ಕರ್ನಾಟಕ

karnataka

ದೇವೇಗೌಡರ ಮಾತಿಗೆ ಮಣಿದ ಮಧುಗಿರಿ ಶಾಸಕ.. ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದವರು ಯೂಟರ್ನ್​

By

Published : Nov 28, 2022, 8:07 PM IST

ಮುಂದಿನ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ನಾನೇ ಅಭ್ಯರ್ಥಿಯಾಗಲಿದ್ದೇನೆ. ದೇವೇಗೌಡ ಅವರ ಕುಟುಂಬಕ್ಕೆ ಇಲ್ಲ ಎಂದು ಹೇಳಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ನಾನು ನನ್ನ ಮನಸ್ಸನ್ನು ಬದಲಾಯಿಸಿದ್ದೇನೆ ಎಂದು ಮಧುಗಿರಿ ಶಾಸಕ ಎಂ ವಿ ವೀರಭದ್ರಯ್ಯ ಅವರು ಹೇಳಿದ್ದಾರೆ.

ಶಾಸಕ ಎಂ ವಿ ವೀರಭದ್ರಯ್ಯ
ಶಾಸಕ ಎಂ ವಿ ವೀರಭದ್ರಯ್ಯ

ತುಮಕೂರು: ಮುಂದೆ ಬರಲಿರುವ ಚುನಾವಣೆಯಲ್ಲಿ ನಾನು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ. ನನ್ನ ಕುಟುಂಬದವರೂ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದ ಮಧುಗಿರಿ ಶಾಸಕ ಎಂ ವಿ ವೀರಭದ್ರಯ್ಯ ಯೂಟರ್ನ್ ಹೊಡೆದಿದ್ದು, ಮುಂದಿನ ಚುನಾವಣೆಗೆ ತಾವೇ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ನಾನೇ ಅಭ್ಯರ್ಥಿಯಾಗಲಿದ್ದೇನೆ. ದೇವೇಗೌಡ ಅವರ ಕುಟುಂಬಕ್ಕೆ ಇಲ್ಲ ಎಂದು ಹೇಳಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಮನಸ್ಸನ್ನು ಬದಲಾಯಿಸಿರುವುದಾಗಿ ಹೇಳಿದರು.

ಕೆಲ ಕಾರಣಗಳಿಂದಾಗಿ ನಾನು ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೆ. ನನ್ನ ಕುಟುಂಬದವರು ಕೂಡಾ ಸ್ಪರ್ಧಿಸುವುದು ಬೇಡ ಎನ್ನುತ್ತಿದ್ದರು. ಹೀಗಾಗಿಯೇ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ತೀರ್ಮಾನವನ್ನು ತೆಗೆದುಕೊಂಡಿದ್ದೆ. ಆದರೆ, ಈ ಸುದ್ದಿಯು ಮಾಧ್ಯಮಗಳಲ್ಲಿ ಬಂದ ನಂತರ ಪಕ್ಷದ ಕಾರ್ಯಕರ್ತರು ಬೆಂಗಳೂರಿನ ನನ್ನ ಮನೆಯ ಮುಂದೆ ಧರಣಿ ನಡೆಸಿದರು. ನಾನು ಸ್ಪರ್ಧೆ ಮಾಡಲೇಬೇಕೆಂದು ಹಠ ಹಿಡಿದರು. ನಾನು ನಿರ್ಧಾರ ಬದಲಿಸಲು ಇದೂ ಒಂದು ಕಾರಣವಾಗಿದೆ ಎಂದರು.

ಗೆಲುವು ಸಾಧಿಸುವ ವಿಶ್ವಾಸವಿದೆ:ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ನನ್ನ ಬಳಿ ಮತ್ತು ನಮ್ಮ ಮಗನ ಜತೆ ಮಾತನಾಡಿದರು. ಹೈಕಮಾಂಡ್ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ಹೈಕಮಾಂಡ್ ಸೂಚನೆ ಮತ್ತು ಕಾರ್ಯಕರ್ತರ ಒತ್ತಾಯಕ್ಕೆ ನಾನು ಮಣಿದಿದ್ದೇನೆ. ಮುಂಬರುವ ಚುನಾವಣೆಯಲ್ಲೂ ನಾನೇ ಅಭ್ಯರ್ಥಿಯಾಗಿರಲಿದ್ದು, ಗೆಲುವು ಸಾಧಿಸುವ ವಿಶ್ವಾಸವಿದೆ.

ಮಧುಗಿರಿಯನ್ನು ಜಿಲ್ಲೆಯನ್ನಾಗಿಸುವುದು, ಏಕಶಿಲಾ ಬೆಟ್ಟಕ್ಕೆ ರೋಪ್​ವೇ ಮಾಡಿಸುವುದು ನನ್ನ ಮುಂದಿನ ಗುರಿಯಾಗಿದ್ದು, ಇವುಗಳು ಈಡೇರಿದರೆ ಮಾತ್ರ ನನಗೆ ಸಮಾಧಾನ. ಅಲ್ಲದೆ, ಹೆಚ್​. ಡಿ ಕುಮಾರಸ್ವಾಮಿ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿಸುವುದು ಇದೇ ನಮ್ಮ ಗುರಿ ಎಂದು ಹೇಳಿದರು.

ಶಾಸಕ ಎಂ ವಿ ವೀರಭದ್ರಯ್ಯ ಅವರು ಮಾತನಾಡಿದರು

ಮನವೊಲಿಕೆಗೆ ಕಸರತ್ತು: ಇತ್ತೀಚೆಗೆ ಶಾಸಕ ವೀರಭದ್ರಯ್ಯ ಅವರು, 'ತಾವು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ' ಎಂದು ಕಾರ್ಯಕರ್ತರ ಸಮ್ಮುಖದಲ್ಲಿ, ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇದು ರಾಜಕೀಯ ವಲಯದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಬಳಿಕ ಅವರ ಮನವೊಲಿಕೆ ಕಸರತ್ತುಗಳು ನಡೆದಿದ್ದವು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ್ದರು. ಈಗ ಕೊನೆಗೂ ಶಾಸಕ ವೀರಭದ್ರಯ್ಯ ಮನಸ್ಸನ್ನು ಬದಲಾಯಿಸಿದ್ದು, ಮುಂದಿನ ಚುನಾವಣೆಗೆ ಜೆಡಿಎಸ್‌ನಿಂದ ತಾವೇ ಅಭ್ಯರ್ಥಿಯೆಂದು ಘೋಷಣೆ ಮಾಡಿದ್ದಾರೆ.

ಓದಿ:ಸಿದ್ದರಾಮಯ್ಯಗೆ ಎರಡು ಸಾರಿ ನನ್ನಿಂದಲೇ ರಾಜಕೀಯ ಜೀವದಾನ ಸಿಕ್ಕಿದೆ: ಹೆಚ್​ ಡಿ ಕುಮಾರಸ್ವಾಮಿ

ABOUT THE AUTHOR

...view details