ಮೈಸೂರು :ಆಭರಣ ಇಡುವುದಾಗಿ ನಂಬಿಸಿ ಗೋಲ್ಡ್ ಫೈನಾನ್ಸ್ ಕಂಪನಿಗಳಿಗೆ ಗೋಲ್ಮಾಲ್ ಮಾಡಿ ಹಣವನ್ನು ಪಡೆದು ಪರಾರಿಯಾಗುತ್ತಿದ್ದ ಗಂಡ-ಹೆಂಡತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಭಾನುವಾರ ಮದ್ದೂರಿನ ಸೋಮನಹಳ್ಳಿ ಗ್ರಾಮದ ಬಳಿ ಬಂಧಿಸಲಾಗಿದೆ.
ಬಂಧಿತ ಮಹಿಳೆ ಹೆಸರು ಸೌಭಾಗ್ಯ@ಸೌಮ್ಯ ಮತ್ತು ಗಂಡನ ಹೆಸರು ಪ್ರಸಾದ್ ಎಂದು ತಿಳಿದು ಬಂದಿದೆ. ಇವರು ಮೂಲತ: ಗುಂಡ್ಲುಪೇಟೆ ತಾಲೂಕಿನ ಚಾಮರಾಜನಗರ ಜಿಲ್ಲೆಯ ಅಂಗಳ ಎಂಬ ಗ್ರಾಮದವರಾಗಿದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಹ ಹಲವು ಗೋಲ್ಡ್ ಫೈನಾನ್ಸ್ ಕಂಪನಿಗಳಿಗೆ ಚಿನ್ನಾಭರಣ ಗಿರವಿ ಇಡುವುದಾಗಿ ಹೇಳಿ ಯಾಮಾರಿಸಿ ಹಣ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ :ನಗರದ ಅಗ್ರಹಾರದ ಖಾಸಗಿ ಗೋಲ್ಡ್ ಫೈನಾನ್ಸ್ಗೆ ಅಪರಿಚಿತ ಮಹಿಳೆಯೊಬ್ಬಳು ಜುಲೈ 6ರಂದು ಕರೆ ಮಾಡಿ ತನ್ನ ಹೆಸರು ಸೌಮ್ಯ ಎಂದು ಪರಿಚಯಿಸಿಕೊಂಡಿದ್ದಳು. ತಾನು 50 ಗ್ರಾಂ ಚಿನ್ನಾಭರಣವನ್ನು ಸಾಲಿಗ್ರಾಮದ ಗಿರವಿ ಅಂಗಡಿಯಲ್ಲಿ 1 ಲಕ್ಷದ 75 ಸಾವಿರಕ್ಕೆ ಗಿರವಿ ಇಟ್ಟಿದ್ದೇನೆ. ಅದನ್ನು ಬಿಡಿಸಿಕೊಟ್ಟರೆ ಆ ಚಿನ್ನಾಭರಣಗಳನ್ನು ನಿಮ್ಮ ಗೋಲ್ಡ್ ಫೈನಾನ್ಸ್ನಲ್ಲಿ ಇಡುವುದಾಗಿ ಹೇಳಿದ್ದಾಳೆ.