ಕರ್ನಾಟಕ

karnataka

ಬಿಬಿಎಂಪಿ ಆಯುಕ್ತರ ಕೈಗೆ ಬೀಗ ಕೊಟ್ಟು ತೆರಿಗೆ ವಿನಾಯಿತಿಗೆ ಆಗ್ರಹಿಸಿದ ಬಿಜೆಪಿ ಶಾಸಕರು

By ETV Bharat Karnataka Team

Published : Feb 12, 2024, 9:15 PM IST

ಬಿಜೆಪಿ ಶಾಸಕರ ನಿಯೋಗ ಇಂದು ಬಿಬಿಎಂಪಿ ಕಚೇರಿಗೆ ತೆರಳಿ ತೆರಿಗೆ ವಿನಾಯಿತಿಗೆ ಆಗ್ರಹಿಸಿತು.

ತೆರಿಗೆ ವಿನಾಯಿತಿಗೆ ಆಗ್ರಹಿಸಿದ ಬಿಜೆಪಿ ಶಾಸಕರ ನಿಯೋಗ
ತೆರಿಗೆ ವಿನಾಯಿತಿಗೆ ಆಗ್ರಹಿಸಿದ ಬಿಜೆಪಿ ಶಾಸಕರ ನಿಯೋಗ

ಬೆಂಗಳೂರು: ತೆರಿಗೆಯಲ್ಲಿ ವಿನಾಯಿತಿ ನೀಡಿ ಅಥವಾ ದಂಡ ಕಡಿತ ಮಾಡಿ. ಇಲ್ಲವಾದರೆ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಬೀಗ ಹಾಕಿ ಎಂದು ಬಿಜೆಪಿ ಶಾಸಕರ ನಿಯೋಗ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರಿಗೆ ಬೀಗ ಹಾಗೂ ಬೀಗದ ಕೀ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯು ಕಳೆದ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳ ಮಾಲೀಕರಿಗೆ ನೋಟಿಸ್ ನೀಡಿದ್ದು, ತೆರಿಗೆ ಪಾವತಿಸದಿದ್ದರೆ ಬೀಗ ಮುದ್ರೆ ಹಾಕಲು ನಿರ್ಧಾರ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆೆಯಾಗುತ್ತಿದೆ. ಪಾಲಿಕೆಯ ಈ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಶಾಸಕರ ನಿಯೋಗವು ಆಯುಕ್ತ ತುಷಾರ್ ಗಿರಿನಾಥ್‌ರನ್ನು ಭೇಟಿ ಮಾಡಿ, ಬಾಕಿ ತೆರಿಗೆ ವಸೂಲಿಯನ್ನು ಹಂತ ಹಂತವಾಗಿ ಪಾವತಿಸಲು ಅನುಮತಿ ನೀಡಿ ಎಂದು ಮನವಿ ಪತ್ರ ಸಲ್ಲಿಸಿತು.

ಪಾಲಿಕೆಯು ನಗರದ ನಾಗರಿಕರ ಮೇಲೆ ಬಾಕಿ ತೆರಿಗೆ ವಸೂಲಿ ಹೆಸರಲ್ಲಿ ಯುದ್ಧ ಸಾರಿದ್ದು, ಸ್ವಯಂ ಆಸ್ತಿ ತೆರಿಗೆ ಘೋಷಣೆಯಲ್ಲಿ ದೋಷಪೂರಿತವಾಗಿರುವ ಕಟ್ಟಡಗಳಿಗೆ ದುಪ್ಪಟ್ಟು ದಂಡ, ಬಡ್ಡಿ ಮತ್ತು ಕಾನೂನುಬಾಹಿರವಾಗಿ ಆರೇಳು ವರ್ಷಗಳ ಹಿಂದಿನ ಬಾಕಿಯ ಕಂದಾಯ ವಸೂಲಿ ಮಾಡುವಾಗ ದುಬಾರಿ ದಂಡ ಮತ್ತು ಬಡ್ಡಿಯನ್ನು ವಿಧಿಸುತ್ತಿದೆ. ಈಗಾಗಲೇ ಪರಿಷ್ಕರಣೆಯ ನೆಪದಲ್ಲಿ 76,000 ಮನೆಗಳಿಗೆ ನೋಟಿಸ್ ನೀಡಲಾಗಿದೆ. ಇದರ ತರುವಾಯ ಆಸ್ತಿ ತೆರಿಗೆ ಪಾವತಿಸದ ಹಲವಾರು ಕಟ್ಟಡಗಳಿಗೆ ಬೀಗ ಹಾಕಿ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ನಿಯೋಗ ಅಸಮಾಧಾನ ವ್ಯಕ್ತಪಡಿಸಿದೆ.

