ಕರ್ನಾಟಕ

karnataka

ಅನ್ನ-ಅಕ್ಷರ-ಅರಿವೆಂಬ ತ್ರಿವಿಧ ದಾಸೋಹದ ಸಂಕಲ್ಪ: ರಾಜ್ಯದ 2ನೇ ಸಿದ್ಧಗಂಗೆ ಕೊಪ್ಪಳದ ಗವಿಮಠ

By

Published : Aug 12, 2022, 6:03 AM IST

Second Siddagangaa Matha Of The State
ಗವಿಮಠದ ದಾಸೋಹ

ಈ ಭಾಗದ ನಡೆದಾಡುವ ದೇವರೆಂದೆ ಪ್ರಖ್ಯಾತಿ ಗಳಿಸಿರುವ ಅಭಿನವ ಗವಿಸಿದ್ದೇಶ್ವರರ ದೂರದೃಷ್ಟಿ, ಶಿಕ್ಷಣದ ಮೇಲಿರುವ ಪ್ರೇಮ, ಸಾಮಾಜಿಕ ಕಳಕಳಿಯಿಂದ ಈ ಕೊಪ್ಪಳದ ಗವಿಮಠ ಇದೀಗ ಕೇವಲ ಪೂಜೆಗಷ್ಟೆ ಸೀಮಿತವಾಗಿಲ್ಲ. ಪ್ರತಿಯಾಗಿ ಎಲ್ಲ ವರ್ಗದ ಅರಿವಿನ ದೀವಿಗೆಯಾಗಿದೆ. ಸದ್ಯ ರಾಜ್ಯದಲ್ಲಿ ತುಮಕೂರಿನ ಸಿದ್ದಗಂಗಾ ಮಠದಂತೆ ಕೊಪ್ಪಳದ ಮಠವೂ ಸಾಮಾಜಿಕ ಕಳಕಳಿಗೆ ಮಿಡಿಯುತ್ತಿರುವ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೊಪ್ಪಳ: ಹೊಟ್ಟೆ ಹಸಿದವರಿಗೆ ಅನ್ನ, ನೆತ್ತಿ ಹಸಿದವರಿಗೆ ವಿದ್ಯೆ ಹಾಗೂ ಆಧ್ಯಾತ್ಮದ ಹಸಿವಿರುವವರಿಗೆ ಬೋಧನೆ ನೀಡುವುದರ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಮೂಲಕವೂ ಕೊಪ್ಪಳದ ಗವಿಮಠ ನಾಡಿನ‌ ಭಕ್ತರ ಹೃದಯದಲ್ಲಿ ಶ್ರದ್ಧಾಕೇಂದ್ರವಾಗಿ ಸ್ಥಾನ ಪಡೆದಿದೆ. ಈ ಮೂಲಕ ಈ ಭಾಗದ ಸಿದ್ಧಗಂಗೆ ಎಂದೇ ಪ್ರಖ್ಯಾತಿ ಗಳಿಸಿದೆ.

ಕೊಪ್ಪಳದ ಗವಿಮಠ

ತುಮಕೂರಿನ ಸಿದ್ದಗಂಗಾ ಮಠದಂತೆ ಕೊಪ್ಪಳದ ಗವಿಮಠವೂ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ, ಸಾಮಾಜಿಕ ಬದಲಾವಣೆಗೆ ತುಡಿತ ಸೇರಿದಂತೆ ಹಲವು ಅಭಿವೃದ್ಧಿ ಕಾಯಕವನ್ನು ಮಾಡಿಕೊಂಡು ಬರುತ್ತಿದೆ. ಇದರ ಜೊತೆಗೆ ಪ್ರತಿ ವರ್ಷ ಇಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು ಇದನ್ನು ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದೂ ಕರೆಯುದುಂಟು.

ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳು

ಎರಡನೇ ಸಿದ್ಧಗಂಗೆ: ಕೊಪ್ಪಳ ಗವಿಮಠದ 16ನೇ ಪೀಠಾಧಿಪತಿಗಳಾದ ಲಿಂ.ಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರು ಶೈಕ್ಷಣಿಕವಾಗಿ ಅತಿ ಹಿಂದುಳಿದ ಈ ಪ್ರದೇಶದ ಉನ್ನತಿಗೆ 1963 ರಲ್ಲಿ ಶ್ರೀಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್​ ಅನ್ನು ಸ್ಥಾಪಿಸಿದರು. ಆ ಮೂಲಕ ಈ ಭಾಗದ ಬಡ ಮಕ್ಕಳಿಗೆ ಹೆಚ್ಚು ಅನೂಕೂಲವಾಗಲು ಉಚಿತ ಪ್ರಸಾದನಿಲಯವನ್ನು ಸ್ಥಾಪಿಸಿದರು.

ಗವಿಮಠದ ದಾಸೋಹ

ಅವರ ಕಾಲಾನಂತರ ಪೀಠಾಧಿಪತಿಗಳಾದ ಪರಮ ಪೂಜ್ಯ ಲಿಂ. ಶಿವಶಾಂತವೀರ ಮಹಾಸ್ವಾಮಿಗಳು ಕೂಡ ವಿದ್ಯಾ ಸಂಸ್ಥೆಯ ಏಳಿಗೆಗೆ ಅವಿರತ ಶ್ರಮಿಸುವುದರ ಮೂಲಕ ಮಠವನ್ನ ನಾಡಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯನ್ನಾಗಿಸಿದರು. ಇಂದು ಲಕ್ಷಾಂತರ ಮಕ್ಕಳ ಬದುಕನ್ನು ಬೆಳಕಾಗಿಸಿದ ಸಂಸ್ಥಾನ ಶ್ರೀ ಗವಿಮಠವು ಎರಡನೇ ಸಿದ್ಧಗಂಗೆಯಾಗಿ ಮಾರ್ಪಟ್ಟಿದ್ದು ಇತಿಹಾಸ.

ಪ್ರಾರ್ಥನೆಯಲ್ಲಿ ತೊಡಗಿರುವ ಮಕ್ಕಳು

5000 ವಿದ್ಯಾರ್ಥಿಗಳ ವಸತಿ ನಿಲಯ ಸಂಕಲ್ಪ:ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಗವಿಮಠದ ವಸತಿ ನಿಲಯಕ್ಕೆ ಅಕ್ಷರ ಅರಸಿ ಬಂದ ವಿದ್ಯಾರ್ಥಿಗಳ ಸಂಖ್ಯೆ 3500 ದಾಟಿದೆ. ಸದ್ಯ ಗವಿಮಠದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶದ ಸಮಸ್ಯೆಯಾಗಿದೆ. ಕಾರಣ ಸ್ಥಳದ ಅಭಾವ ನಿಗಿಸಲು ಅಂದಾಜು 6 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶಿವಶಾಂತವೀರ ಮಹಾಸ್ವಾಮೀಜಿ ಚಾರಿಟೇಬಲ್ ಟ್ರಸ್ಟ್​ನ ಅಡಿಯಲ್ಲಿ 5000 ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಸ್ಥಾಪಿಸುವುದು ಪ್ರಸ್ತುತ ಪೀಠಾಧಿಪತಿಗಳಾದ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಸಂಕಲ್ಪವಾಗಿದೆ.

