ಕರ್ನಾಟಕ

karnataka

ಸುಧಾರಣೆ ಆಗಬೇಕೆಂದರೆ ಪತ್ರ ಬರೆಯುತ್ತೇನೆ.. ಇನ್ನು ಮುಂದೆಯೂ ಲೆಟರ್​​ ಬರೆಯುತ್ತೇನೆ: ಶಾಸಕ ಬಸವರಾಜ ರಾಯರೆಡ್ಡಿ

By ETV Bharat Karnataka Team

Published : Sep 5, 2023, 4:45 PM IST

ಆಡಳಿತದಲ್ಲಿ ಸುಧಾರಣೆಯಾಗಬೇಕು ಅಂದರೆ ಪತ್ರ ಬರೆಯಲೇಬೇಕು ಎಂದು ಕಾಂಗ್ರೆಸ್​ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಶಾಸಕ ಬಸವರಾಜ ರಾಯರೆಡ್ಡಿ
ಶಾಸಕ ಬಸವರಾಜ ರಾಯರೆಡ್ಡಿ

ಬೆಂಗಳೂರು :ಸುಧಾರಣೆ ಆಗಬೇಕು ಅಂದರೆ ಪತ್ರಗಳನ್ನ ಬರೆಯುತ್ತೇನೆ. ಇನ್ನು ಮುಂದೆಯೂ ಪತ್ರಗಳನ್ನು ಬರೆಯುತ್ತೇನೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಕಲಬುರಗಿ ವಿಭಾಗದಲ್ಲಿ ಸರಿಯಾಗಿ ಮಳೆಯೇ ಆಗಿಲ್ಲ. ರೈತರು ಆತಂಕದಲ್ಲಿ ಇದ್ದಾರೆ. ಇದರಿಂದ ಬೇರೆ ಬೇರೆ ಸಮಸ್ಯೆಗಳಾಗುತ್ತಿದೆ. ಕೊಪ್ಪಳ ಜಿಲ್ಲಾ ಅಧಿಕಾರಿಗಳನ್ನು ಕರೆದರೂ ಅವರೂ ಬಂದಿಲ್ಲ. ಹೀಗಾಗಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದೆ. ಕೂಡಲೇ ಜಾರ್ಜ್ ಕರೆ ಮಾಡಿ ಸಭೆ ಕರೆದಿದ್ದೇನೆ ಅಂದಿದ್ದಾರೆ. ಯಾವ ಅಧಿಕಾರಿ ಕೂಡ ಸ್ಪಂದಿಸಲಿಲ್ಲ. ಹಾಗಾಗಿಯೇ ಸಿಎಂಗೆ ಪತ್ರ ಬರೆದಿದ್ದು, ಆಡಳಿತದಲ್ಲಿ ಸುಧಾರಣೆಯಾಗಬೇಕು ಅಂದರೆ ಪತ್ರ ಬರೆಯಲೇಬೇಕು ಎಂದು ತಿಳಿಸಿದರು.

ಈ ರಾಜ್ಯಕ್ಕೆ ಈ ಭಾಗದ ಜನರಿಗೆ ಒಳ್ಳೆಯದಾಗಲಿ ಅನ್ನೋದು ನನ್ನ ಉದ್ದೇಶ. ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲವೇ ಸಿದ್ದರಾಮಯ್ಯ ಮೇಲಾಗಲಿ ಯಾವುದೇ ಸಿಟ್ಟು ಇಲ್ಲ. ಮನುಷ್ಯ ಅಂದಮೇಲೆ ಮಂತ್ರಿ ಆಗಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಆದರೆ, ಕೊಟ್ಟಿಲ್ಲ ಅಂತ ಯಾರ ಮೇಲೂ ಸಿಟ್ಟು ಇಲ್ಲ. ನನ್ನನ್ನು ಸಚಿವರನ್ನಾಗಿ ಮಾಡಬೇಕಿತ್ತು. ಆದರೆ ಮಾಡಿಲ್ಲ. ಅದು ಅವರ ನಿರ್ಧಾರ ಅಷ್ಟೆ ಎಂದರು.

