ETV Bharat / state

ಭರ್ತಿ ಹಂತದಲ್ಲಿ ಹೆಸರಘಟ್ಟ ಕೆರೆ.. ಇದಕ್ಕಿದೆ ಶತಮಾನದ ಇತಿಹಾಸ

author img

By

Published : Oct 24, 2022, 11:55 AM IST

Updated : Oct 24, 2022, 12:14 PM IST

ಪ್ರತಿದಿನ 36 ಮಿಲಿಯನ್ ಲೀಟರ್ ನೀರು ಹೆಸರಘಟ್ಟ ಕೆರೆಗೆ ಹರಿದು ಬರುತ್ತದೆ. ಸದ್ಯ ಈ ಕೆರೆ ತುಂಬುವ ಹಂತದಲ್ಲಿದ್ದು, ಇನ್ನೂ ಎರಡು ಅಡಿ ಮಾತ್ರ ಬಾಕಿ ಇದೆ.

century old hesaraghatta lake
ತುಂಬುವ ಹಂತದಲ್ಲಿ ಶತಮಾನದಷ್ಟು ಹಳೆಯದಾದ ಹೆಸರಘಟ್ಟ ಕೆರೆ

ಯಲಹಂಕ: ಬೆಂಗಳೂರಿನ ವಿವಿಧ ಭಾಗಗಳಿಗೆ ಕುಡಿಯುವ ನೀರನ್ನು ಪೂರೈಸುತ್ತಿರುವ ಹೆಸರಘಟ್ಟ ಕೆರೆ ಭರ್ತಿಯಾಗುತ್ತಿದೆ. 38 ವರ್ಷಗಳ ನಂತರ ಹೆಸರಘಟ್ಟ ಕೆರೆ ತುಂಬುವ ಹಂತಕ್ಕೆ ಬಂದಿದೆ. ಕೆರೆ ತುಂಬಲು ಇನ್ನೂ ಎರಡು ಅಡಿ ಮಾತ್ರ ಬಾಕಿ ಇದ್ದು, ಒಂದು ವಾರದಲ್ಲಿ ಕೆರೆ ಕೋಡಿ ಬೀಳುವ ಸಾಧ್ಯತೆ ಇದೆ.

ಚಿಕ್ಕಬಳ್ಳಾಪುರದ ನಂದಿಗಿರಿಧಾಮದ ಚನ್ನಗಿರಿಯಲ್ಲಿ ಹುಟ್ಟುವ ಅರ್ಕಾವತಿ ನದಿ ಕೆರೆಗಳಿಂದ ಕೆರೆಗೆ ಹರಿಯುವ ಮೂಲಕ ಹೆಸರಘಟ್ಟಕ್ಕೆ ತಲುಪುತ್ತದೆ. 1,110 ಎಕರೆ ವಿಸ್ತೀರ್ಣ ಹೊಂದಿರುವ ಹೆಸರಘಟ್ಟ ಕೆರೆಗೆ 184 ಕೆರೆಗಳ ಕೋಡಿ ಬಿದ್ದ ನೀರು ಹರಿದು ಬರುತ್ತದೆ. ಪ್ರತಿದಿನ 36 ಮಿಲಿಯನ್ ಲೀಟರ್ ನೀರು ಹೆಸರಘಟ್ಟ ಕೆರೆಗೆ ಹರಿದು ಬರುತ್ತದೆ. ಹೆಸರಘಟ್ಟ ಕೆರೆಯ ನೀರನ್ನು ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗಾಗಿ ಸರಬರಾಜು ಮಾಡಲಾಗುತ್ತದೆ.

ಭರ್ತಿ ಹಂತದಲ್ಲಿ ಹೆಸರಘಟ್ಟ ಕೆರೆ

ಇದು ಚಾಮರಾಜೇಂದ್ರ ವಾಟರ್ ವರ್ಕ್ಸ್ ಯೋಜನೆಯ ಭಾಗವಾಗಿದೆ. ಮೈಸೂರು ಸಂಸ್ಥಾನದ 10ನೇ ಜಯಚಾಮರಾಜೆಂದ್ರ ಒಡೆಯರ್ ದಿವಾನ್ ಕೆ.ಶೇಷಾದ್ರಿ ಅಯ್ಯರ್ ನೇತೃತ್ವದಲ್ಲಿ ಹೆಸರಘಟ್ಟ ಕೆರೆಯಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಯೋಜನೆಯನ್ನು 1894ರಲ್ಲಿ ರೂಪಿಸಿದ್ದರು. ಎರಡೇ ವರ್ಷದಲ್ಲಿ ಯೋಜನೆ ಪೂರ್ಣಗೊಂಡು 1896 ರಲ್ಲಿ ಬೆಂಗಳೂರಿನ ಮನೆಗಳಿಗೆ ನೀರನ್ನು ಸರಬರಾಜು ಮಾಡಲಾಯಿತು.

