ಕರ್ನಾಟಕ

karnataka

ಸೊರೇನ್ ಅರ್ಜಿ ವಿಚಾರಣೆಗೆ ನಕಾರ: ಹೈಕೋರ್ಟ್​ಗೆ ಹೋಗಿ ಎಂದ ಸುಪ್ರೀಂ ಕೋರ್ಟ್

By ETV Bharat Karnataka Team

Published : Feb 2, 2024, 12:57 PM IST

ಇಡಿಯಿಂದ ತಮ್ಮ ಬಂಧನ ಪ್ರಶ್ನಿಸಿ ಮಾಜಿ ಸಿಎಂ ಹೇಮಂತ್ ಸೊರೇನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
SC Refuses To Entertain Plea By Ex-Jharkhand CM Hemant Soren Against His Arrest By ED
SC Refuses To Entertain Plea By Ex-Jharkhand CM Hemant Soren Against His Arrest By ED

ನವದೆಹಲಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ವಿಷಯದಲ್ಲಿ ಮೊದಲಿಗೆ ಜಾರ್ಖಂಡ್​ ಹೈಕೋರ್ಟ್​ನ ಕದ ತಟ್ಟುವಂತೆ ಸೊರೆನ್ ಪರ ವಾದಿಸುತ್ತಿರುವ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎ.ಎಂ.ಸಿಂಘ್ವಿ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿತು.

ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ, ನ್ಯಾಯಾಲಯಗಳು ಎಲ್ಲರಿಗೂ ಮುಕ್ತವಾಗಿವೆ ಮತ್ತು ಸೊರೇನ್ ಹೈಕೋರ್ಟ್​ಗೆ ಹೋಗಲಿ ಎಂದು ಸಿಬಲ್ ಅವರಿಗೆ ತಿಳಿಸಿತು. ಈ ವಿಷಯದ ತುರ್ತು ವಿಚಾರಣೆಯನ್ನು ಕೋರಿ ಸಿಬಲ್ ಗುರುವಾರ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮುಂದೆ ಮನವಿ ಸಲ್ಲಿಸಿದ್ದರು. ಇದರ ನಂತರ ಈ ವಿಷಯವನ್ನು ಶುಕ್ರವಾರ ಪಟ್ಟಿ ಮಾಡಲು ಸಿಜೆಐ ಒಪ್ಪಿಕೊಂಡಿದ್ದರು.

ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನು ಕೂಡ ಒಳಗೊಂಡ ನ್ಯಾಯಪೀಠದ ಮುಂದೆ ಸಿಬಲ್ ಮತ್ತು ಸಿಂಘ್ವಿ ಈ ವಿಷಯವನ್ನು ಈಗಲೇ ಆಲಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಖನ್ನಾ, ಹೈಕೋರ್ಟ್​ಗಳು ಕೂಡ ಸಾಂವಿಧಾನಿಕ ನ್ಯಾಯಾಲಯಗಳಾಗಿವೆ ಮತ್ತು ನಾವು ಒಬ್ಬ ವ್ಯಕ್ತಿಗೆ ಅನುಮತಿ ನೀಡಿದರೆ, ಎಲ್ಲರಿಗೂ ಅದೇ ರೀತಿ ಅನುಮತಿ ನೀಡಬೇಕಾಗುತ್ತದೆ ಎಂದು ಹೇಳಿದರು.

ಈ ಪ್ರಕರಣ ಏನಿದೆ ಎಂಬ ಬಗ್ಗೆ ವಿವರಿಸಲು ಅವಕಾಶ ನೀಡಬೇಕೆಂದು ವಿಚಾರಣೆಯ ಸಮಯದಲ್ಲಿ ಸಿಬಲ್ ಅವರು ನ್ಯಾಯಪೀಠವನ್ನು ಒತ್ತಾಯಿಸಿದರು. ಇದಕ್ಕೆ "ನೀವು ಹೈಕೋರ್ಟ್​ಗೆ ಹೋಗಬೇಕು ಎಂದು ಈ ನ್ಯಾಯಾಲಯ ಆದೇಶ ಮಾಡಿದೆ" ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು. ಹೈಕೋರ್ಟ್ ಕೂಡ ಸಾಂವಿಧಾನಿಕ ನ್ಯಾಯಾಲಯವಾಗಿದೆ ಮತ್ತು ಸೊರೆನ್ ಅವರ ವಕೀಲರು ಅದರ ಮುಂದೆ ಹೋಗಲಿ ಎಂದು ನ್ಯಾಯಮೂರ್ತಿ ಖನ್ನಾ ಪುನರುಚ್ಚರಿಸಿದರು.

