ಕರ್ನಾಟಕ

karnataka

14 ಚುನಾವಣೆ, 7 ಪ್ರಧಾನಿಗಳನ್ನು ಕಂಡಿದ್ದ ಪ್ರಸಾದ್: ಸೋಲಿನಿಂದ ಆರಂಭ, ಗೆಲುವಿನಿಂದ ರಾಜಕೀಯ ಅಂತ್ಯ - Srinivasa Prasad

By ETV Bharat Karnataka Team

Published : Apr 29, 2024, 6:58 AM IST

V Srinivas Prasad passed away: 14 ಚುನಾವಣೆ, 7 ಪ್ರಧಾನಿಗಳನ್ನು ಕಂಡಿದ್ದ ವಿ. ಶ್ರೀನಿವಾಸಪ್ರಸಾದ್ ಅವರ ರಾಜಕೀಯ ಸೋಲಿನಿಂದ ಆರಂಭ ಆಗಿತ್ತು. ಆದ್ರೆ, ಗೆಲುವಿನಿಂದ ರಾಜಕೀಯ ಜೀವನ ಅಂತ್ಯವಾಗಿದೆ.

Srinivasa Prasad  Chamarajanagar  Srinivasa Prasad Seen 14 elections  V Srinivas Prasad passed away
14 ಚುನಾವಣೆ, 7 ಪ್ರಧಾನಿಗಳು ಕಂಡಿದ್ದ ಪ್ರಸಾದ್: ಸೋಲಿನಿಂದ ಆರಂಭ, ಗೆಲುವಿನಿಂದ ರಾಜಕೀಯ ಅಂತ್ಯ

ಚಾಮರಾಜನಗರ:ವಿ. ಶ್ರೀನಿವಾಸಪ್ರಸಾದ್ ಒಟ್ಟು 14 ಚುನಾವಣೆಗಳನ್ನು ಎದುರಿಸಿದ್ದು, 8 ಚುನಾವಣೆಗಳಲ್ಲಿ ಗೆದ್ದಿದ್ದಾರೆ. 6 ಬಾರಿ ಸಂಸದರಾಗಿ 2 ಬಾರಿ ಶಾಸಕರಾಗಿದ್ದ ಪ್ರಸಾದ್ 7 ಪ್ರಧಾನಿಗಳನ್ನು ಕಂಡಿದ್ದಾರೆ. ಹೌದು, 1974 ರಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಡಿ. ಸತ್ಯನಾರಾಯಣ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಡಿಎಂಕೆ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಪ್ರಸಾದ್ ಕಣಕ್ಕೆ ಇಳಿಯುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು.

ವಿ. ಶ್ರೀನಿವಾಸಪ್ರಸಾದ್

ಕಾಂಗ್ರೆಸ್ ಎಷ್ಟೇ ಒತ್ತಡ ತಂದರೂ ಸ್ಪರ್ಧೆಯಿಂದ ಹಿಂದೆ ಸರಿಯದೇ ಪೈಪೋಟಿ ನೀಡಿ 4ನೇ ಸ್ಥಾನವನ್ನು ಆ ಚುನಾವಣೆಯಲ್ಲಿ ಪಡೆದಿದ್ದರು. ‌ಇವರು ಒಡ್ಡಿದ್ದ ಸ್ಪರ್ಧೆ ರಾಜಕೀಯ ಧುರೀಣರ ಗಮನ ಸೆಳೆದು ಕೊನೆಗೆ 1974ರಲ್ಲಿ ಸಂಸ್ಥಾ ಕಾಂಗ್ರೆಸ್ ಸೇರಿ ಯುವ ಕಾಂಗ್ರೆಸ್​ನ‌ ಪ್ರಧಾನ‌ ಕಾರ್ಯದರ್ಶಿಯಾಗಿ ಹುರುಪಿನಿಂದ ಸಂಘಟನೆ ಮಾಡಿ ಗಮನ ಸೆಳೆದಿದ್ದರು. ತುರ್ತು ಪರಿಸ್ಥಿತಿ ಬಳಿಕ ಜಯಪ್ರಕಾಶ್ ಕರೆ ನೀಡಿದಂತೆ ವಿಪಕ್ಷಗಳು ಸೇರಿ ಒಂದು ಪಕ್ಷ - ಒಂದು ಧ್ವಜ ರಚಿಸಿಕೊಂಡು ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು.

