ಕರ್ನಾಟಕ

karnataka

43 ವರ್ಷದ ಬಳಿಕ ತುಂಬಿದ ಕೆರೆ: ರೈತರ ಪರ - ವಿರೋಧದ ನಡುವೆ ನೀರು ಹೊರ ಬಿಡುವಂತೆ ಡಿಸಿ ಆದೇಶ - ಕಾರಣ ಏನು ಗೊತ್ತಾ?

By

Published : Dec 31, 2022, 1:09 PM IST

43 ವರ್ಷದ ಬಳಿಕ ತುಂಬಿದ ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ಕೆರೆ ನೀರನ್ನು ಕೋಡಿ ಒಡೆಯುವ ಮೂಲಕ ಹೊರಬಿಡುವಂತೆ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಆದೇಶ ಹೊರಡಿಸಿದ ಹಿನ್ನೆಲೆ ರೈತರ ಪರ-ವಿರೋಧದ ನಡುವೆಯೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹೆಚ್ಚುವರಿ ನೀರು ಹೊರ ಬಿಟ್ಟಿದ್ದಾರೆ.

anaji village lake
ಅಣಜಿ ಗ್ರಾಮದ ಕೆರೆ

ಅಣಜಿ ಗ್ರಾಮದ ಹೆಚ್ಚುವರಿ ಕೆರೆ ನೀರು ಬಿಡುಗಡೆಗೆ ರೈತರು ಆಕ್ರೋಶ

ದಾವಣಗೆರೆ: ಬರೋಬ್ಬರಿ 43 ವರ್ಷಗಳ ಬಳಿಕ ಕೆರೆ ಭರ್ತಿ ಆಗಿದ್ದರಿಂದ 900 ಎಕರೆ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅದ್ರೆ, ಕೆರೆಯ ಹಿನ್ನೀರಿನ ಭಾಗದ ರೈತರ ತೋಟಗಳಲ್ಲಿ ಮೊಣಕಾಲಷ್ಟು ನೀರು ನಿಂತಿದ್ದರಿಂದ ಕೆಲ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ,‌ ಕೆರೆಯಲ್ಲಿ ಶೇಖರಣೆಯಾಗಿರುವ ನೀರನ್ನು ಕೋಡಿ ಒಡೆದು ಹೊರ ಬಿಡುವಂತೆ ಡಿಸಿ ಆದೇಶಿಸಿದ್ದು, ರೈತರ ಪರ-ವಿರೋಧ ನಡುವೆಯೂ ನೀರು ಬಿಡಲಾಗಿದೆ.

ಹೌದು, ಅಣಜಿ ಗ್ರಾಮದ ಕೂಗಳತೆಯಲ್ಲಿರುವ ಐತಿಹಾಸಿಕ ಕೆರೆ ತುಂಬಿದೆ. ದುರಂತ ಎಂದರೆ, 13 ಸೆಂಟಿಮೀಟರ್ ನಷ್ಟು ನೀರು ಕೆರೆಯಲ್ಲಿ ಅಧಿಕವಾಗಿದ್ದರಿಂದ ಹೆಚ್ಚುವರಿ ನೀರನ್ನು ಹೊರ ಬಿಡಲು ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರು ಆದೇಶ ಹೊರಡಿಸಿದ್ದಾರೆ.

ಅಣಜಿ ಕೆರೆಯ ಹಿನ್ನೀರಿನಲ್ಲಿ ಬರುವ ಕೆರೆಯಾಗಲಹಳ್ಳಿಯ ಸುಮಾರು ನೂರಾರು ಎಕರೆ ಅಡಿಕೆ ತೋಟ ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಈ ಭಾಗದ ರೈತರು ಕಣ್ಣೀರಿನಲ್ಲಿ ಕೈ ತೊಳೆಯತ್ತಿದ್ದರು. ಕೂಡಲೇ ಕೆರೆಯ ಕೋಡಿ ಒಡೆದು ನೀರನ್ನು ಹೊರಬಿಟ್ಟು ನಮ್ಮ ತೋಟಗಳನ್ನು ಉಳಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದರು. ಮನವಿ ಸ್ವೀಕರಿಸಿದ ಡಿಸಿ ಶಿವಾನಂದ ಕಪಾಶಿಯವರು ರೈತರಿಗೆ ಬೆನ್ನೆಲುಬಾಗಿ ನಿಂತು, 13 ಸೆಂಟಿಮೀಟರ್ (ಒಂದುವರೆ ಅಡಿ) ನಷ್ಟು ನೀರನ್ನು ಹೊರಬಿಡುವಂತೆ ಆದೇಶಿಸಿದರು. ಈ ಆದೇಶ ಕೆಲ ರೈತರಿಗೆ ನೋವುಂಟು ಮಾಡಿದ್ರೆ, ಕೆಲ ರೈತರ ಸಂತಸಕ್ಕೆ ಕಾರಣವಾಗಿತ್ತು.

