ಕರ್ನಾಟಕ

karnataka

ವರ್ಗಾವಣೆ ಮಸೂದೆ ಅಂಗೀಕಾರ: ಪರಸ್ಪರ ಮತ್ತು ಪತಿ ಪತ್ನಿ ಶಿಕ್ಷಕರ ವರ್ಗಾವಣೆಗೆ ಅವಕಾಶ

By

Published : Sep 22, 2022, 7:52 PM IST

Updated : Sep 22, 2022, 10:19 PM IST

ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ. ಪತಿ ಪತ್ನಿ ಮತ್ತು ಪರಸ್ಪರ ವರ್ಗಾವಣೆಗೆ ಅವಕಾಶ.

ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ
ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ

ಬೆಂಗಳೂರು: ಕಲ್ಯಾಣ ಕರ್ನಾಟಕ, ಕರಾವಳಿ ಭಾಗದಲ್ಲಿ ಶಿಕ್ಷಕರ ಕೊರತೆ ಸರಿಪಡಿಸಲು, ಪರಸ್ಪರ ಕೋರಿಕೆ ವರ್ಗಾವಣೆಗೆ ಅವಕಾಶ ನೀಡುವ ಸಂಬಂಧ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ)ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮೂಲಕ ಕೆಲವು ತಾಂತ್ರಿಕ ಕಾರಣಗಳಿಂದಾಗಿ ವರ್ಗಾವಣೆಯಿಂದ ವಂಚಿತರಾಗಿದ್ದ ಶಿಕ್ಷಕರು ನಿಟ್ಟಿಸಿರು ಬಿಡುವಂತಾಗಿದೆ.

ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ವಿಧೇಯಕವನ್ನು ಮಂಡಿಸಿ ಉದ್ದೇಶಗಳನ್ನು ವಿವರಿಸಿದ ಬಳಿಕ ಅಂಗೀಕಾರ ಪಡೆದುಕೊಂಡರು. ವಿಧೇಯಕ ಉದ್ದೇಶಗಳನ್ನು ವಿವರಿಸಿದ ಸಚಿವರು, ಶಿಕ್ಷಕರ ವರ್ಗಾವಣೆಯ ಕೌನ್ಸಿಲಿಂಗ್ ವೇಳೆ ಕೆಲವು ತೊಂದರೆಗಳಿದ್ದ ಕಾರಣ ಅವುಗಳನ್ನು ಸರಿ ಮಾಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ. ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚಿದೆ. ಇದರ ನಿವಾರಣೆ ಮಾಡಲು ಈ ವಿಧೇಯಕ ಸಹಕಾರಿಯಾಗಲಿದೆ. ಶಿಕ್ಷಕರು ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ ಭಾಗಕ್ಕೆ ವರ್ಗಾವಣೆ ತೆಗೆದುಕೊಳ್ಳಬಹುದೇ ಹೊರತು, ಅಲ್ಲಿಂದ ಬೇರೆಡೆಗೆ ಅವಕಾಶ ಇಲ್ಲ ಎಂದು ಮಾಹಿತಿ ನೀಡಿದರು.

ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ

(ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪಿಯುಸಿ ವಿಲೀನ: ಪಬ್ಲಿಕ್ ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಮಾಹಿತಿ)

ಪತಿ ಪತ್ನಿ ಮತ್ತು ಪರಸ್ಪರ ಶಿಕ್ಷಕರ ವರ್ಗಾವಣೆಗೆ ಅವಕಾಶ:ಐದು ವರ್ಷ ಒಂದು ಕಡೆ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ಒಮ್ಮೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೊದಲು ಈ ನಿಯಮವು ಏಳು ವರ್ಷ ಸೇವೆ ಸಲ್ಲಿಸಿದವರಿಗೆ ಇತ್ತು. ಇದನ್ನು ಸಡಿಲಿಕೆ ಮಾಡಿ ಐದು ವರ್ಷ ಮಾಡಲಾಗಿದೆ. ಇನ್ನು, ಸಾಮಾನ್ಯ ವರ್ಗಾವಣೆಯಲ್ಲಿ ಪತಿ ಪತ್ನಿಯರ ವರ್ಗಾವಣೆಯು ಒಂದೇ ತಾಲೂಕಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ವಿಧೇಯಕದ ಮೂಲಕ ಬೇರೆ ಬೇರೆ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪತಿ ಪತ್ನಿಯರು ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಹಲವು ವರ್ಷಗಳಿಂದ ವರ್ಗಾವಣೆಗಾಗಿ ಕಾಯುತ್ತಿರುವ ದಂಪತಿಗಳಿಗೆ ಅನುಕೂಲವಾಗಲಿದೆ. ಒಂದೇ ತಾಲೂಕಿನಲ್ಲಿ 10 ವರ್ಷ ಸೇವೆ ಸಲ್ಲಿಸಿದರಿಗೆ ಮತ್ತು ಒಂದೇ ತಾಲೂಕಿನಲ್ಲಿ ವಿವಿಧ ವೃಂದಗಳಲ್ಲಿ 15 ಸೇವೆ ಸಲ್ಲಿಸಿದರಿಗೆ ಅವಕಾಶ ಒದಗಿಸಲಾಗಿದೆ ಎಂದು ವಿವರಿಸಿದರು.

ಬಿಜೆಪಿ ಸದಸ್ಯ ಬೆಳ್ಳಿ ಪ್ರಕಾಶ್ ಮಾತನಾಡಿ, ಎರವಲು ಸೇವೆ ಸಲ್ಲಿಸಲು ಶಿಕ್ಷಕರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಸಚಿವರಿಗಿಂತ ಇಲಾಖೆ ಆಯುಕ್ತರು ಕಡೆ ನೋಡುವಂತಾಗಿದೆ. ಈ ಬಗ್ಗೆ ಸಚಿವರು ಗಮನಹರಿಸಬೇಕಾಗಿದೆ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಎರವಲು ಸೇವೆಯನ್ನು ಇಲಾಖೆ ಕಡಿಮೆ ಮಾಡಲಾಗಿದೆ. ತೀರಾ ಅನಿವಾರ್ಯ ಎನಿಸಿದರೆ ಮಾತ್ರ ಎರವಲು ಸೇವೆ ನೀಡಲಾಗುತ್ತದೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯರಾದ ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ರಮೇಶ್‌ಕುಮಾರ್, ರಾಮಲಿಂಗಾರೆಡ್ಡಿ, ಬಿಜೆಪಿ ಸದಸ್ಯ ಪಿ.ರಾಜೀವ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಇದನ್ನು ಓದಿ:ಗ್ರಾಮೀಣ ಸೇವೆಯಡಿ 4 ಸಾವಿರ ವೈದ್ಯರ ನೇಮಕ : ಸಚಿವ ಸುಧಾಕರ್

Last Updated :Sep 22, 2022, 10:19 PM IST

ABOUT THE AUTHOR

...view details