ಗದಗ :ಮುಂದಿನ ಬಾರಿಯೂ ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸಚಿವ ಸಿ ಸಿ ಪಾಟೀಲ್ ಭವಿಷ್ಯ ನುಡಿದ್ದಾರೆ. ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸುವಂತೆ ಸಂದೇಶ ನೀಡಿದ್ದಾರೆ. ಇದರ ಅರ್ಥ ಮುಂದಿನ ಬಾರಿಯೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಅಗಲಿದ್ದಾರೆ ಎಂದು ಹೇಳಿದರು.
ಇತ್ತೀಚಿಗೆ ಸಿಂಧನೂರಿನಲ್ಲಿ ಆಯೋಜನೆ ಮಾಡಲಾಗಿದ್ದ ಪಂಚರತ್ನ ಯಾತ್ರೆಯಲ್ಲಿ ಬ್ರಾಹ್ಮಣ ಸಮುದಾಯದವರಾದ ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆದ ಸಿ ಸಿ ಪಾಟೀಲ್, ಅವರ ಹೇಳಿಕೆಗೆ ಅಷ್ಟು ಬೆಲೆ ಕೊಡಬೇಕಿಲ್ಲ ಎಂದರು.
ಕುಮಾರಸ್ವಾಮಿ ಅವರಿಗೆ ಯಾವ್ಯಾವುದೋ ಕನಸು ಬೀಳುತ್ತಿರುತ್ತವೆ. ಅವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ಮಾಡಿದವರು. ಹೀಗಿದ್ದಾಗ ಅವರಿಗೆ ಅಗಾದ ಮಾಹಿತಿ ಸಂಗ್ರಹ ಇರುತ್ತದೆ. ಆದರೆ, ಬಾಯಿ ಚಪಲಕ್ಕೆ ಜನರ ದಾರಿ ತಪ್ಪಿಸುವಂತಹ ಮಾತುಗಳನ್ನು ಆಡಬಾರದು. ಲಿಂಗಾಯತ ಮತಗಳನ್ನು ಅಭದ್ರ ಮಾಡಬೇಕು ಎಂಬ ಉದ್ದೇಶದಿಂದಲೇ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದರು.
ಲಿಂಗಾಯತ ಮತದಾರರು ಬಿಜೆಪಿ ಬ್ಯಾಕ್ ಬೋನ್. ಅವರನ್ನು ವಿಚಲಿತರನ್ನಾಗಿ ಮಾಡಬೇಕು. ಬಿಜೆಪಿಯಿಂದ ಅವರು ಕೊಂಚ ಹಿಂದೆ ಸರಿಯಬೇಕು ಅನ್ನೋದು ಅವರ ಹೇಳಿಕೆಯ ಉದ್ದೇಶವಾಗಿದೆ. ಹಾಗಾಗಿ ಅವರ ಮಾತಿಗೆ ಯಾರೂ ಅಷ್ಟು ಮಹತ್ವ ಕೊಡಬೇಕಿಲ್ಲ. ನಮ್ಮ ಹೈಕಮಾಂಡ್ ಎಲ್ಲವನ್ನು ನಿರ್ಧಾರ ಮಾಡಲಿದೆ. ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ತಲೆಬಿಸಿ ಮಾಡಕೊಳ್ಳಬಾರದು ಎಂದು ಹೇಳಿದರು.