ವಿ. ಶ್ರೀನಿವಾಸಪ್ರಸಾದ್ ಅವರಿಗೆ ಎಐಡಿಎಂಕೆ ಬೆಂಬಲ ನೀಡಿರುವ ಪತ್ರ

1977 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಲೋಕದಳ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿ.ರಾಚಯ್ಯ ವಿರುದ್ಧ ಪರಾಭವಗೊಂಡಿದ್ದರು. 1978 ರಲ್ಲಿ ಟಿ. ನರಸಿಪುರ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಇಂದಿರಾ ಕಾಂಗ್ರೆಸ್​ನ ಅಭ್ಯರ್ಥಿ 28,061 ಮತಗಳನ್ನು ಪಡೆದ ಪಿ. ವೆಂಕಟರಮಣ ಗೆದ್ದರೆ ಶ್ರೀನಿವಾಸಪ್ರಸಾದ್ 20,034 ಪಡೆದು ಮೂರನೇ ಚುನಾವಣೆಯಲ್ಲೂ ಪರಾಭವಗೊಂಡಿದ್ದರು.

1980ರ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಶ್ರೀನಿವಾಸ ಪ್ರಸಾದ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದು ಬಿ. ರಾಚಯ್ಯ ವಿರುದ್ಧ ಗೆದ್ದು ಮೊದಲ ಬಾರಿ ಸಂಸತ್ ಸದಸ್ಯರಾಗಿದ್ದರು. ಆ ಚುನಾವಣೆಯಲ್ಲಿ ಪ್ರಸಾದ್ 2,28,748 ಮತಗಳನ್ನು ಪಡೆದರೇ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ - ಯು ನ ಬಿ‌.ರಾಚಯ್ಯ ಅವರಿಗೆ 1,18,287, ಜನತಾ ಪಕ್ಷದ ಸಿದ್ದಯ್ಯಗೆ 36 ಸಾವಿರ ಮತಗಳು ಬಂದಿದ್ದವು‌‌. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತಾಯಿ ಠೇವಣಿ ಹಣವನ್ನು ಕೊಟ್ಟು ಶುಭ ಹಾರೈಸಿದ್ದರು ಎಂದು ಸ್ವಾಭಿಮಾನಿಯ ನೆನಪುಗಳು ಎಂಬ ತಮ್ಮ ಜೀವನಗಾಥೆಯಲ್ಲಿ ಪ್ರಸಾದ್ ದಾಖಲಿಸಿದ್ದಾರೆ‌.

ಮೊದಲ ಬಾರಿ 1980 ರಲ್ಲಿ ಸಂಸದರಾದ ಬಳಿಕ ಪ್ರಸಾದ್ 1984, 1989, 1991 ಹೀಗೆ ಸತತ ನಾಲ್ಕು ಚುನಾವಣೆಗಳಲ್ಲಿ ಜಯ ಗಳಿಸಿದ್ದರು. 1984ರಲ್ಲಿ ಜನತಾ ಪಕ್ಷದ ಮಲ್ಲೇಶಯ್ಯ, 1989ರಲ್ಲಿ ಜನತಾ ದಳದ ದೇವನೂರು ಶಿವಮಲ್ಲು 1991ರಲ್ಲಿ ಜನತಾದಳದ ಡಾ.ಎಚ್.ಸಿ. ಮಹಾದೇವಪ್ಪ ಅವರನ್ನು ಶ್ರೀನಿವಾಸಪ್ರಸಾದ್ ಸೋಲಿಸಿದ್ದರು.

1996ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಟಿಕೆಟ್ ಸಿಗದೇ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡರು. ಸಂಯುಕ್ತರಂಗ ಸರ್ಕಾರ ಉರುಳಿದ್ದರಿಂದ 1998 ರಲ್ಲಿ ಮತ್ತೇ ಚುನಾವಣೆ ಎದುರಾಗಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದರು.‌ ಆದರೆ, ಎರಡನೇ ಬಾರಿ ಎ. ಸಿದ್ದರಾಜು ಜನತಾ ದಳದಿಂದ ಆಯ್ಕೆಯಾಗಿದ್ದರು.

ಎಐಡಿಎಂಕೆ ಜಯಲಲಿತಾ ತಮ್ಮ ಬೆಂಬಲ ವಾಪಾಸ್ ಪಡೆದಿದ್ದರಿಂದ 1999ರಲ್ಲಿ ಮತ್ತೊಮ್ಮೆ ಲೋಕಸಭಾ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್ ಜೆಡಿಯುನಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ. ಸಿದ್ದರಾಜು ಅವರನ್ನು ಸೋಲಿಸಿದರು.

ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ, ಜಾರ್ಜ್ ಫರ್ನಾಂಡೀಸ್ ಅವರಿಂದಾಗಿ ಶ್ರೀನಿವಾಸ ಪ್ರಸಾದ್ ಅವರಿಗೆ ಕೇಂದ್ರ ಮಂತ್ರಿ ಸ್ಥಾನ ಒಲಿಯಿತು. ಬಳಿಕ, ಜಾರ್ಜ್ ಫರ್ನಾಂಡೀಸ್ ಅವರೊಂದಿಗೆ ಗುರುತಿಸಿಕೊಂಡು ಸಮತಾ ಪಾರ್ಟಿ ಸೇರಿ 2004ರ ಚುನಾವಣೆ ವೇಳೆಗೆ ಜೆಡಿಎಸ್ ಸೇರಿ ತಮ್ಮ ಬೆಂಬಲಿಗರಾದ ಕಾಗಲವಾಡಿ ಶಿವಣ್ಣಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡಿದ್ದರು. ಬಳಿಕ, ಮತ್ತೆ ಕಾಂಗ್ರೆಸ್ ನತ್ತ ವಾಲಿದ್ದ ಪ್ರಸಾದ್​​ 2008ರಲ್ಲಿ ನಂಜನಗೂಡು ಕ್ಷೇತ್ರದಿಂದ ಗೆದ್ದು ಮೊದಲ ಬಾರಿ ಶಾಸಕರಾಗಿದ್ದರು. ಬಳಿಕ, 2013ರಲ್ಲೂ ನಂಜನಗೂಡು ಕ್ಷೇತ್ರದಿಂದ ಆಯ್ಕೆಯಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಸಚಿವ ಸಂಪುಟ ಪುನಾರಚನೆ ಹೊತ್ತಲ್ಲಿ ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್​ನಿಂದ ಹೊರ ಬಂದಿದ್ದರು. ಬಳಿಕ, ಬಿಜೆಪಿ ಸೇರಿ ನಂಜನಗೂಡು ಉಪ ಚುನಾವಣೆಯಲ್ಲಿ ಪರಭಾವಗೊಂಡರು.

2019ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮುಖಂಡರು, ಅಭಿಮಾನಿಗಳ ಒತ್ತಡಕ್ಕೆ ಮಣಿದು ಸ್ಪರ್ಧಿಸಿ ಮೊದಲ ಬಾರಿಗೆ ಚಾಮರಾಜನಗರದಲ್ಲಿ ಕಮಲ ಅರಳಿಸಿದ್ದರು.

7 ಪ್ರಧಾನಿಗಳನ್ನು ಕಂಡ ಪ್ರಸಾದ್:27 ವರ್ಷಗಳ ಕಾಲ ಸಂಸತ್ ಸದಸ್ಯರಾಗಿದ್ದ ವೇಳೆ ವಿ. ಶ್ರೀನಿವಾಸಪ್ರಸಾದ್ ಅವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಚಂದ್ರಶೇಖರ್, ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರ ಆಡಳಿತದ ವೈಖರಿಯನ್ನು ಕಂಡಿದ್ದರು. ಉತ್ತಮ ಸಂಸದೀಯಪಟುವಾಗಿದ್ದ ಪ್ರಸಾದ್ ಎಲ್ಲ ಚರ್ಚೆಗಳಲ್ಲೂ ಭಾಗಿಯಾಗುತ್ತಿದ್ದರು. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಂಸತ್​ನಲ್ಲಿ ನಿರರ್ಗಳವಾಗಿ ಮಂಡಿಸುತ್ತಿದ್ದರು.

ನಾನು ಪಕ್ಷಾಂತರಿ ಆದರೆ, ತತ್ವಾಂತರಿ ಅಲ್ಲ:ದಲಿತ ನಾಯಕರಾಗಿದ್ದ, ತುಳಿತಕ್ಕೆ ಒಳಗಾದ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ, ನೇರ-ನಿಷ್ಠುರವಾದಿಯಾಗಿದ್ದ ಪ್ರಸಾದ್ ಅವರು ಸಾಕಷ್ಟು ಬಾರಿ, ''ನಾನು ಹಲವಾರು ಪಕ್ಷಗಳನ್ನು ಬದಲಿಸಿರಬಹುದು. ಆದರೆ ತತ್ವ ಬಿಟ್ಟಿಲ್ಲ, ನಾನು ಪಕ್ಷಾಂತರಿ ಆಗಿರಬಹುದು. ಆದರೆ ತತ್ವಾಂತರಿಯಾಗಿಲ್ಲ. ಸ್ವಾಭಿಮಾನ ಬಿಟ್ಟಿಲ್ಲ'' ಎನ್ನುತ್ತಿದ್ದರು.‌ ಅದರಂತೆಯೇ ನಡೆದುಕೊಂಡಿದ್ದರು. ರಾಜಕೀಯ ಜೀವನದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಬಂಡಾಯವೆದ್ದಿದ್ದರು. ಪಕ್ಷ ಯಾವುದೇ ಇರಲಿ, ನಾಯಕ ಯಾರೇ ಇರಲಿ ಅವರನ್ನು ಬಿಟ್ಟು ಹೊರನಡೆದಿದ್ದ ಸ್ವಾಭಿಮಾನಿ ರಾಜಕಾರಣಿ ಎಂದೇ ಕರೆಯಿಸಿಕೊಂಡಿದ್ದಾರೆ.

ಇದನ್ನೂ ಓದಿ:ದಲಿತ ನಾಯಕ, ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ನಿಧನ - V Srinivas Prasad passed away

ABOUT THE AUTHOR

...view details