ಕರ್ನಾಟಕ

karnataka

ಜಾತಿ ಜನಗಣತಿ ದೃಷ್ಟಿಯಿಂದ ವೀರಶೈವ ಮಹಾಸಭಾ ಅಧಿವೇಶನ ಆಯೋಜನೆ ಮಾಡಿಲ್ಲ: ಜಗದೀಶ್ ಶೆಟ್ಟರ್

By ETV Bharat Karnataka Team

Published : Dec 19, 2023, 4:07 PM IST

ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರಿಗೆ ವಯಸ್ಸಿನ ಕಾರಣ ಹೇಳಿ ರಾಮಮಂದಿರದ ಉದ್ಘಾಟನೆಗೆ ದೂರವಿಟ್ಟಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್
ಮಾಜಿ ಸಿಎಂ ಜಗದೀಶ್ ಶೆಟ್ಟರ್

ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ :ವೀರಶೈವ ಮಹಾಸಭಾ ಮೂರು ನಾಲ್ಕು ವರ್ಷಗಳಿಗೊಮ್ಮೆ ಮಹಾಸಭಾ ಅಧಿವೇಶನ ಮಾಡುತ್ತದೆ. 2024ರ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ಬಂದಿದೆ. ನಾನು ಕೂಡ ಭಾಗವಹಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಬರೀ ಜಾತಿಜನಗಣತಿ ದೃಷ್ಟಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿಲ್ಲ.
ಎರಡು ಮೂರು ಪ್ರಮುಖ ವಿಚಾರಗಳಿಗೆ ಸಭೆ ನಡೆಯುತ್ತಿದೆ. ಅದರಲ್ಲಿ ಜಾತಿಗಣತಿ ಸಹ ಒಂದು. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಮತ್ತು ಎಲ್ಲ ಒಳಪಂಗಡಗಳ ಸೇರಿಸುವ ಬೇಡಿಕೆ ಪ್ರಮುಖ ಅಜೆಂಡವಾಗಿದೆ. ಸಮಾಜ ಜಾಗೃತಿ ಮತ್ತು ಸಂಘಟನೆ ಮಾಡಲು ಏನು ಬೇಕು ಅದರ ಬಗ್ಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಸಾಮಾಜಿಕ ಸಮೀಕ್ಷೆ ಉದ್ದೇಶದಿಂದ ಜಾತಿಗಣತಿ ಮಾಡಲಾಯಿತು. ಆದರೆ, ಗಣತಿ ಬಗ್ಗೆ ಅಂಕಿ-ಸಂಖ್ಯೆಗಳ ಬಗ್ಗೆ ಕೆಲವೊಂದು ವಿಚಾರ ಲೀಕ್​ ಆಗಿ ವಿವಾದ ಆಗಿದೆ. ಹೀಗಾಗಿ ಸಿಎಂ ಎಲ್ಲಾ ಸಮುದಾಯದ ನಾಯಕರ ಸಭೆ ಕರೆದು ಮಾತನಾಡೋದು ಉತ್ತಮ ಎಂದು ಹೇಳಿದರು.

ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರಿಗೆ ವಯಸ್ಸಿನ ಕಾರಣ ಹೇಳಿ ರಾಮಮಂದಿರ ಲೋಕಾರ್ಪಣೆಗೆ ದೂರವಿಟ್ಟಿದ್ದು ಸರಿಯಲ್ಲ. ರಾಮಮಂದಿರದ ಬಗ್ಗೆ ಇಡೀ ರಾಷ್ಟ್ರದಲ್ಲಿ ಜಾಗೃತಿ ಮೂಡಿಸಿದ್ದು, ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ. ಈ ಸಮಯದಲ್ಲಿ ಇವರ ಉಪಸ್ಥಿತಿ ಬಹಳಷ್ಟು ಪ್ರಮುಖ. ಇವರನ್ನು ನಿರ್ಲಕ್ಷ್ಯ ಮಾಡಿದ್ದು, ದೂರ ಇಟ್ಟಿದ್ದು ಸರಿಯಲ್ಲ.‌ ಅದರಲ್ಲೂ ವಯಸ್ಸಿನ ನೆಪ ಹೇಳಿ ಈಗಾಗಲೇ ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಲಾಗಿದೆ. ಹೊಸದಾಗಿ ಮೂಲೆಗುಂಪು ಮಾಡೋದು ಏನಿದೆ? ಎಂದರು.

