ಕರ್ನಾಟಕ

karnataka

ಚುನಾವಣಾ ಪ್ರಚಾರಕ್ಕೆ ಕೃಷ್ಣ ಎಂಟ್ರಿ... ಸೋನಿಯಾ​ ಕುಟುಂಬ ರಾಜಕಾರಣದ ವಿರುದ್ಧ ಕಿಡಿ

By

Published : Mar 31, 2019, 8:43 PM IST

ಕೆಲವರಿಗೆ ಸಂಸಾರವೇ ರಾಷ್ಟ್ರ, ಆದ್ರೆ ನನಗೆ ರಾಷ್ಟ್ರವೇ ಸಂಸಾರ ಅನ್ನೋದು ಮೋದಿ ಅವರ ಮಾತು ಎಂದು ಗಾಂಧಿ‌ ಕುಟುಂಬದ ವಿರುದ್ಧ ಎಸ್.ಎಂ. ಕೃಷ್ಣ ಕಿಡಿ‌. ಮೋದಿ ಅವರ 5 ವರ್ಷ ಆಡಳಿತದಲ್ಲಿ ಒಂದೂ ಹಗರಣ ಇಲ್ಲ. ವಿಶ್ವದಲ್ಲಿ ಭಾರತೀಯರು ತಲೆ ಎತ್ತಿ ಓಡಾಡುವಂತೆ ಮೋದಿ ಮಾಡಿದ್ದಾರೆ ಎಂದು ಪ್ರಧಾನಿ ಮೋದಿಯನ್ನು ಹೊಗಳಿದ ಎಸ್.ಎಂ. ಕೃಷ್ಣ.

ಎಸ್.ಎಂ.ಕೃಷ್ಣ-ಸದಾನಂದ ಗೌಡ

ಬೆಂಗಳೂರು: ಆಡಳಿತ ನಡೆಸುವುದಕ್ಕೆ ಅರ್ಹತೆ ಇಲ್ಲದಿದ್ದರೂ, ನಾನು ಆ ವಂಶದಲ್ಲಿ ಹುಟ್ಟಿದ ಕಾರಣಕ್ಕೆ ದೇಶ ಆಳುತ್ತೇನೆ ಎನ್ನುವುದು ಒಪ್ಪಲು ಸಾಧ್ಯವಾಗದ ಮಾತು ಎಂದು ಬಿಜೆಪಿ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಗಾಂಧಿ‌ ಕುಟುಂಬದ ವಿರುದ್ಧ ಕಿಡಿ‌ಕಾರಿದರು.

ಬೆಂಗಳೂರು‌ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸದಾನಂದ ಗೌಡರ ಜತೆ ಪ್ರಚಾರದಲ್ಲಿ ಪಾಲ್ಗೊಂಡ ವೇಳೆ ಅವರು ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು. ನಾನು ಮೊದಲಿನಿಂದಲೂ ವಂಶಪಾರಂಪರ್ಯ ಅಧಿಕಾರವನ್ನು ವಿರೋಧಿಸಿಕೊಂಡು ಬಂದವನು. ಕೆಲವರಿಗೆ ಸಂಸಾರವೇ ರಾಷ್ಟ್ರ, ಆದ್ರೆ ನನಗೆ ರಾಷ್ಟ್ರವೇ ಸಂಸಾರ ಅನ್ನೋದು ಮೋದಿ ಅವರ ಮಾತು. ಆದರೂ ಸಾವಿರಾರು ಮಂದಿ ಅಂತವರಿಗೆ ಜೈ ಎನ್ನುತ್ತಿದ್ದಾರೆ ರಾಹುಲ್​ ಗಾಂಧಿಯನ್ನು ಟೀಕಿಸಿದರು.

