ETV Bharat / state

ದಲಿತ ನಾಯಕ, ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ನಿಧನ - V SRINIVASA PRASAD PASSED AWAY

author img

By ETV Bharat Karnataka Team

Published : Apr 29, 2024, 6:18 AM IST

Updated : Apr 29, 2024, 1:57 PM IST

ವಿ. ಶ್ರೀನಿವಾಸ ಪ್ರಸಾದ್
ವಿ. ಶ್ರೀನಿವಾಸ ಪ್ರಸಾದ್

ಮಾಜಿ ಸಚಿವ, 76 ವರ್ಷದ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಭಾನುವಾರ ತಡರಾತ್ರಿ ವಯೋಸಹಜ ಖಾಯಿಲೆಗಳಿಂದ ಇಹಲೋಕ ತ್ಯಜಿಸಿದ್ದಾರೆ.

ಚಾಮರಾಜನಗರ: 5 ದಶಕಗಳ ಸುದೀರ್ಘ ಸಕ್ರಿಯ ರಾಜಕಾರಣದಲ್ಲಿದ್ದು, ಮಾರ್ಚ್​ನಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದ ಮಾಜಿ ಸಚಿವ, ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ (76)​ ವಯೋಸಹಜ ಖಾಯಿಲೆಗಳಿಂದ ಬಳಲಿ ಭಾನುವಾರ ತಡರಾತ್ರಿ 1.30 ಕ್ಕೆ ಇಹಲೋಕ ತ್ಯಜಿಸಿದ್ದಾರೆ.

ಸಂಸದ ವಿ. ಶ್ರೀನಿವಾಸ ಪ್ರಸಾದ್
ಸಂಸದ ವಿ. ಶ್ರೀನಿವಾಸ ಪ್ರಸಾದ್

ಕೆಲವು ದಿನಗಳ ಹಿಂದೆ ಕಾಲು ನೋವು, ಮೂತ್ರಪಿಂಡ‌ ಸೋಂಕು ಸೇರಿದಂತೆ ಇತರ ರೋಗ ಸಂಬಂಧದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.‌ ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದಿದ್ದಾರೆ.

ವಿ. ಶ್ರೀನಿವಾಸ ಪ್ರಸಾದ್ ಅವರು ಪತ್ನಿ‌ ಭಾಗ್ಯಲಕ್ಷ್ಮಿ, ಮೂವರು ಪುತ್ರಿಯರಾದ ಪ್ರತಿಮಾ ಪ್ರಸಾದ್, ಪೂರ್ಣಿಮಾ, ಪೂನಂ, ಅಳಿಯಂದಿರಾದ ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್, ಡಾ.ಮೋಹನ್ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ರಾಜಕೀಯ ಹಾದಿ: 1974 ರ ಮಾರ್ಚ್ 17 ರಂದು ಮೈಸೂರಿನ ಕೃಷ್ಣರಾಜ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ವಿ. ಶ್ರೀನಿವಾಸ ಪ್ರಸಾದ್ ಅವರು ಪ್ರಥಮ ಬಾರಿಗೆ ಪಕ್ಷೇತರ ಅಭ್ಯಥಿ೯ಯಾಗಿ ‘ಒಂಟೆ’ ಗುರುತಿನಿಂದ ಸ್ಪಧಿ೯ಸಿದ್ದರು. ಅವರ ಸ್ಪರ್ಧೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಗಮನ ಸೆಳೆದಿತ್ತು.

1974ರ ಉಪ ಚುನಾವಣೆಯಿಂದ 2019 ರ ಲೋಕಸಭಾ ಚುನಾವಣೆ ತನಕ‌ ಒಟ್ಟು 14 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.‌ ಇದರಲ್ಲಿ,‌ 6 ಬಾರಿ ಲೋಕಸಭಾ ಚುನಾವಣೆ ಮತ್ತು ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದರು.

ಸಂಸದ ವಿ. ಶ್ರೀನಿವಾಸ ಪ್ರಸಾದ್
ಸಂಸದ ವಿ. ಶ್ರೀನಿವಾಸ ಪ್ರಸಾದ್

ಅಂಬೇಡ್ಕರ್​​ ವಿಚಾರಧಾರೆಗಳೇ ಉಸಿರು: ಚುನಾವಣೆಯಲ್ಲಿ ಸೋಲು - ಗೆಲುವು ಕಂಡಿದ್ದರೂ ಎಂದಿಗೂ ಅವರು ಧೃತಿಗೆಡದೇ ಅಂಬೇಡ್ಕರ್ ಚಿಂತನೆ, ದಲಿತಪರ ಹೋರಾಟದ ಮುಖ್ಯ ಧ್ವನಿಯಾಗಿದ್ದರು. ಶ್ರೀನಿವಾಸ ಪ್ರಸಾದ್​ ದಲಿತರ ಏಳಿಗೆಗಾಗಿ ಶ್ರಮಿಸಿದವರು. ಉತ್ತಮ ಸಂಸದೀಯಪಟುವಾಗಿದ್ದ ಪ್ರಸಾದ್​ ಎಲ್ಲಾ ಚರ್ಚೆಗಳಲ್ಲೂ ಭಾಗಿಯಾಗುತ್ತಿದ್ದರು, ಸಂಸತ್​​ನಲ್ಲಿ ಅಂಬೇಡ್ಕರ್​​ ವಿಚಾರಧಾರೆಗಳನ್ನು ನಿರರ್ಗಳವಾಗಿ ಮಂಡಿಸುತ್ತಿದ್ದರು. ದಲಿತ ನಾಯಕರಾಗಿ ಸಮಾಜದಲ್ಲಿ ಸಾಕಷ್ಟು ತುಳಿತಕ್ಕೆ ಒಳಗಾದವರ ಪರವಾಗಿ ನಿಲ್ಲುತ್ತಿದ್ದರು. ಇವರು 27 ವರ್ಷಗಳ ಸಂಸತ್​ ಸದಸ್ಯರಾಗಿದ್ದ ವೇಳೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಿ.ಪಿ.ಸಿಂಗ್, ಚಂದ್ರಶೇಖರ್, ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಅಂದರೆ ಒಟ್ಟು 7 ಪ್ರಧಾನಿಗಳನ್ನು, ಅವರ ಆಡಳಿತ ವೈಖರಿಯನ್ನು ಕಂಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಮದುವೆ ದಿಬ್ಬಣದ ಲಾರಿ ಪಲ್ಟಿ; ಇಬ್ಬರು ಸಾವು, 30 ಜನರಿಗೆ ಗಾಯ - ROAD ACCIDENT

Last Updated :Apr 29, 2024, 1:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.