ಕರ್ನಾಟಕ

karnataka

ಕಾಂಗ್ರೆಸ್ ಸರ್ಕಾರದ ನೂರು ದಿನದ ಸಾಧನೆ ಅಂದ್ರೆ ಅದು ವರ್ಗಾವಣೆ ಮಾತ್ರ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

By ETV Bharat Karnataka Team

Published : Aug 30, 2023, 5:05 PM IST

ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

mla-basan-gowda-patil-yatnal slams congress govt
ಕಾಂಗ್ರೆಸ್ ಸರ್ಕಾರದ ನೂರು ದಿನದ ಸಾಧನೆ ಅಂದ್ರೆ ಅದು ವರ್ಗಾವಣೆ ಮಾತ್ರ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ನೂರು ದಿನದ ಸಾಧನೆ ಅಂದರೆ ಅದು ವರ್ಗಾವಣೆ ಮಾತ್ರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ ಎಲ್ಲಾ ಸ್ಥಗಿತ ಆಗಿದೆ. ನಮ್ಮ ಅಧಿಕಾರಾವಧಿಯಲ್ಲಿನ ಕೆಲಸಗಳನ್ನೆಲ್ಲಾ ಸ್ಥಗಿತ ಮಾಡಿದ್ದಾರೆ. ಎಲ್ಲರಿಗೂ ಉಚಿತ ಖಚಿತ ಅಂದ್ರು. ಆದರೆ ಈಗ ನೂರಾರು ಷರತ್ತುಗಳನ್ನು ಹಾಕಿದ್ದಾರೆ. ಯಾವುದೇ ಯೋಜನೆ ಪೂರ್ಣ ಪ್ರಮಾಣದಲ್ಲಿ ಜನರಿಗೆ ಸಿಗುವುದಿಲ್ಲ ಎಂದರು.

ಪ್ರತಿಪಕ್ಷದ ನಾಯಕನ ಆಯ್ಕೆಗೂ ಚಾರ್ಜ್ ಶೀಟ್​ಗೂ ಸಂಬಂಧ ಇಲ್ಲ. ನೂರು ದಿನದ ವೈಫಲ್ಯಗಳೇನು ಎಂದು ಚಾರ್ಜ್ ಶೀಟ್ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಅವರು ಮೊದಲು ಉತ್ತರ ಕೊಡಬೇಕು. ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ. ಅಧಿಕೃತ ವಿರೋಧ ಪಕ್ಷವಾಗಿ ನಾವು ಕೇಳಿದ್ದಕ್ಕೆ ಮೊದಲು ಉತ್ತರ ಕೊಡಲಿ. ಯಾವುದೋ ನೆಪ ಹೇಳಿ ಜಾರಿಕೊಳ್ಳಬಾರದು ಎಂದರು.

ಇನ್ನು, ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಕಚೇರಿ ಪಕ್ಷ ಸಂಘಟನೆಗೆ ಇರುವುದು. ಗಾಸಿಪ್​ಗಳೆಲ್ಲಾ ಮನೆಗಳಲ್ಲಿ ಆಗುತ್ತದೆ. ಗಾಸಿಪ್​ಗೆ ಅಂತಾನೇ ಬೇರೆ ಬೇರೆ ಮನೆಗಳು ಇವೆ. ಅವರ ಮನೆಗಳಲ್ಲಿ ಗಾಸಿಪ್ ಸೃಷ್ಟಿ ಆಗುತ್ತವೆ. ಅಲ್ಲಿ ಯಾಕೆ ಹೋಗಿ ಗಾಸಿಪ್ ಬಿಡಬೇಕು ಎಂದರು. ಕೆಲವು ಮಂದಿ ಪಕ್ಷ ಬಿಡುವುದಾಗಿ ಬೆದರಿಕೆ ಹಾಕುವುದು ಸರಿಯಲ್ಲ. ಪಕ್ಷದಿಂದ ಗೆದ್ದಿದ್ದೇವೆ, ಮಂತ್ರಿಗಳಾಗಿದ್ದೇವೆ. ಏನು ಕರ್ನಾಟಕದಲ್ಲಿ ಬಿಜೆಪಿ ಮುಗಿದೋಗಿದೆಯಾ?. ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಕಥೆ ಮುಗಿದೋಯ್ತು ಅಂತಾರೆ. ಇದು ಬಾಲಿಷ ಹೇಳಿಕೆ. ಜಗತ್ತಿನಲ್ಲಿ ಅತೀ ದೊಡ್ಡ ಪಕ್ಷ ಎಂದರೆ ಅದು ಭಾರತೀಯ ಜನತಾ ಪಕ್ಷ ಎಂದು ಟಾಂಗ್​ ಕೊಟ್ಟರು.