ಇದು ಮಹತ್ವದ ಚುನಾವಣೆಯಾಗಿದೆ. ಕಳೆದ 5 ವರ್ಷಗಳಲ್ಲಿ ನಮ್ಮ ದೇಶ ನಡೆದು ಬಂದಿರುವ ದಾರಿಯನ್ನು ಹಿಂದುರುಗಿ ನೋಡಿದಾಗ ಸಮಾಧಾನ, ಸಂತೋಷ ತಂದುಕೊಡುತ್ತದೆ. ಈ ರಾಷ್ಟ್ರಕ್ಕೆ ಓರ್ವ ಬಲಿಷ್ಠ ವ್ಯಕ್ತಿ ಪ್ರಧಾನಿ ಆಗಬೇಕು ಎಂದಾಗ ಗುಜರಾತ್​ನಿಂದ ಮೋದಿ ಬಂದ್ರು. ಅಲ್ಲಿಯವರೆಗೂ ಬಲಿಷ್ಠ ಪ್ರಧಾನಿ ಅಂದ್ರೆ ಏನು ಅನ್ನೋದೇ ಈ ದೇಶಕ್ಕೆ‌ ತಿಳಿದಿರಲಿಲ್ಲ. ದೇಶದ ಡೆಸ್ಟಿನಿಗೆ ಮೋದಿಯವರು ಶಿಶುವಾಗಿ ಬಂದ್ರು. ‌ಮೋದಿ ಪ್ರಧಾನಿ ಆಗುವ ಮುನ್ನ ಹಲವಾರು ಹಗರಣಗಳು ದೇಶದ ಜನತೆಯನ್ನ ಕಾಡುತ್ತಿದ್ದವು. ಸಮ್ಮಿಶ್ರ ಸರ್ಕಾರದಲ್ಲಿ ಸ್ವಇಚ್ಛೆಯಿಂದ ಏನು ಬೇಕಾದ್ರು ಮಾಡಬಹುದು ಎಂಬ ಭಾವನೆ ಮೂಡಿತ್ತು.‌ ಹೀಗಾಗಿ ದೇಶಕ್ಕೆ ಸುಭದ್ರ ನಾಯಕತ್ವ ಬೇಕು ಎಂದು ಜನ ತೀರ್ಮಾನಿಸಿದ್ದರು.‌ ಆ ಸಮಯದಲ್ಲಿ ಮೋದಿ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟರು. ಈ ದೇಶ ಬಲಿಷ್ಠವಾಗಿ ಹೊರ ಹೊಮ್ಮಬೇಕು ಅನ್ನೋದು ಮೋದಿಯವರ ದೃಷ್ಟಿಕೋನ.‌ ಅಂತಹ ನಾಯಕತ್ವವನ್ನು ಮೋದಿ ಕೊಟ್ಟರು ಎಂದು ಎಸ್​ ಎಂ ಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಮೋದಿ ಅವರ 5 ವರ್ಷ ಆಡಳಿತದಲ್ಲಿ ಒಂದೂ ಹಗರಣ ಇಲ್ಲ, ಇದು ದೇಶಕ್ಕೆ ಕೊಟ್ಟ ದೊಡ್ಡ ಆಡಳಿತ. ಆರ್ಥಿಕ ವ್ಯವಸ್ಥೆಯಲ್ಲಿ ದೇಶ ಇವತ್ತು ಚೀನಾ ದೇಶಕ್ಕೆ ಪೈಪೋಟಿ ನೀಡುತ್ತಿದೆ ಅಂದರೆ ಅದಕ್ಕೆ ಮೋದಿ ಅವರ ತಪಸ್ಸು ಕಾರಣ. ಕಾಂಗ್ರೆಸ್ ಆಗದ, ಹೋಗದ ಕಾರ್ಯಕ್ರಮಗಳನ್ನು ಜನರಿಗೆ ಕೊಡುವುದಾಗಿ ಹೇಳುತ್ತಿದ್ದಾರೆ. ಅವರಿಗೆ ತಾವು ಅಧಿಕಾರಕ್ಕೆ ಬರಲ್ಲ ಅನ್ನೋದು ಗೊತ್ತಿದೆ. ಆದ್ರೂ ಕಾರ್ಯಕ್ರಮಗಳನ್ನು ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಮೋದಿ ಅವರು 5 ವರ್ಷಗಳಲ್ಲಿ ವಿಶ್ವದಲ್ಲಿ ಭಾರತೀಯರು ತಲೆ ಎತ್ತಿ ಓಡಾಡುವಂತೆ ಮಾಡಿದ್ದಾರೆ ಎಂದು ಕೃಷ್ಣ ಹೇಳಿದರು.

sample description

TAGGED:

ABOUT THE AUTHOR

...view details