ಶುದ್ಧೀಕರಿಸಿ ನಗರಕ್ಕೆ ನೀರು ಸರಬರಾಜು: ಹೆಸರಘಟ್ಟ ಕೆರೆಯ ನೀರನ್ನು 5 ಕಿ.ಮೀ ದೂರದಲ್ಲಿರುವ ತರಬನಹಳ್ಳಿ ಕಾಲುವೆ ಮೂಲಕ ಸರಬರಾಜು ಮಾಡಲಾಗುತ್ತದೆ. ರೋಮನ್ ತಂತ್ರಜ್ಞಾನ ಬಳಸಿಕೊಂಡು ಇಟ್ಟಿಗೆ ಮತ್ತು ಸುಣ್ಣದಗಾರೆಯಿಂದ ಕಾಲುವೆ ನಿರ್ಮಾಣ ಮಾಡಲಾಗಿದೆ. ಗುರುತ್ವಾಕರ್ಷಣ ಬಲದಿಂದ ನೀರನ್ನು ತರಬನಹಳ್ಳಿಗೆ ತರಲಾಗುತ್ತದೆ. ಇಲ್ಲಿಂದ ಸೊಲದೇವನಹಳ್ಳಿಗೆ ನೀರನ್ನು ತಂದು ಅಲ್ಲಿಂದ ಮಲ್ಲೇಶ್ವರಂನ ಜೆವೇಲ್ ಫಿಲ್ಟರ್​ಗೆ ತರಲಾಗಿತ್ತು. ಆಗಿನ್ನೂ ಬೆಂಗಳೂರಿಗೆ ವಿದ್ಯುತ್ ಬಂದಿರಲಿಲ್ಲ. ಹಾಗಾಗಿ ಸ್ಟೀಮ್ ಇಂಜಿನ್ ಮೂಲಕ ಪಂಪ್ ಮಾಡಿ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು.

ವೊಲ್ಯೂಟ್ ಸೈಫನ್ ಸಾಧನ ಬಳಕೆ: ಹೆಸರಘಟ್ಟ ಕೆರೆ ಕೋಡಿ ಬಿದ್ದಾಗ ಭಾರಿ ಪ್ರಮಾಣದ ನೀರು ಹೊರ ಹರಿಯುವುದರಿಂದ ಅಚ್ಚುಕಟ್ಟು ಪ್ರದೇಶದ ಜನರನ್ನ ಎಚ್ಚರಿಸಲು ಕೆರೆಯ ಕೋಡಿ ಬಳಿ ವೊಲ್ಯೂಟ್ ಸೈಫನ್ ಸಾಧನ ಬಳಕೆ ಮಾಡಲಾಗಿದೆ. 1912 ರಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಅವರು ಈ ಸಾಧನ ಅಳವಡಿಸಿದ್ದಾರೆ. ಇದು ಸ್ವಯಂ ಚಾಲಿತ ಸಾಧನವಾಗಿದ್ದು, ಸೈರನ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಸುಮಾರು 25 ಕಿ.ಮೀ ವರೆಗೂ ಸೈರನ್ ಶಬ್ದ ಕೇಳಿಸುತ್ತದೆ. ಇದೇ ಕಾರಣಕ್ಕೆ ಜನರು ರಾಕ್ಷಸ ಕಣಿವೆ ಎಂದು ಹೆಸರಘಟ್ಟ ಕೆರೆಯನ್ನು ಕರೆಯುತ್ತಾರೆ.

ಇದನ್ನೂ ಓದಿ: ಚಾಮರಾಜನಗರ: ಹಲವು ವರ್ಷಗಳ ಬಳಿಕ ಕೋಡಿ ಬಿದ್ದ ಕೆರೆಕಟ್ಟೆ, ಜನರ ಬದುಕು ಮೂರಾಬಟ್ಟೆ

ಭಾನುವಾರದಂದು ಪೂರ್ಣ ಸಾಮರ್ಥ್ಯಕ್ಕಿಂತ ಕೇವಲ ಒಂದು ಅಡಿಯಷ್ಟು ಕೆಳಭಾಗದವರೆಗೆ ಕೆರೆಯಲ್ಲಿ ನೀರು ತುಂಬಿದೆ. ಅಲ್ಲದೆ ಯಾವುದೇ ಕ್ಷಣದಲ್ಲಿ ಕೆರೆ ನೀರು ತುಂಬಿ ಹರಿಯುವ ನಿರೀಕ್ಷೆಯಿದೆ. ಕಳೆದ 1994ರಲ್ಲಿ ಕೆರೆ ಸಂಪೂರ್ಣ ಭರ್ತಿಯಾಗಿದೆ ಎಂದು ವರದಿಯಾಗಿದೆ.

Last Updated : Oct 24, 2022, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.