ಕರ್ನಾಟಕ

karnataka

ಸ್ಥಳೀಯರಿಗೆ ಉದ್ಯೋಗ ಕಡೆಗಣಿಸಿದಲ್ಲಿ ಕ್ರಮ: ಸಚಿವ ಜಗದೀಶ್​ ಶೆಟ್ಟರ್

By

Published : Mar 23, 2021, 1:55 PM IST

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ವಿಪ್ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಜಗದೀಶ್​ ಶೆಟ್ಟರ್, ಬೆಂಗಳೂರು ಗ್ರಾಮಾಂತರದಲ್ಲಿ 292 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿವೆ. 27,281 ಜನರಿಗೆ ಉದ್ಯೋಗ ಇದರಲ್ಲಿ 24,826 ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ ಎಂದು ಮಾಹಿತಿ ನೀಡಿದ್ರು.

minister Jagadish shetter speech in council session
ವಿಧಾನಪರಿಷತ್

ಬೆಂಗಳೂರು: ನೂತನ ಕೈಗಾರಿಕಾ ನೀತಿಯಂತೆ ಒಟ್ಟಾರೆ ಶೆ.70 ರಷ್ಟು ಉದ್ಯೋಗ ಸ್ಥಳೀಯರಿಗೆ ನೀಡಬೇಕಿದ್ದು, ಅರ್ಹತೆ ಇದ್ದರೂ ಸ್ಥಳೀಯರಿಗೆ ಉದ್ಯೋಗ ನೀಡದೇ ಇದ್ದಲ್ಲಿ ಅಂತಹ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಪರಿಷತ್ ನಲ್ಲಿ ಮಾತನಾಡಿ ಜಗದೀಶ್​ ಶೆಟ್ಟರ್​​
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ವಿಪ್ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬೆಂಗಳೂರು ನಗರ ಜಿಲ್ಲೆಯಲ್ಲಿ 2071 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿದ್ದು, 4,86,123 ಜನರಿಗೆ ಉದ್ಯೋಗ ನೀಡಿದೆ, 3,69,453 ಸ್ಥಳೀಯರು ಕಾರ್ಯ ನಿರ್ವಹಿಸುತ್ತಿದ್ದಾರೆ, ಬೆಂಗಳೂರು ಗ್ರಾಮಾಂತರದಲ್ಲಿ 292 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿವೆ.
27,281 ಜನರಿಗೆ ಉದ್ಯೋಗ ಇದರಲ್ಲಿ 24,826 ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ. 2020-25 ಕೈಗಾರಿಕಾ ನೀತಿಯನ್ವಯ ಗ್ರೂಪ್​ ಡಿ ಶೇ.100 ರಷ್ಟು ಸ್ಥಳೀಯರಿಗೆ‌ ಒಟ್ಟಾರೆಯಾಗಿ ಶೇ. 70 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕಿದೆ. ಇದರ ಪಾಲನೆ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನೇಮಕಾತಿಗೆ ಕಾಲಾವಕಾಶ ಕೋರಿದ ಸಚಿವರು
