ಕರ್ನಾಟಕ

karnataka

ಪಾನಿಪುರಿ ತಿನ್ನಲು ಕೇರಿಗೆ ಬಂದ ಪರಿಶಿಷ್ಟರ ಮೇಲೆ ಹಲ್ಲೆ: ಮೈಸೂರಲ್ಲಿ 6 ಮಂದಿ ಆರೋಪಿಗಳ ಬಂಧನ

By

Published : Jan 16, 2022, 6:51 PM IST

ಮೈಸೂರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಎಂಬ ಅಮಾನವೀಯ ಪದ್ಧತಿ ಇನ್ನೂ ಜೀವಂತವಾಗಿದೆ. ಪರಿಶಿಷ್ಟ ಜಾತಿಯವರು ತಮ್ಮ ಕೇರಿಗೆ ಪಾನಿಪುರಿ ತಿನ್ನಲು ಬಂದರು ಎಂಬ ಕ್ಷುಲ್ಲಕ ಕಾರಣಕ್ಕೆ ಮತ್ತೊಂದು ಸಮುದಾಯವರು ಅವರ ಮೇಲೆ ಹಲ್ಲೆ ಮಾಡಿ ದುಷ್ಕೃತ್ಯ ಮೆರೆದಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.

six-accused-arrested-in-mysore
ಜಿಲ್ಲಾ ವರಿಷ್ಠಾಧಿಕಾರಿ ಆರ್. ಚೇತನ್ ಸ್ಥಳಕ್ಕೆ ಭೇಟಿ

ಮೈಸೂರು: ಸಮುದಾಯಗಳ ನಡುವೆ ಬೇರು ಬಿಟ್ಟಿರುವ ಜಾತಿಯ ಎಂಬ ಗುಮ್ಮ ಜನರ ಮನಸ್ಸಿನಿಂದ ದೂರ ಯಾವಾಗ ಆಗುತ್ತೆ ಎಂಬುದಕ್ಕೆ ಉತ್ತರ ಇಲ್ಲದಂತಾಗಿದೆ. ಕಾರಣ ಜಿಲ್ಲೆಯ ಗ್ರಾಮವೊಂದರಲ್ಲಿ ಪಾನಿಪುರಿ ತಿನ್ನಲು ತಮ್ಮ ಕೇರಿಗೆ ಪರಿಶಿಷ್ಟ ಜಾತಿಯವರು ಬಂದರು ಎಂಬ ಕ್ಷುಲ್ಲಕ ವಿಷಯವನ್ನೇ ದೊಡ್ಡದು ಮಾಡಿದ ಕೆಲವರು ಅವರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರು ಮಂದಿ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಗ್ರಾಮದ ಮೂರ್ತಿ, ಸಚಿನ್​, ನವೀನ್, ಮಹದೇವಸ್ವಾಮಿ, ಚಂದನ್, ಸಂತೋಷ್ ಬಂಧಿತರು. ಹಲ್ಲೆಗೊಳಗಾಗಿರುವ ಸೌಭಾಗ್ಯ, ದಿಲೀಪ್​, ಚಂದನ್​, ಮಧುಕರ, ಪ್ರಸನ್ನ ಅವರು ಮೈಸೂರಿನ ಕೆ. ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ಹಿನ್ನೆಲೆ: ದಿಲೀಪ್​, ಪ್ರಸನ್ನ ಮತ್ತು ಮಧುಕರ ಅವರು ಪಾನಿಪುರಿ ತಿನ್ನಲೆಂದು ಗುರುವಾರ ರಾತ್ರಿ 7.30ಕ್ಕೆ ಕೇರಿಗೆ ತೆರಳಿದ್ದರು. ಅದನ್ನು ಆಕ್ಷೇಪಿಸಿದ್ದ ಮೂರ್ತಿ, ಸಚಿನ್​ ಹಲ್ಲೆ ನಡೆಸಿದ್ದರು. ನಂತರ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸಂಧಾನವೂ ನಡೆದಿತ್ತು.

ಶುಕ್ರವಾರ ಬೆಳಗ್ಗೆ, ಆರೋಪಿಗಳಾದ ಮೂರ್ತಿ, ಸಚಿನ್ ಅವರು ದಿಲೀಪ್​, ಪ್ರಸನ್ನ ಮತ್ತು ಮಧುಕರ ಅವರ ಮನೆಗೆ ನುಗ್ಗಿ ಮತ್ತೆ ಹಲ್ಲೆ ನಡೆಸಿದ್ದರು. ತಡೆಯಲು ಮುಂದಾದ ಸೌಭಾಗ್ಯ ಮತ್ತು ಚಂದನ್​ ಅವರನ್ನೂ ಥಳಿಸಿದ್ದರು ಎನ್ನಲಾಗ್ತಿದೆ.

ಹಲ್ಲೆಗೊಳಗಾದವರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಜಾತಿ ನಿಂದನೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಎಸ್‌ಪಿ ಭೇಟಿ: ಅರಸಿನಕೆರೆ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ಜಿಲ್ಲಾ ವರಿಷ್ಠಾಧಿಕಾರಿ ಆರ್.ಚೇತನ್ ಅವರು, ಹಲ್ಲೆಗೊಳಗಾದದವರಿಂದ ಮಾಹಿತಿ ಪಡೆದರು. ನಂತರ ಇಂತಹ ಘಟನೆಗಳು ಮರುಕಳುಹಿಸಬಾರದು ಎಂದು ಎಚ್ಚರಿಕೆ ನೀಡಿದರು.

ಓದಿ:ಸಂಕ್ರಾಂತಿ ಕಿಚ್ಚು ಹಾಯಿಸುವ ವೇಳೆ ಬೆಂಕಿಗೆ ಬಿದ್ದ ಯುವಕ.. ಮಂಡ್ಯದಲ್ಲಿ ಅವಘಡ

ABOUT THE AUTHOR

...view details