ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರಿಗೆ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲೂ ಸ್ಪರ್ಧಿಸಲು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.
ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಪತಿ ಭಟ್, ಬಿಜೆಪಿ ನಿಲುವಿನ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. "ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಮೇ 16ರಂದು ನಾಮಪತ್ರ ಸಲ್ಲಿಸಲಿದ್ದೇನೆ" ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
"ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತೇನೆ. ಪರಿಷತ್ ಚುನಾವಣೆ ದೇಶ ಅಥವಾ ರಾಜ್ಯ ಸರಕಾರ ರಚನೆಯ ನಿರ್ಣಾಯಕ ಚುನಾವಣೆಯಲ್ಲ. ನಾನು ಬಿಜೆಪಿ ಕಾರ್ಯಕರ್ತ. ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದರೆ ಯಾವುದೇ ನಷ್ಟವಿಲ್ಲ. ನಾನು ಸೋತರೂ ಬಿಜೆಪಿಯಲ್ಲಿ, ಗೆದ್ದರೂ ಬಿಜೆಪಿಯಲ್ಲೇ ಇರುತ್ತೇನೆ. ಇದು ಯಾವುದೇ ಬಂಡಾಯವಲ್ಲ. ಯಾವುದೇ ಪಕ್ಷ, ನಾಯಕರ ವಿರುದ್ಧವೂ ಅಲ್ಲ. ನನಗಾಗಿ, ಜನರ ಸೇವೆಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ'' ಎಂದರು.
"ಕರಾವಳಿ ಭಾಗದ ಧ್ವನಿಯಾಗಿ, ಮತದಾರರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡುತ್ತೇನೆ. ಪಕ್ಷದ ನಿಲುವಿನಿಂದ ಕರಾವಳಿಗೆ ಅನ್ಯಾಯವಾಗಿದೆ. ಭೌಗೋಳಿಕ ನ್ಯಾಯಕ್ಕಾಗಿ ಪಕ್ಷೇತರ ಸ್ಪರ್ಧೆ ಅನಿವಾರ್ಯ. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್, ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಪಕ್ಷದ ವರಿಷ್ಠರು ಟಿಕೆಟ್ ಭರವಸೆ ಕೊಟ್ಟಿದ್ದರು. ಆದರೆ ಈಗ ನಿರ್ಧಾರ ಬದಲಾಗಿದೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರಲಿಲ್ಲ. ಆದರೆ ಹಣ ಬಲ, ಜಾತಿ ಬಲಕ್ಕೆ ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ಟಿಕೆಟ್ ಸಿಕ್ಕಿದೆ. ಜನರ ನಡುವೆ ನಿಂತು ಕೆಲಸ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ'' ಎಂದು ಹೇಳಿದರು.
ಸುನಿಲ್ ಕುಮಾರ್ ಸಂಧಾನ ವಿಫಲ: ರಘುಪತಿ ಭಟ್ ಮನೆಗೆ ಭೇಟಿ ನೀಡಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಸಂಧಾನ ಮಾತುಕತೆ ನಡೆಸಿದರು. ಆದರೆ ಭಟ್ ತಮ್ಮ ಅಚಲ ನಿರ್ಧಾರ ತಿಳಿಸಿದ್ದು, ಸಂಧಾನ ವಿಫಲವಾಗಿದೆ.
ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಬಿಜೆಪಿಯಲ್ಲಿ ನಾನು ಟಿಕೆಟ್ ಕೊಡುವವನೂ ಅಲ್ಲ. ಭರವಸೆ ಕೊಡುವವನೂ ಅಲ್ಲ. ಪಕ್ಷದ ಕಟ್ಟಡಕ್ಕೆ ಯಾವ ರೀತಿ ಇಟ್ಟಿಗೆ ಇಡಲು ಸಾಧ್ಯವೋ ಆ ಕೆಲಸ ಮಾಡುತ್ತೇನೆ. ಕಟ್ಟಡವನ್ನು ಗಟ್ಟಿ ಮಾಡುವುದಕ್ಕೆ ಪರಿಶ್ರಮ ಹಾಕುವೆ. ಉಳಿದೆಲ್ಲ ನಿರ್ಣಯ ರಾಜ್ಯ ನಾಯಕರದ್ದು. ಪದವೀಧರ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ್ದಕ್ಕೆ ತಮ್ಮ ಭಾವನೆ ಹೇಳಿಕೊಂಡಿದ್ದಾರೆ. ದುಡುಕಿನ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೇನೆ. ಸಾಕಷ್ಟು ಭಾವನಾತ್ಮಕವಾಗಿ ವಿಚಾರಗಳ ಜೊತೆಗೆ ನಾವಿದ್ದೇವೆ".
"ಪಕ್ಷದ ವಿರುದ್ಧ ಅಥವಾ ಪಕ್ಷ ಬಿಟ್ಟು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ರಘುಪತಿ ಭಟ್ಟರು ಮನಃಪರಿವರ್ತನೆಯಾದಂತೆ ಕಾಣುತ್ತಿಲ್ಲ. ಕಳೆದ ವಿಧಾನಸಭೆ ಚುನಾವನೆಯಲ್ಲಿ ಪಕ್ಷದ ಟಿಕೆಟ್ ತಪ್ಪಿದಾಗ ಪಕ್ಷಕ್ಕೆ ತೊಂದರೆಯಾಗುವ ಕೆಲಸ ಮಾಡಿಲ್ಲ. ಪಕ್ಷಕ್ಕಾಗಿ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡಿದ್ದಾರೆ. ದುಡುಕಿನ ನಿರ್ಧಾರ ಮಾಡಬೇಡಿ ಎಂದಿದ್ದೇನೆ. ಇನ್ನೂ ಸಮಯವಿದೆ. ಈ ಎಲ್ಲ ಸಂಗತಿಗಳನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರುತ್ತೇನೆ. ಪಕ್ಷದಲ್ಲಿ ಮಾತುಕತೆಯ ಮೂಲಕ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಇದೆ. ವರಿಷ್ಠರು ಸೌಹಾರ್ದತೆ ಪರಿಹಾರ ಕಾಣುವ ವಿಶ್ವಾಸವಿದೆ. ರಘುಪತಿ ಭಟ್ಟರ ಪಕ್ಷ ನಿಷ್ಠೆಯ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. 2004ರಲ್ಲಿ ನಾವಿಬ್ಬರು ಜತೆಯಾಗಿ ವಿಧಾನಸಭೆಗೆ ಬಂದವರು. ಸ್ನೇಹಿತ, ಪಕ್ಷದ ನೆಲೆಯಲ್ಲಿ ದುಡುಕಿನ ತೀರ್ಮಾನ ಮಾಡಬೇಡಿ ಎಂದು ಹೇಳಿದ್ದೇನೆ'' ಎಂದು ಹೇಳಿದರು.