ಜನವಿರೋಧಿ ಕ್ರಮದಿಂದ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಅವರ ವ್ಯಾಪಾರ ಮತ್ತು ಜೀವನವನ್ನು ಹಾಳು ಮಾಡಿ ಅವರ ಹೊಟ್ಟೆಯ ಮೇಲೆ ಹೊಡೆಯುವ ಕ್ರೂರ ವರ್ತನೆಯನ್ನು ಪಾಲಿಕೆಯು ತೋರುತ್ತಿದೆ. ಇವರ ಏಕಪಕ್ಷೀಯ ನೋಟಿಸ್ ವಿರುದ್ಧ ಹಲವಾರು ನಾಗರಿಕರು ನ್ಯಾಯಾಲಯದ ಬಾಗಿಲು ಬಡಿದು ಲಾಯರ್ ಫೀಸ್​ಗೆ ವೆಚ್ಚಮಾಡಿ ಮತ್ತಷ್ಟು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದಿದೆ.

ವಾಸ್ತವವಾಗಿ ಸ್ವಯಂ ಘೋಷಿತ ತೆರಿಗೆ ಪದ್ಧತಿಯಲ್ಲಿ ಬಿಬಿಎಂಪಿ ಕಾಯಿದೆ ಸೆ.144 ಸಬ್ (15) (ಆ) ಅಡಿಯಲ್ಲಿ ಐದು ವರ್ಷದ ಹಿಂದಿನ ಬಾಕಿಯ ಹೆಸರಲ್ಲಿ ದಂಡ ಮತ್ತು ಬಡ್ಡಿ ವಸೂಲಿ ಮಾಡುವ ಅಧಿಕಾರವಿಲ್ಲ. ಆದರೆ ಕಾಯಿದೆಯ ವಿರುದ್ಧವಾಗಿ ಪಾಲಿಕೆಯು ಕ್ರಮ ಜರುಗಿಸುತ್ತಿದೆ. ಅಧಿಕಾರಿಗಳು ಜನರ ದೌರ್ಬಲ್ಯವನ್ನು ದುರುಪಯೋಗಿಸಿಕೊಂಡು ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದೆ.

ನಗರದಲ್ಲಿ ಕಳೆದ ಒಂಭತ್ತು ತಿಂಗಳಿನಿಂದ ಯಾವುದೇ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲು ವಿಫಲವಾಗಿರುವ ಸರ್ಕಾರ ಇದೀಗ ನಗರದ ನಾಗರಿಕರನ್ನು ಸುಲಿಗೆ ಮಾಡಿ ಸಂಪನ್ಮೂಲ ಕ್ರೋಢೀಕರಣ ಮಾಡಲು ಮುಂದಾಗಿದೆ. ಹಗಲು ದರೋಡೆಯನ್ನು ಮೀರಿಸಿರುವ ಜನವಿರೋಧಿ ನಡವಳಿಕೆಯನ್ನು ಪಾಲಿಕೆಯ ಕಂದಾಯ ಇಲಾಖೆಯ ಅಧಿಕಾರಿಗಳು ಪ್ರದರ್ಶಿಸುತ್ತಿದ್ದಾರೆ.

ಅನೇಕ ವರ್ಷಗಳಿಂದ ಚಾಲ್ತಿಯಲ್ಲಿರುವ ಸ್ವಯಂ ಆಸ್ತಿ ಘೋಷಣೆಯಲ್ಲಿನ ನ್ಯೂನತೆಯ ಹೆಸರಲ್ಲಿ ಕಟ್ಟಡಗಳ ಮಾಲಿಕರಿಗೆ ನೋಟಿಸ್​ ನೀಡಿ ಅವರಿಂದ ಅಕ್ರಮ ವಸೂಲಿಗೆ ಪಾಲಿಕೆ ಇಳಿದಿದೆ. ಈಗಾಗಲೇ ನಗರದಲ್ಲಿ ಡಿಕೆ ಟ್ಯಾಕ್ಸ್ ನಿಂದ ಬಳಲಿ ಬೆಂಡಾಗಿರುವ ನಾಗರಿಕರಿಗೆ ಈ ಆಸ್ತಿ ತೆರಿಗೆ ಸುಲಿಗೆಯು ಹೊರಲಾರದ ಹೊರೆಯಾಗಿದೆ ಎಂದು ಆಪಾದಿಸಿದೆ.

ನಿಯೋಗದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು, ಸಿ.ಕೆ.ರಾಮಮೂರ್ತಿ, ಎಚ್.ವಿಶ್ವನಾಥ್, ಮುನಿರಾಜ ಸೇರಿದಂತೆ ಪ್ರಮುಖರಿದ್ದರು.

ಇದನ್ನೂ ಓದಿ:65 ಲಕ್ಷ ರೂ. ತೆರಿಗೆ ಪಾವತಿಸುವಂತೆ ನಮ್ಮ ಮೆಟ್ರೋಗೆ ಬಿಬಿಎಂಪಿ ನೋಟಿಸ್​

ABOUT THE AUTHOR

...view details