ರಾಜ್ಯದ ಎರಡನೇ ಸಿದ್ಧಗಂಗೆ ಕೊಪ್ಪಳದ ಗವಿಮಠ

ಧಾನಿಗಳ ಮತ್ತು ಸರ್ಕಾರದ ನೆರವು: ಗವಿಸಿದ್ದೇಶ್ವರ ಶ್ರೀಗಳ ಸಂಕಲ್ಪದಂತೆ ಜೂನ್ 23 ರಂದು 5 ಸಾವಿರ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜರುಗಿತು. ಆ ಸಂದರ್ಭದಲ್ಲಿ ಶ್ರೀಗಳು ಭಾವುಕರಾಗಿ ಕಣ್ಣಿರು ಸುರಿಸಿದರು. ಆ ಬಳಿಕ ಸರ್ಕಾರ 10 ಕೋಟಿ ರೂಪಾಯಿ ಅನುಧಾನ ಘೋಷಿಸಿತು. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ವಯಕ್ತಿಕವಾಗಿ 1.8 ಕೋಟಿ ರೂಪಾಯಿಗಳನ್ನ ನೀಡಿದ್ದಾರೆ. ಅಷ್ಟೇ ಅಲ್ಲದೇ ನಾಡಿನಾದ್ಯಂತ ಶ್ರೀಗವಿಮಠದ ಭಕ್ತರಿಂದ ದೇಣಿಗೆಯ ಮಹಾ ಪೂರವೇ ಹರಿದು ಬಂದಿದೆ.

ಮಠದ ವಿಹಂಗಮ ನೋಟ

ಸಾಮಾಜಿಕ ಬದಲಾವಣೆಗೆ ತುಡಿತ:ಗವಿಮಠ ಕೇವಲ ಅನ್ನ, ಅರಿವು, ಆಧ್ಯಾತ್ಮದ ಜೊತೆಗೆ ಸಾಮಾಜಿಕ ಕಳಕಳಿಗೆ ಸದಾ ತುಡಿಯುತ್ತದೆ. ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸಾಮಾಜಿಕ ಬದಲಾವಣೆ ಕಾರ್ಯಗಳನ್ನ ಹಮ್ಮಿಕೊಳ್ಳುವ ಮೂಲಕ ಪ್ರಸಿದ್ಧಿ ಪಡೆದಿದೆ. ಬ್ಯಾಲ್ಯ ವಿವಾಹ ನಿಷೇಧ ಜಾಗೃತಿ, ರಕ್ತದಾನದ ಮಹತ್ವ, ಜಲ ದೀಕ್ಷೆ, ಲಕ್ಷ ವೃಕ್ಷೋತ್ಸವ, ಹಿರೇಹಳ್ಳ ಸ್ವಚ್ಛತಾ ಕಾರ್ಯ, ಕೆರೆ ಹೂಳೆತ್ತುವ ಕಾರ್ಯ ಸೇರಿದಂತೆ ಹತ್ತು ಹಲವು ಬದಲಾವಣೆಯ ಕಾರ್ಯಗಳನ್ನ ಶ್ರೀಗವಿಮಠ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.

ಪ್ರಾರ್ಥನೆಯಲ್ಲಿ ತೊಡಗಿರುವ ಮಕ್ಕಳು

ಈ ಭಾಗದ ನಡೆದಾಡುವ ದೇವರೆಂದೆ ಪ್ರಖ್ಯಾತಿ ಗಳಿಸಿರುವ ಅಭಿನವ ಗವಿಸಿದ್ದೇಶ್ವರರ ದೂರದೃಷ್ಟಿ, ಶಿಕ್ಷಣದ ಮೇಲಿರುವ ಪ್ರೇಮ, ಸಾಮಾಜಿಕ ಕಳಕಳಿಯಿಂದ ಗವಿಮಠ ಕೇವಲ ಪೂಜೆಗಷ್ಟೆ ಸೀಮಿತವಾಗಿರದೆ ಅರಿವಿನ ದೀವಿಗೆಯಾಗಿದೆ. ಸದ್ಯ ರಾಜ್ಯದಲ್ಲಿ ತುಮಕೂರಿನ ಸಿದ್ದಗಂಗಾ ಮಠದಂತೆ ಕೊಪ್ಪಳದ ಮಠವೂ ಸಾಮಾಜಿಕ ಕಳಕಳಿಗೆ ಮಿಡಿಯುತ್ತಿರುವ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಗವಿಮಠದ ದಾಸೋಹ

ಇದನ್ನೂ ಓದಿ: ಅಂದು ವೀರಪ್ಪನ್ ತಾಣ ಇಂದು ಯೋಧರ ಗ್ರಾಮ: ಸೇನೆ ಸೇರುವವರಿಗೆ ಅಕಾಡೆಮಿ ಸ್ಥಾಪಿಸಿದ ಸೈನಿಕರು

ABOUT THE AUTHOR

...view details