ETV Bharat / state

ಬಂಡಾಯ ಅಭ್ಯರ್ಥಿ ರಘುಪತಿ ಭಟ್​​ಗೆ ನೋಟಿಸ್ ಜಾರಿ ಮಾಡಿದ ಬಿಜೆಪಿ ಶಿಸ್ತು ಸಮಿತಿ - BJP Notice To Raghupati Bhat

author img

By ETV Bharat Karnataka Team

Published : May 23, 2024, 3:54 PM IST

ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಘುಪತಿ ಭಟ್​ ಅವರಿಗೆ ಬಿಜೆಪಿ ನೋಟಿಸ್ ಜಾರಿಗೊಳಿಸಿದೆ.

ರಘುಪತಿ ಭಟ್
ರಘುಪತಿ ಭಟ್ (ETV Bharat)

ಬೆಂಗಳೂರು: ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಘುಪತಿ ಭಟ್‌ ವಿರುದ್ಧ ರಾಜ್ಯ ಬಿಜೆಪಿ ಕ್ರಮಕ್ಕೆ ಮುಂದಾಗಿದೆ. ಇದೀಗ ಮೊದಲ ಹಂತವಾಗಿ ಬಿಜೆಪಿ ಶಿಸ್ತು ಸಮಿತಿಯಿಂದ ರಘುಪತಿ ಭಟ್​​ಗೆ ನೋಟಿಸ್ ಜಾರಿಗೊಳಿಸಿದ್ದು, ಎರಡು ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ.

ರಘುಪತಿ ಭಟ್​​ಗೆ ನೋಟಿಸ್ ಜಾರಿ ಮಾಡಿದ ಬಿಜೆಪಿ ಶಿಸ್ತು ಸಮಿತಿ
ರಘುಪತಿ ಭಟ್​​ಗೆ ನೋಟಿಸ್ ಜಾರಿ ಮಾಡಿದ ಬಿಜೆಪಿ ಶಿಸ್ತು ಸಮಿತಿ (ETV Bharat)

ಈ ಸಂಬಂಧ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಮಾಜಿ ಶಾಸಕ, ನೈರುತ್ಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ ರಘುಪತಿ ಭಟ್​​ಗೆ ನೋಟಿಸ್ ನೀಡಿದ್ದು, ಶಿಸ್ತು ಸಮಿತಿ ಮುಂದೆ ಬಂಡಾಯ ಸ್ಪರ್ಧೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ಕೇಳಿದ್ದಾರೆ. ಎರಡು ದಿನಗಳ ಒಳಗಾಗಿ ಸ್ಪಷ್ಟೀಕರಣ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.

ಇಂದು ಬೆಳಗ್ಗೆಯಷ್ಟೇ ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣಾ ಕಣದಿಂದ 24 ಗಂಟೆಯೊಳಗೆ ನಿವೃತ್ತಿ ಘೋಷಿಸಿ ಇಲ್ಲವೇ ಪಕ್ಷದ ಶಿಸ್ತು ಉಲ್ಲಂಘನೆಗಾಗಿ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಕೆ ರಘುಪತಿ ಭಟ್‌ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ನೋಟಿಸ್ ಜಾರಿಯಾಗಿದೆ.

ಈ ಬಾರಿಯ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮಾಜಿ ಶಾಸಕ ರಘುಪತಿ ಭಟ್ ನಿರ್ಧರಿಸಿದ್ದರು. ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್ ಕೈತಪ್ಪಿ ಶಿವಮೊಗ್ಗದಲ್ಲಿ ಮಕ್ಕಳ ತಜ್ಞರಾಗಿರುವ ಡಾ.ಧನಂಜಯ ಸರ್ಜಿ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿತ್ತು. ಇದನ್ನು ವಿರೋಧಿಸಿದ್ದ ರಘುಪತಿ ಭಟ್ ಟಿಕೆಟ್ ಬೇಡಿಕೆ ಇಟ್ಟರು. ಇದನ್ನು ಬಿಜೆಪಿ ಪರಿಗಣಿಸದೇ ಇದ್ದರಿಂದ ಬಂಡಾಯವಾಗಿ ಸ್ಪರ್ಧೆ ಮಾಡಿದರು. ಅವರ ಮನವೊಲಿಕೆ ಪ್ರಯತ್ನ ನಡೆಸಿದರೂ ಸಫಲವಾಗಿರಲಿಲ್ಲ. ನಾಮಪತ್ರ ವಾಪಸ್ ಪಡೆಯದೇ ಕಣದಲ್ಲಿ ಉಳಿದ ಹಿನ್ನೆಲೆಯಲ್ಲಿ ಈಗ ನೋಟಿಸ್ ಜಾರಿಗೊಳಿಸಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಲಾಗಿದೆ. ನೋಟಿಸ್ ನೀಡಿರುವುದು ಮೊದಲ ಹಂತವಾಗಿದ್ದು, ಸ್ಪಷ್ಟೀಕರಣದ ನಂತರ ಕ್ರಮಕ್ಕೆ ಬಿಜೆಪಿ ಮುಂದಾಗಲಿದೆ.

ರಘುಪತಿ ಭಟ್​ಗೆ ಈಶ್ವರಪ್ಪ ಬೆಂಬಲ: ವಿಧಾನಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್​ಗೆ ಬೆಂಬಲ‌ ನೀಡುವುದಾಗಿ ಈಶ್ವರಪ್ಪನವರ ನೇತೃತ್ವದ ರಾಷ್ಟ್ರಭಕ್ತ ಬಳಗ ಈಗಾಗಲೇ ಘೋಷಿಸಿದೆ. ಇತ್ತೀಚೆಗೆ ತಮ್ಮ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ರಘುಪತಿ ಭಟ್​ಗೆ ಬೆಂಬಲ‌ ನೀಡಿ, ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಈಶ್ವರಪ್ಪ ಕರೆ ನೀಡಿದರು. ರಘುಪತಿ ಭಟ್ ನಮ್ಮಂತೆ ಸಾಮಾನ್ಯ ಕಾರ್ಯಕರ್ತರು. ಅವರು ಪರಿಷತ್​ಗೆ ಹೋಗಬೇಕು ಎಂದು ಈಶ್ವರಪ್ಪ ತಿಳಿಸಿದ್ದರು.

ಇದನ್ನೂ ಓದಿ: ಪರಿಷತ್‌ ಚುನಾವಣೆ: ಪಕ್ಷೇತರರಾಗಿ ಸ್ಪರ್ಧಿಸಲು ರಘುಪತಿ ಭಟ್ ನಿರ್ಧಾರ - Raghupathi Bhat

ETV Bharat Logo

Copyright © 2024 Ushodaya Enterprises Pvt. Ltd., All Rights Reserved.