ಲೋಕಸಭೆಗೆ ನಾನು ನಿಲ್ಲುತ್ತೇನೆ ಅಂತ ಎಲ್ಲಿಯೂ ಹೇಳಿಲ್ಲ. ಜೋಶಿಯವರು ಸಿಟ್ಟಿಂಗ್ ಎಂಪಿ, ಅವರು ನಿಲ್ಲಲೇಬೇಕು. ಕಾಂಗ್ರೆಸ್ ಹೈಕಮಾಂಡ್ ನನ್ನ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿಲ್ಲ. ಧಾರವಾಡ ಲೋಕಸಭಾ ಕ್ಷೇತ್ರದ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಮತ್ತು ದೆಹಲಿಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ನನ್ನ ಜೊತೆಗೆ ಮತ್ತು ಬೆಂಗಳೂರಿನಲ್ಲಿ ವೈಯಕ್ತಿಕವಾಗಿ ಗಂಭೀರವಾಗಿ ಚರ್ಚೆ ಮಾಡಿಲ್ಲ. ಇನ್ನೂ ಪ್ರಾರಂಭವಾಗಿಲ್ಲ, ಈ ಸಮಯದಲ್ಲಿ ಚರ್ಚೆ ಅನಾವಶ್ಯಕ ಎಂದರು.

ಅರ್ಥ ಇಲ್ಲದ ಪ್ರಶ್ನೆಗೆ ಉತ್ತರ ನೀಡಲ್ಲ :ಕಾಂಗ್ರೆಸ್ ಪಕ್ಷ ಮತ್ತು ಅಭ್ಯರ್ಥಿಯನ್ನು ಗಟ್ಟಿಗೊಳ್ಳಿಸುವ ಪ್ರಯತ್ನ ಮಾಡುವೆ. ಇಡೀ ರಾಜ್ಯದಲ್ಲಿ ಈ ಬಾರಿ 15 ರಿಂದ 20 ಸೀಟ್ ಕಾಂಗ್ರೆಸ್ ಗೆಲ್ಲುತ್ತದೆ. ಇದರಲ್ಲಿ ಧಾರವಾಡ ಕೂಡ ಒಂದು ಎಂದರು. ವಿಧಾನಸಭಾ ಚುನಾವಣಾ ಫಲಿತಾಂಶದ ಪರಿಣಾಮದಿಂದ ಮತ್ತೆ ಜಗದೀಶ್ ಶೆಟ್ಟರ್ ಟಾರ್ಗೆಟ್ ಆಗಿದ್ದಾರೆ. ಏನು ಪರಿಣಾಮ ಆಗಿದೆ ಅಂತ ಅವರು ಹೇಳಬೇಕು. ನಾನು ನನ್ನ ಬಗ್ಗೆ ಮಾತನಾಡಲ್ಲ. ಒಬ್ಬ ವ್ಯಕ್ತಿಯ ಶಕ್ತಿ ಏನು ಅಂತ ಅರ್ಥವಾಗುತ್ತದೆ. ಬಿಜೆಪಿ ನಾಯಕರಿಗೆ ಮಾಜಿ ಸಚಿವ, ಶಾಸಕರಿಗೆ, ಹಾಲಿ ಶಾಸಕರಿಗೆ ಜಗದೀಶ್ ಬಗ್ಗೆ ಅರ್ಥವಾಗಿದೆ. ಬಿಜೆಪಿ ಹೈಕಮಾಂಡ್ ಇದುವರೆಗೆ ನನ್ನ ಜೊತೆಗೆ ಮಾತನಾಡಿಲ್ಲ. ಈಶ್ವರಪ್ಪ ಹೈಕಮಾಂಡ್ ಅಲ್ಲ. ಅರ್ಥ ಇಲ್ಲದ ಪ್ರಶ್ನೆಗೆ ಉತ್ತರ ನೀಡಲ್ಲ ಎಂದರು.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ: ಜಗದೀಶ್ ಶೆಟ್ಟರ್

ABOUT THE AUTHOR

...view details