ಮೈಸೂರು:ಮೈಸೂರು ನಗರದಲ್ಲಿ ಮೂರ್ನಾಲ್ಕು ಕಡೆ ಕ್ಯಾಸಿನೊ ಕ್ಲಬ್ ನಡೆಯುತ್ತಿದ್ದು. ಬಿಜೆಪಿಯವರೇ ಈ ಪರಂಪರೆಯನ್ನು ಬೆಳೆಸುತ್ತಿದ್ದಾರೆ. ರಾಜ್ಯದಲ್ಲಿ ಕ್ಯಾಸಿನೊ ಶುರು ಮಾಡಿದ್ದೇ ಬಿಜೆಪಿಯವರು. ನಾನು ಖಂಡಿತವಾಗಿ ಕ್ಯಾಸಿನೊ ಕ್ಲಬ್ಗಳನ್ನು ಮುಚ್ಚಿಸುತ್ತೇನೆ ಎಂದು ನೂತನ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಆರೋಪಿಸಿದ್ದಾರೆ.
ಇಂದು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ನ ಚಾಮರಾಜ ಕ್ಷೇತ್ರದ ನೂತನ ಶಾಸಕ ಹರೀಶ್ ಗೌಡ, ಶಾಸಕನಾಗಿ ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಹಾಗೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಖರ್ಗೆಯವರಿಗೆ ಅಭಿನಂದನೆ ಸಲ್ಲಿಸಿದರು. ಮೈಸೂರು ನಗರದಲ್ಲಿ ಹುಕ್ಕಾ ಬಾರ್ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಗರದ ಕೆಲವು ಭಾಗಗಳಲ್ಲಿ ಹುಕ್ಕಾ ಬಾರ್ ಇದೆ. ಆದರೆ, ಇದರ ಜೊತೆಗೆ ಮೈಸೂರು ನಗರದಲ್ಲಿ ಮೂರ್ನಾಲ್ಕು ಕಡೆ ಕ್ಯಾಸಿನೊ ನಡೆಯುತ್ತಿದ್ದು. ರಾಜ್ಯದಲ್ಲಿ ಬಿಜೆಪಿಯವರು ಕ್ಯಾಸಿನೊ ಪರಂಪರೆ ಬೆಳೆಸಿದ್ದಾರೆ ಎಂದು ಆರೋಪಿಸಿದರು.
ಮಾಜಿ ಮಂತ್ರಿ ಅಶ್ವಥ್ ನಾರಾಯಣ್ ಅವರು ಒಮ್ಮೆ ಕರೆ ಮಾಡಿ ನನ್ನ ಕುಟುಂಬದ ಸದಸ್ಯರು ಇಲ್ಲಿ ಕ್ಯಾಸಿನೊ ನಡೆಸುತ್ತಿದ್ದಾರೆ, ಅವರಿಗೆ ತೊಂದರೆ ಕೊಡಬೇಡ ಎಂದು ಹೇಳಿದ್ದರು ಎಂದು ಆರೋಪಿಸಿದ ಶಾಸಕರು, ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಜೂಜು ಅಡ್ಡೆ ಹೆಚ್ಚಾಗಿದ್ದು, ಖಂಡಿತವಾಗಿಯೂ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಅವುಗಳನ್ನು ಮುಚ್ಚಿಸುವ ಕೆಲಸ ಮಾಡುತ್ತೇನೆ ಎಂದು ನೂತನ ಶಾಸಕ ಹರೀಶ್ ಗೌಡ ಹೇಳಿದರು.