ಕಲಬುರಗಿ: ನಗರದ ಹೊರವಲಯ ಕೆರಿ ಭೋಸಗಾ ಕ್ರಾಸ್ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಮುಂಬೈ ಮೂಲದ ಐವರು ಕುಖ್ಯಾತ ದರೋಡೆಕೋರರು ಸೇರಿ ಏಳು ಜನರನ್ನು ಸಬ್ ಅರ್ಬನ್ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ದರೋಡೆಕೋರರ ತಂಡ ಪೊಲೀಸ್ ಬಲೆಗೆ ಮುಂಬೈ ಮೂಲದ ಆಸಿಫ್ ಖಾದ್ರಿ (34), ಈದುಖಾನ್ ಶಕೀಲ ರಹಮತ್ ಖಾಖ (24), ಮೊಹಮ್ಮದ್ ಶಾರುಕ ಖುರೇಶಿ (28), ಮೋಯಿನ್ ಖಾನ್ (27), ಓವೈಸ್ ಖುರೇಶಿ (19) ಹಾಗೂ ಕಲಬುರಗಿಯ ರುಕುಂ ಖುರೇಶಿ (32), ಮುಸ್ತಫಾ ಖುರೇಶಿ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಒಂದು ಸ್ಕಾರ್ಪಿಯೋ ವಾಹನ, ನಗದು ಹಣ, ಚಾಕು, ಹಗ್ಗ, ರಾಡ್, ಬಡಿಗೆಗಳು ಸೇರಿದಂತೆ ಒಟ್ಟು 22 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
(ಇದನ್ನೂ ಓದಿ: ತನ್ನ ಪರ ತೀರ್ಪು ಬರುವ ಮುನ್ನವೇ ಆತ್ಮಹತ್ಯೆಗೆ ಶರಣಾದ ಯುವಕ)
ಮುಂಬೈನಿಂದ ಆಗಮಿಸುತ್ತಿದ್ದ ಐವರು ದರೋಡೆಕೋರರು ಸ್ಥಳೀಯ ಇಬ್ಬರು ಆರೋಪಿಗಳ ಸಹಾಯದಿಂದ ರಾತ್ರಿ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ನಿಂತು ರಸ್ತೆ ಪ್ರಯಾಣಿಕರನ್ನು ದರೋಡೆ ಮಾಡುವುದು, ಜಾನುವಾರುಗಳನ್ನು ಕದಿಯುವ ಕೃತ್ಯ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ನಿಗಾ ವಹಿಸಿದ ಪೊಲೀಸರು ನಿನ್ನೆ ರಾತ್ರಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: 15 ದಿನದ ಹಿಂದೆ ಬೇರೆ ಯುವಕನ ಜೊತೆ ಮದುವೆ: ತವರಿಗೆ ಬಂದ ಪ್ರೇಯಸಿಗೆ 20 ಬಾರಿ ಚಾಕು ಚುಚ್ಚಿ, ವಿಷ ಕುಡಿದ ಪ್ರೇಮಿ)