ಕರ್ನಾಟಕ

karnataka

ತಂದೆ ಮಾಡಿದ್ದ ಸಾಲಕ್ಕೆ ಅಪ್ರಾಪ್ತ ಮಗನಿಗೆ ಬ್ಯಾಂಕ್ ನೋಟಿಸ್​: ಪ್ರಕರಣ ದಾಖಲಿಸುವಂತೆ ಮಕ್ಕಳ ಆಯೋಗದ ಸೂಚನೆ

By

Published : Nov 12, 2021, 1:59 PM IST

bank-notice-to-minor-for-loan-made-by-his-father
ತಂದೆ ಮಾಡಿದ್ದ ಸಾಲಕ್ಕೆ ಅಪ್ರಾಪ್ತ ಮಗನಿಗೆ ಬ್ಯಾಂಕ್ ನೋಟಿಸ್

ತಂದೆ ಮಾಡಿದ್ದ ಸಾಲವನ್ನು ತೀರಿಸುವಂತೆ ಪೋಷಕರು ನಿಧನರಾದ ಬಳಿಕ ಬ್ಯಾಂಕ್ ಆಪ್ರಾಪ್ತ ಪುತ್ರನಿಗೆ ನೋಟಿಸ್ ನೀಡಿದೆ. ಈ ಘಟನೆ ಸಂಬಂಧ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಎಫ್​ಐಆರ್ ದಾಖಲಿಸಲು ಮಕ್ಕಳ ಆಯೋಗ ಸೂಚಿಸಿದೆ.

ಮೈಸೂರು: ಪೋಷಕರು ಮಾಡಿದ ಸಾಲ ತೀರಿಸುವಂತೆ ಬ್ಯಾಂಕ್ ಬಾಲಕನಿಗೆ ನೋಟಿಸ್ (Bank notice to minor) ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಬ್ಯಾಂಕ್ ಮ್ಯಾನೇಜರ್ ವಿರುದ್ಧ ಎಫ್​​​​ಐಆರ್ (FIR Against Bank Manager) ದಾಖಲಿಸಲು ಮಕ್ಕಳ ಆಯೋಗ (Child Commission) ಸೂಚಿಸಿದೆ.

ಅಕಾಲಿಕ ಮರಣಕ್ಕೆ ತುತ್ತಾದ ತಂದೆಯ ಸಾಲವನ್ನು ತೀರಿಸುವಂತೆ ಬ್ಯಾಂಕಿನ ಅಧಿಕಾರಿಗಳು, ಮಗನ ಹೆಸರಲ್ಲಿ ನೋಟಿಸ್ (Bank Notice) ಕಳುಹಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ (Karnataka State Child Protection Commission), ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲು‌ ಮುಂದಾಗಿದೆ.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಾನಾ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಮಕ್ಕಳ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ವೇಳೆ ಮಡಿಕೇರಿ (Madikeri) ಮೂಲದ ಬಾಲಕ, ನನ್ನ ತಂದೆ- ತಾಯಿ ಇಬ್ಬರು ನಿಧನರಾಗಿದ್ದು, ಅವರು ಮಾಡಿರುವ ಸಾಲವನ್ನು ಪಾವತಿಸುವಂತೆ ಬ್ಯಾಂಕಿನವರು ನೋಟಿಸ್ ನೀಡಿದ್ದಾರೆ. ಇದರಿಂದ ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದು, ಅಹವಾಲು ಆಲಿಸಿದ ಆಯೋಗದ ಅಧ್ಯಕ್ಷ ಡಾ.ಅಂಥೋಣಿ ಸಬಾಸ್ಟಿನ್, ಅಪ್ರಾಪ್ತ ಮಗನಿಗೆ ನೋಟಿಸ್ ನೀಡಿರುವುದು ಮಕ್ಕಳ ಹಕ್ಕು ಉಲ್ಲಂಘನೆಯಾಗಿದೆ (Child rights violations) ಎಂದಿದ್ದಾರೆ. ಈ ಕೂಡಲೇ ಬ್ಯಾಂಕ್ ಮ್ಯಾನೇಜರ್​​​ಗೆ ನೋಟಿಸ್ ನೀಡುವುದರೊಂದಿಗೆ ಪ್ರಕರಣ ದಾಖಲಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರಿನ ಒಡನಾಡಿ ಸಂಸ್ಥೆಯ (Odanadi NGO) ಸ್ಟ್ಯಾನ್ಲಿ, ಮಗುವಿನ ಪೋಷಕರು 6 ಎಕರೆ ಜಮೀನಿನ ಮೇಲೆ 12 ಲಕ್ಷ ರೂ.ಸಾಲ ಮಾಡಿದ್ದು, ಈ ಆಸ್ತಿ ಅನ್ಯರ‌ ಪಾಲಾಗದಂತೆ ಮಗುವಿನ ಹೆಸರಿಗೆ ಖಾತೆ ಮಾಡಿಸಬೇಕಿದೆ.‌ ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಮೈಸೂರಿನಲ್ಲಿ ಮನಕಲಕುವ ಘಟನೆ: ಚಿಕಿತ್ಸೆಗೆಂದು ಕರೆತಂದು ತಾಯಿ ಬಿಟ್ಹೋದ ಮಗಳು!

ABOUT THE AUTHOR

...view details