"ಜಿಲ್ಲಾಧಿಕಾರಿ ಆದೇಶವನ್ನು ಅನುಸರಿಸಿದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೋಡಿ ಒಡೆದು ನೀರನ್ನು ಹೊರ ಬಿಟ್ಟಿರುವುದು ನೋವಿನ ಸಂಗತಿ, ತೋಟದ ಮಾಲೀಕರಿಗೆ ಶಾಶ್ವತ ಪರಿಹಾರ ಕಲ್ಪಸಬೇಕು, ಹೀಗೆ ಕೆರೆಯ ನೀರನ್ನು ಹೊರಬಿಡುವುದು ಸೂಕ್ತವಲ್ಲ, ನೀರು ಹೊರಬಿಡಲು ರೈತರ ವಿರೋಧ ಇದೆ" ಎಂದು ಹೋರಾಟಗಾರ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:20 ವರ್ಷಗಳ ನಂತರ ಭರ್ತಿಯಾದ ಅಥರ್ಗಾ ಗ್ರಾಮದ ರಾಜನಾಳ ಕೆರೆ

'ಹೆಚ್ಚುವರಿಯಾಗಿ ಕೆರೆಯಿಂದ ಹೊರಬಿಟ್ಟಿರುವ ನೀರನ್ನು ಮತ್ತೆ ಕೆರೆಗೆ ತುಂಬಿಸಬೇಕಾದರೆ ಕನಿಷ್ಠ 7 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಇತಂಹ ಪರಿಸ್ಥಿತಿಯಲ್ಲಿ ನೀರು ಹೊರಬಿಟ್ಟಿರುವುದು ರೈತರು ಆಘಾತಕ್ಕೆ ಒಳಗಾಗುವಂತೆ ಮಾಡಿದೆ. ನೀರನ್ನು ಬಿಟ್ಟಿದ್ದರಿಂದ ಶೇಂಗಾ, ಕಬ್ಬು, ಭತ್ತ, ಕಡಲೆ ಹೀಗೆ ನಾನಾ ಬೆಳೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಕೆರೆಯ ಕೂಗಳತೆ ದೂರದಲ್ಲೇ ಸಾಕಷ್ಟು ಜಮೀನಿದ್ದು, ಅಲ್ಲಿಗೆ ತೆರಳಲು ರೈತರಿಗೆ ದಾರಿ ಇಲ್ಲದಂತಾಗಿದೆ' ಎಂದು ರೈತ ಪ್ರಕಾಶ್ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ಕೆರೆ ಕಲುಷಿತಗೊಂಡು ಮೀನುಗಳ ಮಾರಣಹೋಮ.. ಪೂರ್ತಿ ನೀರನ್ನು ಖಾಲಿ ಮಾಡುತ್ತಿರುವ ಜನರು

ಒಟ್ಟಾರೆಯಾಗಿ ಅಣಜಿ ಕೆರೆಯ ಹಿನ್ನೀರಿನಲ್ಲಿ ಮುಳುಗಡೆಯಾದ ತೋಟವನ್ನು ಉಳಿಸುವ ದೃಷ್ಟಿಯಿಂದ ನೀರು ಹೊರ ಬಿಡಲಾಗಿದೆ. ನೀರು ಹೊರ ಬಿಟ್ಟಿದ್ದರಿಂದ ಕೆಲ ರೈತರು ರೋಧನೆ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ನಮ್ಮ ತೋಟ ಉಳಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ:ಭರ್ತಿ ಹಂತದಲ್ಲಿ ಹೆಸರಘಟ್ಟ ಕೆರೆ.. ಇದಕ್ಕಿದೆ ಶತಮಾನದ ಇತಿಹಾಸ

ABOUT THE AUTHOR

...view details