ಸ್ಥಳೀಯ ಉದ್ಯೋಗ ತಕ್ಷಣ ಕೊಡಲು ಸಾಧ್ಯವಿಲ್ಲ, ಸಮಯ ಬೇಕು ಎಂದು ಉತ್ತರ ಪ್ರದೇಶದ ಕಂಪನಿಯೊಂದು ಹೇಳಿದೆ. ಇದು ನಮ್ಮ ಕೈಗಾರಿಕಾ ನೀತಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿರುವ ಅಂಶ ಸೇರಿಸಿದ್ದರ ಫಲವಾಗಿದೆ.‌ ಕಂಪನಿಗಳಿಗೂ ಈ ಬಗ್ಗೆ ಭಯ ಇದೆ ಹಾಗಾಗಿ ಸ್ಥಳೀಯರ ನೇಮಕಾತಿಗೆ ಕಾಲಾವಕಾಶ ಕೋರಿದ್ದಾರೆ ಎಂದರು. ನಿಯಮ ಉಲ್ಲಂಘಿಸಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ, ಸ್ಥಳೀಯರಿಗೆ ಉದ್ಯೋಗ ಕೊಡಲೇಬೇಕು, ಅರ್ಹತೆ ಇದ್ದಾಗಲೂ ಮುಖ್ಯ ಹುದ್ದೆಗೆ ತೆಗೆದುಕೊಳ್ಳದೇ ನಿಯಮಾನುಸಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸದಸ್ಯ ನಾರಾಯಣಸ್ವಾಮಿ,ನನ್ನ ಸೋದರ ಮಾನವ ಮಗ ಇಂಜಿನಿಯರಿಂಗ್ ಮಾಡಿದ್ದಾನೆ ವಿದ್ಯಾರ್ಥಿ ಮೆರಿಟ್ ಇದ್ದಾನೆ ತೆಗೆದುಕೊಳ್ಳಿ ಎಂದು ನಾವು ಶಿಫಾರಸು ಮಾಡಿದರೂ ತೆಗೆದುಕೊಳ್ಳಲಿಲ್ಲ, ಡಿ ದರ್ಜೆ‌ ಶೇ.100 ರಷ್ಟು ಕೊಡಬೇಕು ಕೊಡುತ್ತಿದ್ದಾರೆ, ಆದರೆ ಎ,ಬಿ,ಸಿ ಯಲ್ಲಿ ಶೇ.30 ರಷ್ಟನ್ನೂ ಕೊಡುತ್ತಿಲ್ಲ, ಟೊಯೋಟೋದಲ್ಲಿ ಮುಷ್ಕರ ಮಾಡಿದರೆ ಅವರನ್ನ ಮನೆಗೆ ಕಳಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಶೆಟ್ಟರ್:ಬೆಂಗಳೂರಿನ‌ ಎಸಿ ರೂಂ ನಲ್ಲಿ ಕುಳಿತು ನಾನು ಕೆಲಸ ಮಾಡುತ್ತಿಲ್ಲ, ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದೇನೆ, ಬಿಡದಿಗೆ ನಾನೇ ಹೋಗಿದ್ದೆ, ಅಲ್ಲಿ ಪರಿಶೀಲನೆ ನಡೆಸಿದ್ದು, ಸ್ಥಳೀಯರು ಕೆಲಸ ಮಾಡುತ್ತಿದ್ದಾರೆ. ಅನೇಕ ಕಡೆ ಭೇಟಿ ನೀಡಿ ಪರಿಶೀಲಿಸಿದ ಜಾಗದಲ್ಲಿ ಸ್ಥಳೀಯರಿದ್ದಾರೆ. ನಮ್ಮ ಅಧಿಕಾರಿಗಳಿಗೆರ‍್ಯಾಂಡಮ್‌ ಪರಿಶೀಲನೆ ಮಾಡಲು ಹೇಳಿದ್ದೇನೆ, ಕನ್ನಡಿಗರಿಗೆ ಉದ್ಯೋಗ ಕುರಿತು ಅವರು ಕಾಲ ಕಾಲಕ್ಕೆ ಪರಿಶೀಲನೆ ನಡೆಸುತ್ತಾರೆ, ನಾನು ಕೂಡ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದರು.
ಆರ್ಥಿಕ ಇಲಾಖೆ ಅನುಮತಿ ಸಿಗುತ್ತಿದ್ದಂತೆ ಹುದ್ದೆ ಭರ್ತಿ:ಆರ್ಥಿಕ ಇಲಾಖೆಯ ಅನುಮತಿ ಸಿಗುತ್ತಿದ್ದಂತೆ ಸ್ಥಳೀಯ ಸಂಸ್ಥೆಗಳಲ್ಲಿನ ಖಾಲಿ‌ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಕೆ.ಸಿ.ಕೊಂಡಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, 239 ಸ್ಥಳೀಯ ಸಂಸ್ಥೆಯಲ್ಲಿ 9 ಸಾವಿರದಷ್ಟು ಖಾಲಿ‌ ಹುದ್ದೆಗಳಿದ್ದು, ಅದರಲ್ಲಿ‌ 1 ಸಾವಿರ ಹುದ್ದೆಗಳ ಭರ್ತಿ ಮಾಡಲು ಕೆಪಿಎಸ್ಸಿಗೆ ಕೋರಲಾಗಿದೆ, ವಿವಿಧ ವೃಂದದ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ತಡೆ ಹಿಡಿದಿರುವ ಕಾರಣ ನೇಮಕಾತಿ ವಿಳಂಬವಾಗುತ್ತಿದೆ ಎಂದರು.

ABOUT THE AUTHOR

...view details