ETV Bharat / state

ತಾಯಿಗಿಂತ ದೇವರಿಲ್ಲ: ಅಗಲಿದ ತಾಯಿಗೆ ಗುಡಿ ಕಟ್ಟಿಸಿ ನಿತ್ಯ ಪೂಜಿಸುವ ಮಕ್ಕಳು - Temple For Mother

author img

By ETV Bharat Karnataka Team

Published : May 12, 2024, 8:37 AM IST

Updated : May 12, 2024, 10:47 AM IST

ಹಾವೇರಿಯ ಸಹೋದರರು ಮೃತಪಟ್ಟ ತಮ್ಮ ತಾಯಿಯ ಸ್ಮರಣಾರ್ಥ ದೇವಾಲಯ ಕಟ್ಟಿಸಿ ಪ್ರತಿದಿನ ಪೂಜಿಸುತ್ತಿದ್ದಾರೆ.

ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪುತ್ರ
ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪುತ್ರ (ETV Bharat)

ಅಗಲಿದ ತಾಯಿಗೆ ಗುಡಿ ಕಟ್ಟಿಸಿ ನಿತ್ಯ ಪೂಜಿಸುವ ಮಕ್ಕಳು (ETV Bharat)

ಹಾವೇರಿ: ಮೇ 12ನ್ನು ವಿಶ್ವ ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ತಾಯಿಯ ಮಮತೆ, ವಾತ್ಸಲ್ಯ ಪ್ರೀತಿ ಪ್ರತಿದಿನವೂ ಸುತ್ತ್ಯಾರ್ಹವೇ. ಹೀಗಿದ್ದರೂ ಅದಕ್ಕೊಂದು ವಿಶೇಷ ದಿನ ಮೀಸಲಿಡಲಾಗಿದೆ. ಈ ದಿನದ ವಿಶೇಷತೆ ಹೆಚ್ಚಿಸುವ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯ ಹಾನಗಲ್​ ತಾಲೂಕಿನ ಬಾಳೂರು ತಾಂಡಾದ ಅಣ್ಣಪ್ಪ ಲಮಾಣಿ ಮತ್ತು ಸಹೋದರರ ಕೈಂಕರ್ಯ ಗಮನ ಸೆಳೆಯುತ್ತಿದೆ.

ಈ ಸಹೋದರರು ಅಗಲಿದ ತಮ್ಮ ತಾಯಿಗೆ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ. ದೇಗಲದೊಳಗೆ ತಾಯಿಯ ಮೂರ್ತಿಯನ್ನಿಟ್ಟು ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದಾರೆ. ನೀವು ನೋಡುತ್ತಿರುವುದು ಹೇಮಲವ್ವ ಎಂಬ ಮಹಿಳೆಯ ಮೂರ್ತಿ. ಇವರಿಗೆ ಅಣ್ಣಪ್ಪ, ನೂರಪ್ಪ, ತಾವರೆಪ್ಪ ಮತ್ತು ವೀರಪ್ಪ ಎಂಬ ನಾಲ್ವರು ಗಂಡು ಮಕ್ಕಳಿದ್ದಾರೆ. 1998ರಲ್ಲಿ ಇವರು ಅನಾರೋಗ್ಯದಿಂದ ಅಸುನೀಗಿದ್ದರು.

