ಕರ್ನಾಟಕ

karnataka

ಟ್ರ್ಯಾಕ್ಟರ್, ಬಸ್ ನಡುವೆ ಡಿಕ್ಕಿ: ಆರು ಕಾರ್ಮಿಕರು ಸಾವು

By ETV Bharat Karnataka Team

Published : Feb 26, 2024, 9:24 AM IST

ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಭಾನುವಾರ ತಡರಾತ್ರಿ ಟ್ರ್ಯಾಕ್ಟರ್ ಮತ್ತು ಬಸ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಆರು ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Etv Bharat
Etv Bharat

ಜೌನ್ಪುರ (ಉತ್ತರ ಪ್ರದೇಶ): ಸಿಕ್ರಾರಾ ಪ್ರದೇಶದ ಸಮದ್‌ಗಂಜ್ ಮಾರುಕಟ್ಟೆ ಬಳಿ ಭಾನುವಾರ ತಡರಾತ್ರಿ ಕಾರ್ಮಿಕರಿದ್ದ ಟ್ರ್ಯಾಕ್ಟರ್​ಗೆ ಬಸ್ ಡಿಕ್ಕಿ ಹೊಡೆದಿದೆ. ಈ ರಸ್ತೆ ಅಪಘಾತದಲ್ಲಿ ಆರು ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಟ್ರ್ಯಾಕ್ಟರ್​ನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಅಪಘಾತಕ್ಕೆ ಒಳಗಾಗಿರುವ ಬಸ್ ಪ್ರಯಾಗ್‌ರಾಜ್‌ನಿಂದ ಗೋರಖ್‌ಪುರಕ್ಕೆ ಹೋಗುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದರು.

ವಾಹನದ ಕೆಳಗೆ ಸಿಲುಕಿದ್ದ ಶವಗಳು: ದುರ್ಘಟನೆಯಲ್ಲಿ 5 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟ್ರ್ಯಾಕ್ಟರ್ ಅಡಿ ಸಿಲುಕಿಕೊಂಡಿದ್ದ ಮೃತ ದೇಹಗಳನ್ನು ಹೊರ ತೆಗೆಯಲಾಯಿತು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ಅಪಘಾತ ಸಂಭವಿಸಿದಾಗ ಸಮೀಪದ ಗ್ರಾಮಸ್ಥರು ಮಲಗಿದ್ದರು. ಶಬ್ದ ಕೇಳಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು.

ಅಲಿಶಾಪುರ ನಿವಾಸಿ ನೀರಜ್ ಸರೋಜ್ (28), ರಾಜೇಶ್ ಸರೋಜ್ (45), ಸಂಗ್ರಾಮ್ ಸರೋಜ್ (25), ಚಾಯ್ ಮುಸಾಹರ್ (20), ವೀರಪಾಲ್‌ಪುರ ನಿವಾಸಿ ಅತುಲ್ ಸರೋಜ್ (30), ಬತುವವಾರ್ ನಿವಾಸಿ ಗೋವಿಂದ ಬಿಂದ್ (30) ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗಾಯ: ಅಪಘಾತದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಗ್ರಾಮಾಂತರ ಎಸ್ಪಿ ತಿಳಿಸಿದ್ದಾರೆ. ಟ್ರ್ಯಾಕ್ಟರ್​ನ ಟ್ರಾಲಿಯಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದೆ. ರಸ್ತೆಯಲ್ಲಿ ನುಜ್ಜುಗುಜ್ಜಾದ ಟ್ರ್ಯಾಕ್ಟರ್ ಬಿಡಿಭಾಗಗಳನ್ನು ರಸ್ತೆಯಿಂದ ತೆರವುಗೊಳಿಸಿದ ನಂತರ ಸಂಚಾರ ಸುಗಮಗೊಳಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಪ್ರಕರಣ, ಟ್ರ್ಯಾಕ್ಟರ್​ ಪಲ್ಟಿಯಾಗಿ 24 ಜನರ ಸಾವು: ಉತ್ತರಪ್ರದೇಶದ ಕಾಸ್‌ಗಂಜ್‌ನಲ್ಲಿ ಇತ್ತೀಚೆಗೆ ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್​ವೊಂದು ಪಲ್ಟಿಯಾಗಿ ಹೊಂಡದಲ್ಲಿ ಬಿದ್ದಿತ್ತು. ಪರಿಣಾಮ 8 ಮಕ್ಕಳು ಹಾಗೂ 13 ಮಹಿಳೆಯರು ಸೇರಿದಂತೆ ಒಟ್ಟು 24 ಜನರು ಮೃತಪಟ್ಟಿದ್ದರು. ಟ್ರ್ಯಾಕ್ಟರ್​ನಲ್ಲಿ ಒಟ್ಟು 35 ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ಟ್ರಾಲಿಯಲ್ಲಿದ್ದ ಕೆಲವರು ಈಜಿಕೊಂಡು ಬಂದು ದಡ ಸೇರಿದ್ದರು. ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ಅಷ್ಟೊತ್ತಿಗಾಗಲೇ ಈ ಅಪಘಾತದಲ್ಲಿ 24 ಜನರು ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡ ನಾಲ್ವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ:ನಿಯಂತ್ರಣ ತಪ್ಪಿದ ಕಾರು, ಹೆದ್ದಾರಿಯಲ್ಲಿ ಸರಣಿ ಅಪಘಾತ: 9 ಜನ ದುರ್ಮರಣ

ABOUT THE AUTHOR

...view details