ಕರ್ನಾಟಕ

karnataka

ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಧಾನಿ ಭೇಟಿ: ಗಗನಯಾನಿಗಳನ್ನು ಪರಿಚಯಿಸಿದ ಮೋದಿ

By ETV Bharat Karnataka Team

Published : Feb 27, 2024, 12:22 PM IST

Updated : Feb 27, 2024, 2:17 PM IST

ತಿರುವನಂತಪುರಂನಲ್ಲಿನ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ತಿರುವನಂತಪುರಂ (ಕೇರಳ) :ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್​ಎಸ್​ಸಿ) ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಿದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಸಿಎಂ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಮುರಳೀಧರನ್ ಮತ್ತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಜೊತೆಗಿದ್ದರು.

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಮಾನವ ಸಹಿತ ಗಗನಯಾನ ಯೋಜನೆಯ ಕ್ಯಾಪ್ಸುಲ್‌ ಮಾಡ್ಯೂಲ್​ ಅನ್ನು ವೀಕ್ಷಿಸಿದರು. ಪರೀಕ್ಷಾರ್ಥ ಪ್ರಯೋಗ ಮಾಡಲಾಗಿರುವ ಸಿಬ್ಬಂದಿ ಎಂಜಿನ್​ ಬಗ್ಗೆ ಇಸ್ರೋ ಅಧ್ಯಕ್ಷರು ಮೋದಿ ಅವರಿಗೆ ಮಾಹಿತಿ ನೀಡಿದರು.

ಬಳಿಕ ಬಾಹ್ಯಾಕಾಶ ಯೋಜನೆಗೆ ಆಯ್ಕೆಯಾದ ಗಗನಯಾತ್ರಿಗಳನ್ನು ಪ್ರಧಾನಿ ಮೋದಿ ಪರಿಚಯಿಸಿದರು. ಈ ಯೋಜನೆಗೆ ನಾಲ್ವರನ್ನು ಆಯ್ಕೆ ಮಾಡಲಾಗಿದ್ದು, ಅವರ ಹೆಸರು ಮತ್ತು ಗುರುತನ್ನು ಈವರೆಗೂ ಬಹಿರಂಗ ಮಾಡಿರಲಿಲ್ಲ. ನಾಲ್ವರೂ ವಾಯುಪಡೆಯ ಪೈಲಟ್‌ಗಳಾಗಿದ್ದು, ಅವರಲ್ಲಿ ಒಬ್ಬ ಮಲಯಾಳಿ ಎಂದು ಹೇಳಲಾಗಿದೆ. ಗಗನಯಾನ ಯೋಜನೆಗೆ ನಾಲ್ವರು ಯಾತ್ರಿಗಳನ್ನು 3 ವರ್ಷಗಳ ಹಿಂದೆ ಆಯ್ಕೆ ಮಾಡಲಾಗಿತ್ತು.

ಇವರೇ ನಮ್ಮ ಗಗನಿಯಾನಿಗಳು:ಗ್ರೂಪ್ ಕ್ಯಾಪ್ಟನ್​ಗಳಾದ ಪ್ರಶಾಂತ್​ ಬಾಲಕೃಷ್ಣನ್​ ನಾಯರ್​​​, ಅಜಿತ್​ ಕೃಷ್ಣನ್​, ಅಂಗಧ್​ ಪ್ರತಾಪ್​, ವಿಂಗ್​ ಕಮಾಂಡರ್​ ಶುಭಾಂಶು ಶುಕ್ಲಾ ಗಗನಯಾನ ಮಾಡುವ ಸಿಬ್ಬಂದಿ. ನಾಲ್ವರಿಗೆ ಬ್ಯಾಡ್ಜ್​ ನೀಡುವ ಮೂಲಕ ಮುಂಬರುವ ಗಗನಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದರು.

ಇದಕ್ಕೂ ಮೊದಲು ವಿಎಸ್‌ಎಸ್‌ಸಿಯಲ್ಲಿನ ಹೊಸ ಟ್ರೈಸಾನಿಕ್ ವಿಂಡ್ ಟನಲ್, ಮಹೇಂದ್ರಗಿರಿ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಸೆಮಿ ಕ್ರಯೋಜೆನಿಕ್ ಇಂಟಿಗ್ರೇಟೆಡ್ ಇಂಜಿನ್, ಸ್ಟೇಜ್ ಫೆಸಿಲಿಟಿ ಮತ್ತು ಶ್ರೀಹರಿಕೋಟಾದಲ್ಲಿನ ಪಿಎಸ್‌ಎಲ್‌ವಿ ಇಂಟಿಗ್ರೇಷನ್ ಫೆಸಿಲಿಟಿಯನ್ನು ವರ್ಚುಯಲ್​ ಮೂಲಕ ಮೋದಿ ಉದ್ಘಾಟಿಸಿದರು.

ಇದನ್ನೂ ಓದಿ:ಅಕ್ಟೋಬರ್ 21ಕ್ಕೆ ಮಾನವಸಹಿತ 'ಗಗನಯಾನ'​ದ ಮೊದಲ ಹಾರಾಟ ಪರೀಕ್ಷೆ: ಇಸ್ರೋ

1800 ಕೋಟಿ ರೂಗಳ ಮೂರು ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, 21 ನೇ ಶತಮಾನದಲ್ಲಿ ಭಾರತವು ತನ್ನ ಸಾಮರ್ಥ್ಯದಿಂದ ಜಗತ್ತನ್ನು ಅಚ್ಚರಿಗೊಳಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ನಾವು ಸುಮಾರು 400 ಉಪಗ್ರಹಗಳನ್ನು ಉಡಾವಣೆ ಮಾಡಿದ್ದೇವೆ. ಆದರೆ 10 ವರ್ಷಗಳ ಹಿಂದೆ ಕೇವಲ 33 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. ಈಗ ಅದು 10ಕ್ಕೂ ಹೆಚ್ಚುಪಟ್ಟು ಹೆಚ್ಚಳವಾಗಿದೆ. ಇದು ನಮ್ಮ ವಿಜ್ಞಾನಿಗಳ ಸಾಧನೆ ಆಗಿದೆ ಎಂದು ಬಣ್ಣಿಸಿದರು.

2035ಕ್ಕೆ ಬಾಹ್ಯಾಕಾಶದಲ್ಲಿ ಭಾರತದಿಂದ ಪ್ರತ್ಯೇಕ ನಿಲ್ದಾಣ:2035 ರ ವೇಳೆಗೆ ಭಾರತವು ಬಾಹ್ಯಾಕಾಶದಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲಿದೆ. ಅದು ಬಾಹ್ಯಾಕಾಶದಲ್ಲಿ ಅಪಾರ ಅವಕಾಶಗಳನ್ನು ಹಾಗೂ ನಮಗೆ ಗೊತ್ತಿಲ್ಲದ ಇನ್ನಷ್ಟು ವಿಷಯಗಳ ಬಗ್ಗೆ ಅಧ್ಯಯನ ಮಾಡಲು ನಮಗೆ ಸಹಾಯ ಮಾಡುತ್ತದೆ. ಅಮೃತ್ ಕಾಲದ ಈ ಅವಧಿಯಲ್ಲಿ, ಭಾರತೀಯ ಗಗನಯಾತ್ರಿಗಳು ನಮ್ಮದೇ ರಾಕೆಟ್‌ನಲ್ಲಿ ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಇಳಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated :Feb 27, 2024, 2:17 PM IST

ABOUT THE AUTHOR

...view details