ರೇಣುಕಾಚಾರ್ಯ ಪಕ್ಷ ಬಿಡುತ್ತಾರೆ ಎಂಬುದು ಸುಳ್ಳು. ಅವರು ಪಕ್ಷ ಬಿಡುವುದಿಲ್ಲ. ಅವರಿಗೆ ಯಾಕೋ ಮನಸ್ಸಿಗೆ ಬೇಜಾರಾಗಿದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಒಳ್ಳೆಯದಿನ ಬರುತ್ತದೆ. ಗಡಿಬಿಡಿ ಯಾಕೆ ಮಾಡಿಕೊಳ್ಳಬೇಕು. ಜನ ರೆಸ್ಟ್ ಕೊಟ್ಟಿದ್ದಾರೆ. ಹಾಗಾಗಿ, ಸ್ವಲ್ಪ ದಿನ ರೆಸ್ಟ್ ಮಾಡಲಿ ಎಂದು ಹೇಳಿದರು.

ರೇಣುಕಾಚಾರ್ಯ ಅವರು ಲೋಕಸಭಾ ಟಿಕೆಟ್ ಕೇಳಿದ್ರಲ್ಲಿ ತಪ್ಪಿಲ್ಲ. ದಾವಣಗೆರೆ ಲೋಕಸಭೆಗೆ ಅಲ್ಲಿನ ಸಂಸದರು ನಿಲ್ಲಲ್ಲ ಅಂತಿದ್ದಾರೆ. ಹಾಗಾಗಿ ಟಿಕೆಟ್ ಕೇಳಿದ್ದಾರೆ. ಶಿವಕುಮಾರ್ ಉದಾಸಿ ಅವರೂ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಸಹಜವಾಗಿ ಟಿಕೆಟ್ ಕೇಳಿದ್ದಾರೆ ತಪ್ಪೇನು?. ಅವರಿಗೆ ಅಧಿಕಾರ ಹಕ್ಕು ಎರಡೂ ಇದೆ. ಟಿಕೆಟ್ ಸಿಗುತ್ತದೆ ಅಂದರೆ ಹೋರಾಟ ಮಾಡಲಿ ಎಂದರು.

ರಾಜ್ಯಾಧ್ಯಕ್ಷರ ಮೇಲೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯಾಧ್ಯಕ್ಷರು ಆದಷ್ಟು ಬೇಗ ಮುಕ್ತ ಆಗಬೇಕು ಅಂತಿದ್ದಾರೆ. ಆದರೆ ಮೇಲಿನವರು ಅವರನ್ನು ಬಿಡುತ್ತಿಲ್ಲ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಪಾಪ ಅವರು ಒಳ್ಳೆಯ ಮನುಷ್ಯ. ಸೋತಾಗ ನೂರು ಮಂದಿ ಕಲ್ಲು ಹೊಡೆಯುತ್ತಾರೆ. ಅದೇ ಪಕ್ಷ ಗೆದ್ದಿದ್ದರೆ ಅವರನ್ನೇ ಮುಂದುವರೆಸುತ್ತಿದ್ದರು. ನಾನು ಸೋತಿದ್ದರೂ ಅಷ್ಟೇ. ನಾನು ಈಗ ಗೆದ್ದಿದೇನೆ ಸ್ವಲ್ಪ ಸುಮ್ಮನೆ ಇದ್ದಾರೆ ಎಂದು ಹೇಳಿದರು.

ಗಾಳಿ ಸುದ್ದಿ ಹಬ್ಬಿಸುವುದು ಸರಿಯಲ್ಲ :ಇದೇ ವೇಳೆ ಪಕ್ಷ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಭೈರತಿ ಬಸವರಾಜ್ , ಯಾರೂ ಗಾಳಿ ಸುದ್ದಿ ಹಬ್ಬಿಸುವುದು ಸರಿಯಲ್ಲ. ನಾವು ಪಕ್ಷದಲ್ಲಿ ಇದ್ದೇವೆ. ನಮಗೆ ಪಕ್ಷ ಸರಿಯಾದ ಗೌರವ ಕೊಟ್ಟಿದೆ. ಇಲ್ಲಿದ್ದೇ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ :ಗೃಹಲಕ್ಷ್ಮಿಗೆ ನಮ್ಮ ವಿರೋಧವಿಲ್ಲ, ಉಳಿದ ಕಾರ್ಯಕ್ರಮಗಳ ಬಗ್ಗೆಯೂ ಸರ್ಕಾರದ ಗಮನವಿರಲಿ: ಎನ್.ರವಿಕುಮಾರ್

ABOUT THE AUTHOR

...view details