ಕರ್ನಾಟಕ

karnataka

ಕುಮಾರಸ್ವಾಮಿ ಹೇಳಿಕೆಗೆ ಬೆಲೆ ಕೊಡುವ ಅಗತ್ಯವಿಲ್ಲ: ಸಚಿವ ಸಿ ಸಿ ಪಾಟೀಲ್

By

Published : Feb 13, 2023, 7:55 AM IST

ಕುಮಾರಸ್ವಾಮಿ ಅವರಿಗೆ ಯಾವ್ಯಾವುದೋ ಕನಸು ಬೀಳುತ್ತಿರುತ್ತವೆ- ಜನರ ದಾರಿ ತಪ್ಪಿಸುವಂತಹ ಮಾತುಗಳನ್ನು ಅವರು ಆಡಬಾರದು - ಸಚಿವ ಸಿ ಸಿ ಪಾಟೀಲ್​

Minister CC Patil
ಸಚಿವ ಸಿಸಿ ಪಾಟೀಲ್​

ಗದಗ :ಮುಂದಿನ ಬಾರಿಯೂ ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸಚಿವ ಸಿ ಸಿ ಪಾಟೀಲ್ ಭವಿಷ್ಯ ನುಡಿದ್ದಾರೆ. ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸುವಂತೆ ಸಂದೇಶ ನೀಡಿದ್ದಾರೆ. ಇದರ ಅರ್ಥ ಮುಂದಿನ ಬಾರಿಯೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಅಗಲಿದ್ದಾರೆ ಎಂದು ಹೇಳಿದರು.

ಇತ್ತೀಚಿಗೆ ಸಿಂಧನೂರಿನಲ್ಲಿ ಆಯೋಜನೆ ಮಾಡಲಾಗಿದ್ದ ಪಂಚರತ್ನ ಯಾತ್ರೆಯಲ್ಲಿ ಬ್ರಾಹ್ಮಣ ಸಮುದಾಯದವರಾದ ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‍.ಡಿ ಕುಮಾರಸ್ವಾಮಿ ಹೇಳಿದ್ದರು. ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆದ ಸಿ ಸಿ ಪಾಟೀಲ್, ಅವರ ಹೇಳಿಕೆಗೆ ಅಷ್ಟು ಬೆಲೆ ಕೊಡಬೇಕಿಲ್ಲ ಎಂದರು.

ಕುಮಾರಸ್ವಾಮಿ ಅವರಿಗೆ ಯಾವ್ಯಾವುದೋ ಕನಸು ಬೀಳುತ್ತಿರುತ್ತವೆ. ಅವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ಮಾಡಿದವರು. ಹೀಗಿದ್ದಾಗ ಅವರಿಗೆ ಅಗಾದ ಮಾಹಿತಿ ಸಂಗ್ರಹ ಇರುತ್ತದೆ. ಆದರೆ, ಬಾಯಿ ಚಪಲಕ್ಕೆ ಜನರ ದಾರಿ ತಪ್ಪಿಸುವಂತಹ ಮಾತುಗಳನ್ನು ಆಡಬಾರದು. ಲಿಂಗಾಯತ ಮತಗಳನ್ನು ಅಭದ್ರ ಮಾಡಬೇಕು ಎಂಬ ಉದ್ದೇಶದಿಂದಲೇ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದರು.

ಲಿಂಗಾಯತ ಮತದಾರರು ಬಿಜೆಪಿ ಬ್ಯಾಕ್ ಬೋನ್. ಅವರನ್ನು ವಿಚಲಿತರನ್ನಾಗಿ ಮಾಡಬೇಕು. ಬಿಜೆಪಿಯಿಂದ ಅವರು ಕೊಂಚ ಹಿಂದೆ ಸರಿಯಬೇಕು ಅನ್ನೋದು ಅವರ ಹೇಳಿಕೆಯ ಉದ್ದೇಶವಾಗಿದೆ. ಹಾಗಾಗಿ ಅವರ ಮಾತಿಗೆ ಯಾರೂ ಅಷ್ಟು ಮಹತ್ವ ಕೊಡಬೇಕಿಲ್ಲ. ನಮ್ಮ ಹೈಕಮಾಂಡ್ ಎಲ್ಲವನ್ನು ನಿರ್ಧಾರ ಮಾಡಲಿದೆ. ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ತಲೆಬಿಸಿ ಮಾಡಕೊಳ್ಳಬಾರದು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಅದರಂತೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಕುಮಾರಸ್ವಾಮಿ ಹೇಳಿಕೆಗೆ ರಾಜ್ಯದ ಜನ ತಲೆಕೆಡಿಸಿಕೊಳ್ಳಬಾರದು ಎಂದು ಅಮಿತ್ ಶಾ ಅವರು ಹೇಳಿದ್ದಾರೆ. ನಾವು ನಮ್ಮ ಹೈಕಮಾಂಡ್ ಮಾತುಗಳನ್ನು ಕೇಳುವವರು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಾತುಗಳನ್ನು ಕೇಳುವವರಲ್ಲ ಎಂದು ಹೆಚ್​​ಡಿಕೆ ವಿರುದ್ಧ ಸಚಿವ ಸಿ ಸಿ ಪಾಟೀಲ್​ ಗರಂ ಆದರು.

ಬಸವರಾಜ ಬೊಮ್ಮಾಯಿ ಜನಪರ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರ ಕೈಯನ್ನು ಎಲ್ಲರೂ ಬಲಪಡಿಸಬೇಕು ಎಂಬುದನ್ನು ನೇರವಾಗಿ ಹೇಳಿದ್ದಾರೆ. ಇದರ ಅರ್ಥ ಮುಂಬರುವ ಚುನಾವಣೆಯಲ್ಲಿ ನಾವು 130-140 ಸ್ಥಾನ ಗೆಲ್ಲುತ್ತೇವೆ. ಮುಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂಬುದರ ಬಗ್ಗೆ ಪರೋಕ್ಷವಾದ ಸಂದೇಶ ನೀಡಿ ತೆರಳಿದ್ದಾರೆ. ಹೀಗಾಗಿ ಅಮಿತ್ ಶಾ ಅವರನ್ನು ನಾನು ಅಭಿನಂದಿಸುವೆ ಎಂದರು.

ಸರ್ಕಾರ ಪಿಡಬ್ಲ್ಯೂಡಿ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಿದೆ. ಮುಂದಿನ ಬಾರಿ 130-140 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಸಂದೇಹ ಇಲ್ಲ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಸಚಿವರು ಭವಿಷ್ಯ ನುಡಿದರು.

ಇದನ್ನೂ ಓದಿ :ಕೇಸರಿ, ಕುಂಕುಮ ಮನುವಾದದ ಸಂಕೇತವೇ? ಸಿದ್ದರಾಮಯ್ಯಗೆ ಸಿ.ಸಿ ಪಾಟೀಲ್ ಪ್ರಶ್ನೆ

ABOUT THE AUTHOR

...view details