ಕರ್ನಾಟಕ

karnataka

ಬೆಳಗಾವಿಯಲ್ಲಿ ಕೈಗಾರಿಕೆಗಳ ಸ್ಥಾಪನೆ.. ಮಹಾರಾಷ್ಟ್ರ ಮಾದರಿ ನಿರ್ಣಯಕ್ಕೆ ಉದ್ಯಮಿಗಳ ಒತ್ತಾಯ

By ETV Bharat Karnataka Team

Published : Dec 1, 2023, 12:32 PM IST

Updated : Dec 1, 2023, 6:27 PM IST

ಉತ್ತರ ಕರ್ನಾಟಕದ ಯುವಕರು ಉದ್ಯೋಗಕ್ಕೆಂದು ಬೆಂಗಳೂರಿಗೆ ಬರಬೇಕು. ಇದರ ಬದಲು ಜಿಲ್ಲೆ ಜಿಲ್ಲೆಗಳಲ್ಲೇ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಉದ್ಯಮಿ ಮತ್ತು ಕನ್ನಡ ಹೋರಾಟಗಾರರೊಬ್ಬರು ಹೇಳಿದರು.

Belgavi
ಬೆಳಗಾವಿ: ಮಹಾರಾಷ್ಟ್ರ ಮಾದರಿ ನಿರ್ಣಯಕ್ಕೆ ಉದ್ಯಮಿಗಳ ಒತ್ತಾಯ

ಉದ್ಯಮಿ ರೋಹನ್ ಜುವಳಿ ಮತ್ತು ಮಹಾಂತೇಶ ರಣಗಟ್ಟಿಮಠ ಅಭಿಪ್ರಾಯ

ಬೆಳಗಾವಿ:ಬೃಹತ್​​​ ಕೈಗಾರಿಕೆಗಳು, ಐಟಿ-ಬಿಟಿ ಕಂಪನಿಗಳು ಬೆಂಗಳೂರು ಕೇಂದ್ರಿತವಾಗಿವೆ. ಇದರಿಂದ ಉತ್ತರ ಕರ್ನಾಟಕ ಜಿಲ್ಲೆಯ ಯುವಕರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಇದೆ. ಹಾಗಾಗಿ, ಈ ಬಾರಿಯ ಅಧಿವೇಶನದಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಬೆಂಗಳೂರು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಒತ್ತಾಯ ಕೇಳಿಬಂದಿದೆ.

ಹುಟ್ಟಿದ ಊರು, ಮನೆ, ತಂದೆ ತಾಯಿಯನ್ನು ಬಿಟ್ಟು ಉದ್ಯೋಗಕ್ಕಾಗಿ ದೂರದ ಬೆಂಗಳೂರಿಗೆ ಹೋಗುವ ಈ ಭಾಗದ ಯುವಕರ ಕಷ್ಟದ ಜೀವನ ಹೇಳತೀರದಾಗಿದೆ. ದುಬಾರಿ ಬೆಲೆ ತೆತ್ತು ಜೀವನ ಸಾಗಿಸಬೇಕು. ಅದರಲ್ಲಿ ಉಳಿದರೆ ಮಾತ್ರ ಊರಲ್ಲಿರುವ ತಂದೆ ತಾಯಿಗೆ ಹಣ ಕಳಿಸಬೇಕು. ಹಾಗಾಗಿ ಆಯಾ ಜಿಲ್ಲೆ, ತಾಲ್ಲೂಕುಗಳಲ್ಲೂ ಕೈಗಾರಿಕೆಗಳನ್ನು ಸ್ಥಾಪಿಸುವತ್ತ ಸರ್ಕಾರ ಗಮನ ಹರಿಸಬೇಕಿದೆ. ಆ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ದಿಟ್ಟ ನಿರ್ಧಾರವನ್ನು ಕರ್ನಾಟಕ ಸರ್ಕಾರವೂ ತೆಗೆದುಕೊಳ್ಳಲಿ ಎಂದು 'ಈಟಿವಿ ಭಾರತ್'​ ಜೊತೆಗೆ ಮಾತನಾಡುತ್ತಾ ಬೆಳಗಾವಿಯ ಉದ್ಯಮಿ ರೋಹನ್ ಜುವಳಿ ಒತ್ತಾಯಿಸಿದರು.