ಇದರಿಂದ ಮನನೊಂದ ಅಣ್ಣಪ್ಪ ಮತ್ತು ಸಹೋದರರು ಅಗಲುವಿಕೆಯ ನೋವಿನಿಂದ ಹೊರಬರಲು ತಾಯಿಯ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದರು. ಅದರಂತೆ, 2010ರಲ್ಲಿ ಬಾಳೂರು ತಾಂಡಾದಲ್ಲಿ 5 ಲಕ್ಷ ರೂಪಾಯಿ ವ್ಯಯಿಸಿ ಮಾತಾ ದೇವಸ್ಥಾನ ಕಟ್ಟಿಸಿದ್ದಾರೆ. ಬನವಾಸಿಯ ಕಲಾವಿದರಿಂದ ಕೃಷ್ಣಶಿಲ್ಪದಲ್ಲಿ ತಾಯಿಯ ಮೂರ್ತಿ ಕೆತ್ತಿಸಿದ್ದಾರೆ. ಅಂದಿನಿಂದ ಪ್ರತಿನಿತ್ಯ ತಾಯಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಹೇಮಲವ್ವ ಅವರಿಗೆ ಲಂಬಾಣಿ ದಿರಿಸೆಂದರೆ ಪಂಚಪ್ರಾಣವಂತೆ. ಅವರ ಆಸೆಯಂತೆಯೇ ಲಂಬಾಣಿ ವೇಷದಲ್ಲಿರುವ ಮೂರ್ತಿಯನ್ನು ನೋಡಬಹುದು. ಯುಗಾದಿ, ಪಂಚಮಿ, ನವರಾತ್ರಿ, ದೀಪಾವಳಿಯ ಈ ದಿನಗಳಂದು ಮಾತಾಜಿ ದೇವಾಲಯ ಜನರಿಂದ ತುಂಬಿರುತ್ತದೆ.

ಹೇಮಲವ್ವ ಮೂರ್ತಿ
ಹೇಮಲವ್ವ ಮೂರ್ತಿ (ETV Bharat)

ಅಣ್ಣಪ್ಪ ಸರ್ಕಾರಿ ನೌಕರಿಯಲ್ಲಿದ್ದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲ ತಾಯಿಯ ದೇವಸ್ಥಾನಕ್ಕೆ ಆಗಮಿಸಿ ದಿನವಿಡೀ ಅಲ್ಲಿಯೇ ಸಮಯ ಕಳೆಯುತ್ತಾರಂತೆ. ತಾಯಿಯ ಸಾವಿನ ನಂತರ ಅವರಿಗಾಗಿ ಏನಾದರೂ ಮಾಡಬೇಕೆನ್ನುವ ವಿಚಾರ ಬಂದಾಗ ಸಂಬಂಧಿಕರ ಮತ್ತು ಹಿರಿಯರ ಸಲಹೆ ಕೇಳಿದ್ದಾರೆ. ಆಗ ದೇವಾಲಯ ಕಟ್ಟುವ ಸಲಹೆ ಬಂತು ಎಂದು ಅಣ್ಣಪ್ಪ ಹೇಳಿದರು.

ಅಮ್ಮಂದಿರ ದಿನದಂದು ತಾಂಡಾದ ಹಿರಿಯ ತಾಯಂದಿರನ್ನು ಆಹ್ವಾನಿಸುವ ಅಣ್ಣಪ್ಪ ಅವರನ್ನು ಸನ್ಮಾನಿಸುತ್ತಾರೆ. ಬಾಳೂರು ತಾಂಡಾ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಾತಾಜಿ ದೇವಸ್ಥಾನಕ್ಕೆ ಬರುವ ಭಕ್ತರಿದ್ದಾರೆ. ತಾಯಿ ಜೊತೆ ಮುನಿಸು, ಜಗಳವಾಡಿದ ಮಕ್ಕಳು ಇಲ್ಲಿಗೆ ಬಂದು ಬೇಡಿಕೊಳ್ಳುತ್ತಾರಂತೆ. ಇದಾದ ಬಳಿಕ ತಮ್ಮ ತಾಯಂದಿರೊಂದಿಗೆ ಮೊದಲಿನಂತೆ ಜೀವನ ನಡೆಸಿದ ಸಾಕಷ್ಟು ಉದಾಹರಣೆಗಳು ಇಲ್ಲಿವೆ ಎಂದು ಅಣ್ಣಪ್ಪ ತಿಳಿಸಿದರು.

ಇದನ್ನೂ ಓದಿ: ಅಮ್ಮ- ಮಗ ಇಬ್ಬರೂ ಒಟ್ಟಿಗೆ ಎಸ್​ಎಸ್​ಎಲ್​ಸಿ ಪಾಸ್: ಹಾಸನದಲ್ಲಿ ಅಪರೂಪದ ಸಾಧನೆ - mother and son passed SSLC

Last Updated : May 12, 2024, 10:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.