ಆದಾಗ್ಯೂ ಸಿಬಲ್ ಮತ್ತು ಸಿಂಘ್ವಿ ತಮ್ಮ ಮನವಿಗಳನ್ನು ಆಲಿಸುವಂತೆ ನ್ಯಾಯಾಲಯಕ್ಕೆ ಒತ್ತಾಯಿಸಿದರು. "ದಯವಿಟ್ಟು ಹೈಕೋರ್ಟ್ ಗೆ ಹೋಗಿ. ನಾವು ಇದನ್ನು ಪರಿಗಣಿಸುವುದಿಲ್ಲ. ಈ ವಿಷಯದಲ್ಲಿ ಸ್ಥಿರವಾದ ದೃಷ್ಟಿಕೋನವನ್ನು ತೆಗೆದುಕೊಂಡಿದ್ದೇವೆ" ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.

ಸೊರೆನ್ ಅವರನ್ನು ಬಂಧಿಸುವ ಅಗತ್ಯವಿಲ್ಲ ಎಂದು ಸಿಂಘ್ವಿ ಒತ್ತಿ ಹೇಳಿದರಾದರೂ ಈ ವಾದಗಳಿಂದ ವಿಚಲಿತರಾಗದ ನ್ಯಾಯಮೂರ್ತಿ ಖನ್ನಾ ಅವರು ಹೈಕೋರ್ಟ್​ಗೆ ಹೋಗಿ ಎಂದು ಹೇಳಿದರು. ಸೊರೆನ್ ಅವರ ಮನವಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ಹೈಕೋರ್ಟ್​ಗೆ ನಿರ್ದೇಶನ ನೀಡುವಂತೆ ಸಿಂಘ್ವಿ ನ್ಯಾಯಪೀಠವನ್ನು ಒತ್ತಾಯಿಸಿದರು. ಸಿಂಘ್ವಿ ಮಂಡಿಸಿದ ಈ ಮನವಿಯನ್ನು ನ್ಯಾಯಪೀಠ ಒಪ್ಪಿಕೊಂಡಿತು.

"ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಪ್ರಸ್ತುತ ರಿಟ್ ಅರ್ಜಿಯನ್ನು ಪರಿಗಣಿಸಲು ನಾವು ಒಲವು ಹೊಂದಿಲ್ಲ ಮತ್ತು ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಹೈಕೋರ್ಟ್​ಗೆ ಹೋಗಲು ಅರ್ಜಿದಾರರಿಗೆ ಮುಕ್ತ ಅವಕಾಶವಿದೆ" ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಕರಣವನ್ನು ತ್ವರಿತವಾಗಿ ಆಲಿಸಿ ವಿಲೇವಾರಿ ಮಾಡುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್​ಗೆ ಸೂಚಿಸಿತು.

ಬೃಹತ್ ಪ್ರಮಾಣದ ಭೂಮಿಯನ್ನು ಅಕ್ರಮವಾಗಿ ಪಡೆದುಕೊಂಡಿರುವುದು ಮತ್ತು ಭೂ ಮಾಫಿಯಾದೊಂದಿಗೆ ನಂಟು ಹೊಂದಿರುವ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸೊರೇನ್ ಅವರನ್ನು ಬಂಧಿಸಲಾಗಿದೆ. ತನ್ನ ಬಂಧನವನ್ನು ಅನಗತ್ಯ ಮತ್ತು ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಘೋಷಿಸುವಂತೆ ಸೊರೇನ್ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಅರ್ಜಿದಾರರು ಪ್ರಮುಖ ವಿರೋಧ ಪಕ್ಷವಾದ ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕ ಮತ್ತು ಐಎನ್​ಡಿಐಎ ಮೈತ್ರಿಕೂಟದ ಪಾಲುದಾರನಾಗಿರುವುದರಿಂದ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಇಡಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ತನ್ನ ಬಂಧನವು ವ್ಯವಸ್ಥಿತ ಪಿತೂರಿಯ ಭಾಗವಾಗಿರುವುದರಿಂದ ತನ್ನನ್ನು ತಕ್ಷಣ ಬಿಡುಗಡೆ ಮಾಡಲು ಇಡಿಗೆ ನಿರ್ದೇಶನ ನೀಡುವಂತೆ ಸೊರೆನ್ ನ್ಯಾಯಾಲಯಕ್ಕೆ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಕೆಲಸ ಮಾಡುತ್ತಿರುವ ಇಡಿ ಕ್ರಮವು ಪ್ರಜಾಪ್ರಭುತ್ವವಾಗಿ ಆಯ್ಕೆಯಾದ ತನ್ನ ಸರ್ಕಾರವನ್ನು ಉರುಳಿಸುವ ಉದ್ದೇಶ ಹೊಂದಿದೆ ಎಂದು ಸೊರೇನ್ ಆರೋಪಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಇಡಿ ವಿಚಾರಣೆಗೆ 5ನೇ ಬಾರಿ ಸಿಎಂ ಕೇಜ್ರಿವಾಲ್ ಗೈರು

ABOUT THE AUTHOR

...view details