ಏನಿದು ಮಹಾರಾಷ್ಟ್ರ ಮಾದರಿ?:ಮುಂಬೈ‌ ಮಹಾನಗರದಲ್ಲಿ ಮುಂದಿನ 25 ವರ್ಷಗಳ ಕಾಲ ಕೈಗಾರಿಕೆಗಳನ್ನು ಆರಂಭಿಸಲು ಅನುಮತಿ ನೀಡದೇ ಇಂಡಸ್ಟ್ರಿಯಲ್ ಡೆವಲಪ್​ಮೆಂಟ್ ಹಾಲಿಡೇಯನ್ನು ಮಹಾರಾಷ್ಟ್ರ ಸರ್ಕಾರ ಅನುಸರಿಸುತ್ತಿದೆ. ಇದರ ಪರಿಣಾಮ‌ ಮಹಾರಾಷ್ಟ್ರದ ಪ್ರತಿ ಜಿಲ್ಲೆ, ತಾಲೂಕುಗಳಲ್ಲೂ ಕೈಗಾರಿಕೆಗಳು ಸ್ಥಾಪನೆಯಾಗಿ, ಯುವಕರಿಗೆ ಉದ್ಯೋಗ ಸಿಗುತ್ತಿದ್ದು, ಹೆಚ್ಚಿನ ತೆರಿಗೆ ಕೂಡ ಸಂಗ್ರಹವಾಗುತ್ತಿದೆ. ಅದೇ ಮಾದರಿಯಲ್ಲಿ ಬೆಂಗಳೂರಿಗೂ ಇಂಡಸ್ಟ್ರಿಯಲ್ ಡೆವಲಪ್​ಮೆಂಟ್ ಹಾಲಿಡೇ ಘೋಷಿಸಿ ಕರ್ನಾಟಕದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕೆಂದು ರೋಹನ್ ಜುವಳಿ ಮನವಿ ಮಾಡಿದ್ದಾರೆ.

ಬೆಳಗಾವಿಯು ಕರ್ನಾಟಕ, ಗೋವಾ, ಮಹಾರಾಷ್ಟ್ರ‌ ಹೀಗೆ ಮೂರು ರಾಜ್ಯಗಳ ಕೇಂದ್ರಸ್ಥಾನವಾಗಿದ್ದು, ಕೈಗಾರಿಕೆಗಳನ್ನು ಸ್ಥಾಪಿಸಲು ಇದು ಸೂಕ್ತ. ಇಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಫೈವ್ ಸ್ಟಾರ್ ಇಂಡಸ್ಟ್ರಿಯಲ್ ಎಸ್ಟೇಟ್ ನಿರ್ಮಿಸಬೇಕು. ಬೆಳಗಾವಿ ಫೌಂಡ್ರಿ ಮತ್ತು ವಾಲ್ ಮ್ಯಾನ್ಯುಫ್ಯಾಕ್ಚರಿಂಗ್​ಗೆ ಪ್ರಸಿದ್ಧಿ ಪಡೆದಿದ್ದು, ಐನೂರು ಎಕರೆ ಪ್ರದೇಶದಲ್ಲಿ ಫೌಂಡ್ರಿ ಪಾರ್ಕ್ ಆರಂಭಿಸುವ ಅವಶ್ಯಕತೆಯಿದೆ. ಅಲ್ಲದೇ ಉದ್ಯಮಿಗಳಿಗೆ ವಿಶೇಷ ಸೌಲಭ್ಯ ನೀಡುವ ಮೂಲಕ ಬೆಳಗಾವಿಗೆ ಹೂಡಿಕೆದಾರರನ್ನು ಆಕರ್ಷಿಸುವ ಕೆಲಸವನ್ನು ಸರ್ಕಾರ ಮಾಡುವಂತೆ ಜುವಳಿ ಸಲಹೆ ನೀಡಿದರು.

ಕನ್ನಡ ಹೋರಾಟಗಾರ ಮಹಾಂತೇಶ ರಣಗಟ್ಟಿಮಠ ಮಾತನಾಡಿ, ಸರ್ಕಾರದ ವಿರುದ್ಧ ಇಲ್ಲಿನ ಜನ ರೊಚ್ಚಿಗೇಳುವ ಮುನ್ನವೇ ಎಚ್ಚೆತ್ತುಕೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ಕೈಗಾರಿಕೆಗಳು, ಐಟಿಬಿಟಿ ಕಂಪನಿಗಳನ್ನು ಆರಂಭಿಸಬೇಕು. ಈ ಬಾರಿಯ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಐತಿಹಾಸಿಕ ನಿರ್ಣಯ ಕೈಗೊಂಡು ಇಲ್ಲಿನ ಯುವಕರು ಇಲ್ಲಿಯೇ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡರು.

ಇದನ್ನೂ ಓದಿ:ಅಧಿವೇಶನ ಮುಗಿಯೋವರೆಗೂ ಎಂಇಎಸ್ ಮುಖಂಡರನ್ನು ಗಡಿಪಾರು ಮಾಡಿ: ಕರವೇ ಆಗ್ರಹ

Last Updated :Dec 1, 2023, 6:27 PM IST

ABOUT THE AUTHOR

...view details