ನಾನು ಸ್ವಾಭಿಮಾನದಿಂದ ಬದುಕುವವನು : ನಾನು ಸ್ವಾಭಿಮಾನದಿಂದ ಬದುಕುವವನು. ಅಲ್ಲೊಂದು ಇಲ್ಲೊಂದು ನಾನು ಮಾತಾನ್ನಾಡೋದಿಲ್ಲ. ಆಡಳಿತ ಸುಧಾರಣೆಯಾಗಬೇಕು ಅನ್ನೋದಷ್ಟೆ ನನ್ನ ಉದ್ದೇಶ. ನಾನು ಬೇರೆ ಯಾವ ಪಕ್ಷಕ್ಕೂ ಹೋಗಬೇಕು ಅಂತಿಲ್ಲ. ನಾನು ಇಲ್ಲೇ ಖುಷಿಯಾಗಿದ್ದೇನೆ ಎಂದರು. ಸಮಸ್ಯೆಗಳನ್ನ ಬಗೆಹರಿಸಲು ಪತ್ರಗಳನ್ನ ಬರೆಯುತ್ತೇನೆ. ಇದರಲ್ಲಿ ತಪ್ಪು ಏನಿದೆ?. ನಾನು ಯಾವ ಅಸಮಾಧಾನಿತ ಶಾಸಕರಿಗೂ ನಾಯಕತ್ವ ವಹಿಸೋದಿಲ್ಲ. ಪಕ್ಷವನ್ನೂ ತೊರೆಯೋದಿಲ್ಲ. ನಾನು ಇಲ್ಲಿ ತುಂಬಾ ಸಂತೋಷವಾಗಿದ್ದೇನೆ ಎಂದು ತಿಳಿಸಿದರು.

ಶಾಸಕ ರಾಯರೆಡ್ಡಿಯಿಂದ ಮತ್ತೊಂದು ಪತ್ರ :ಕಾಂಗ್ರೆಸ್​ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸಿಎಂ ಸಿದ್ಧರಾಮಯ್ಯಗೆ ಮತ್ತೆ ಪತ್ರ ಬರೆದು, ಜೆಸ್ಕಾಂ ಅಧಿಕಾರಿಗಳ ಜೊತೆ ಸಭೆ ನಡೆಸುವಂತೆ ( ಸೆಪ್ಟೆಂಬರ್ 2-2023) ಮನವಿ ಮಾಡಿದ್ದರು. ಶಾಸಕರ ಅಹವಾಲು ಕೇಳುವಂತೆ ಕೋರಿ ಕಳೆದ ಬಾರಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಇದೀಗ ಜೆಸ್ಕಾಂ ಅಧಿಕಾರಿಗಳ ಸಭೆ ಕರೆಯಲು ಒತ್ತಾಯಿಸಿ ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದಿದ್ದರು.‌ ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಜೊತೆ ಸಭೆ ನಡೆಸಲು ಮನವಿ ಮಾಡಿದ್ದರು.

ಕಲಬುರಗಿ ವಿಭಾಗದಲ್ಲಿ ಕೊಪ್ಪಳ, ಕಲಬುರ್ಗಿ, ಬೀದರ್​, ರಾಯಚೂರು, ಬಳ್ಳಾರಿ, ಯಾದಗಿರಿ, ಮತ್ತು ವಿಜಯನಗರ ಜಿಲ್ಲೆಗಳು ಬರುತ್ತಿದ್ದು, ಎಲ್ಲ ಜಿಲ್ಲೆಗಳಿಗೆ ಜೆಸ್ಕಾಂ ವತಿಯಿಂದ ರೈತರ ಜಮೀನುಗಳ ನೀರಾವರಿ ಪಂಪ್​ಸೆಟ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಗಂಗಾ ಕಲ್ಯಾಣ ಹಾಗೂ ರೈತರ ಪಂಪ್​ಸೆಟ್‌ಗಳು ಒಳಗೊಂಡಿರುತ್ತವೆ.

ಕಳೆದ 2 ತಿಂಗಳಿನಿಂದ ಜೆಸ್ಕಾಂ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯುತ್‌ ಸರಬರಾಜು ಉಪಕರಣಗಳಾದ 25KVA, 63KVA, 100KVA ಟ್ರಾನ್ಸ್​ ಫಾರ್ಮಾರುಗಳ ಅಳವಡಿಕೆ ಹಾಗೂ ಬದಲಾವಣೆ ಮಾಡಲು ಆಗಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಶಾಸಕ ರಾಯರೆಡ್ಡಿಯಿಂದ ಸಿಎಂಗೆ ಮತ್ತೊಂದು ಪತ್ರ: ಸಮಸ್ಯೆ ಆಲಿಸದ ಜೆಸ್ಕಾಂ ಅಧಿಕಾರಿಗಳ ಜೊತೆ ಸಭೆ ಕರೆಯುವಂತೆ ಮನವಿ

ABOUT THE AUTHOR

...view details