಜಿಲ್ಲೆಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ಬಾಕಿ ಇದೆ. ಕಾರ್ಯಕರ್ತರಲ್ಲಿ ಉತ್ಸಾಹ ಇದೆ. ನಾವು ಗೆಲ್ಲೋದು ನಿಶ್ಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದರಿಂದ ಕಾಂಗ್ರೆಸ್‌ನವರ‌ ಉತ್ಸಾಹ ಕಮರಿ ಹೋಗಿತ್ತು. ಈಗ ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿದ್ದೇವೆ‌. ಇದರಿಂದ ಕಾಂಗ್ರೆಸ್‌ನವರಿಗೆ ಮರ್ಮಾಘಾತ ಆದಂತಾಗಿದೆ" ಎಂದು ತಿಳಿಸಿದರು.

"ಯಾವ್ಯಾವ ಕ್ಷೇತ್ರಕ್ಕೆ ಯಾರ್ಯಾರು ಸೂಕ್ತ ಎಂದು ವರಿಷ್ಠರು ನಿರ್ಧರಿಸ್ತಾರೆ. ಏಪ್ರಿಲ್ ಮೊದಲ ವಾರ ಮೋದಿ ಬರುತ್ತಾರೆ. ಅವರು ಬಂದಾಗಲೆಲ್ಲ ಬಿಜೆಪಿಗೆ ಲಾಭ ಆಗುತ್ತದೆ. ಮೋದಿ ಬರುವಾಗಲೆಲ್ಲ ಕಾಂಗ್ರೆಸ್‌ನವರು ಹತಾಶರಾಗುತ್ತಾರೆ. ಈ ಬಾರಿ ಹಳೇ ಮೈಸೂರು ಭಾಗದಲ್ಲೂ ನಾವೇ ಗೆಲ್ಲುತ್ತೇವೆ" ಎಂದರು.

ವರುಣಾದಿಂದ ವಿಜಯೇಂದ್ರ‌ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, "ಯಾವ ಕ್ಷೇತ್ರದ ಜೊತೆಗೂ ರಾಜಿ ಇಲ್ಲ. ರಾಜಕೀಯವಾಗಿ ರಾಜಿ ಆಗುವುದಿಲ್ಲ. ಯಾವ ಅಭ್ಯರ್ಥಿಗಳು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರೆ, ಗೆಲ್ಲಬಹುದು ಎಂದು ಚುನಾವಣೆ ದಿನಾಂಕ ಘೋಷಣೆ ಆದ ಮೇಲೆ ತೀರ್ಮಾನ ಮಾಡ್ತೀವಿ. ಹಳೆ ಮೈಸೂರು ಭಾಗದ ಬಗ್ಗೆ ಸಮಗ್ರವಾಗಿ ಚರ್ಚೆ ಆಗಿದೆ. ಆದರೆ ಚರ್ಚೆ ಆಗಿರುವ ವಿಷಯಗಳ ಬಗ್ಗೆ ಇಲ್ಲಿ ಹೇಳಲ್ಲ. ಆದರೆ ಯಾವ ಕ್ಷೇತ್ರದ ಜೊತೆಗೂ ರಾಜಿ ಆಗದೇ, ಅಲ್ಲಿ ಪಕ್ಷದ ಅಭ್ಯರ್ಥಿ‌ ಗೆಲ್ಲಿಸುವ ಕೆಲಸ ಮಾಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ : ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಅವನತಿಯಾಗುತ್ತಿದೆ: ಅಮಿತ್ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.