ಕರ್ನಾಟಕ

karnataka

ತೊಗರಿ ಬೆಳೆಗಾರರ ನೆರವಿಗೆ ಧಾವಿಸಿದ ಸರ್ಕಾರ: ಹೆಕ್ಟೇರ್ ಗೆ 10 ಸಾವಿರ ರೂ. ಪರಿಹಾರ ಘೋಷಿಸಿದ ಸಿಎಂ

By

Published : Jan 24, 2023, 9:41 PM IST

government-rushed-to-the-aid-of-the-growers-cm-announced-10-thousand-compensation-per-hectare
ತೊಗರಿ ಬೆಳೆಗಾರರ ನೆರವಿಗೆ ಧಾವಿಸಿದ ಸರ್ಕಾರ: ಹೆಕ್ಟೇರ್ ಗೆ 10 ಸಾವಿರ ಪರಿಹಾರ ಘೋಷಿಸಿದ ಸಿಎಂ..!

ನೆಟೆ ರೋಗದಿಂದ ನಾಶವಾದ ತೊಗರಿ ಬೆಳೆ - ರೈತರ ನೋವಿಗೆ ಸ್ಪಂದಿಸಿದ ಸರ್ಕಾರ - ವಿಶೇಷ ಪ್ರಕರಣದ ಆಧಾರದಲ್ಲಿ ಹೆಕ್ಟೇರ್​ಗೆ 10 ಸಾವಿರದಂತೆ ಪರಿಹಾರ ಘೋಷಣೆ

ಬೆಂಗಳೂರು: ಉತ್ತರ ಕರ್ನಾಟಕದ ಮೂರು ಜಿಲ್ಲೆಗಳ ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಧಾವಿಸಿದ್ದು, ನೆಟೆ ರೋಗದಿಂದ ನಾಶವಾದ ತೊಗರಿ ಬೆಳೆಗೆ ವಿಶೇಷ ಪ್ರಕರಣದ ಆಧಾರದಲ್ಲಿ ಹೆಕ್ಟೇರ್​ಗೆ 10 ಸಾವಿರದಂತೆ ಗರಿಷ್ಠ 20 ಸಾವಿರಕ್ಕೆ ಸೀಮಿತಗೊಳಿಸಿ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಒಟ್ಟು ಪರಿಹಾರ ಮೊತ್ತವು 223 ಕೋಟಿಯೆಂದು ಅಂದಾಜಿಸಿ ಪರಿಹಾರ ಬಿಡುಗಡೆಗೆ ನಿರ್ಧಾರ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಲಬುರಗಿ ಜಿಲ್ಲಾ ಪ್ರವಾಸದಿಂದ ಹಿಂತಿರುಗಿದ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆಗೆ ಸಂಭವಿಸಿದ ಬೆಳೆಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರವು ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ಗಳಂತೆ ಎನ್​ಡಿಆರ್​ಎಫ್ / ಎಸ್​ಡಿಆರ್​ಎಫ್ ಮಾರ್ಗಸೂಚಿಯಂತೆ ಗರಿಷ್ಠ 2 ಹೆಕ್ಟೇರ್​​ಗೆ ಸೀಮಿತಗೊಳಿಸಿ ಬಾಧಿತ ರೈತರಿಗೆ ಪರಿಹಾರ ಘೋಷಿಸುವ ನಿರ್ಧಾರ ಪ್ರಕಟಿಸಿದರು.

ಬೀದರ್​, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ತದನಂತರ ನವೆಂಬರ್ ತಿಂಗಳಿನಲ್ಲಿ ತಲೆದೋರಿದ ಒಣ / ಶುಷ್ಕ ವಾತಾವರಣದಿಂದ ತೊಗರಿ ಬೆಳೆಯಲ್ಲಿ ಸಂಕೀರ್ಣ ನೆಟೆ ರೋಗ ಮೇಲಿನ ಮೂರು ಜಿಲ್ಲೆಗಳಲ್ಲಿ ಉಲ್ಬಣ ಗೊಂಡು ಬೆಳೆಹಾನಿಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಸುಮಾರು 1.98 ಲಕ್ಷ ಹೆಕ್ಟೇರ್, ಬೀದರ್​ ಜಿಲ್ಲೆಯಲ್ಲಿ ಸುಮಾರು 0.145 ಲಕ್ಷ ಹೆಕ್ಟೇರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸುಮಾರು 0.1028 ಲಕ್ಷ ಹೆಕ್ಟೇರ್ ಒಟ್ಟಾರೆಯಾಗಿ 2.2278 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ತೊಗರಿ ಬೆಳೆ ಸಂಕೀರ್ಣ ನೆಟೆ ರೋಗಕ್ಕೆ ಹಾನಿಯಾಗಿರುವುದು ವರದಿಯಾಗಿದೆ. ಹಾನಿಗೊಳಗಾದ ರೈತರ ನೆರೆವಿಗೆ ಧಾವಿಸಿದ ಸರ್ಕಾರವು ನೆಟೆ ರೋಗವನ್ನು “ವಿಶೇಷ ಪ್ರಕರಣ” ವೆಂದು ರಾಜ್ಯ ಸರ್ಕಾರ ತೀರ್ಮಾನಿಸಿ ಪರಿಹಾರ ಘೋಷಿಸಿದೆ ಎಂದು ಸಿಎಂ ತಿಳಿಸಿದರು.

70 ಸಾವಿರ ಹಕ್ಟೇರ್​ ಪ್ರದೇಶದಲ್ಲಿ ಬೆಳೆ ಹಾನಿ: ಕಲಬುರಗಿ ಜಿಲ್ಲೆಯಲ್ಲಿ 2022ರಲ್ಲಿ ಸುಮಾರು 4.47 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು, ಕಳೆದ ವರ್ಷ ಬಂದ ಮಳೆಯಿಂದ 1.29 ಲಕ್ಷ ಹೆಕ್ಟೇರ್​ ಪ್ರದೇಶದ ತೊಗರಿ ಬೆಳೆ ನಾಶವಾಗಿದ್ದು, 3.45 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ತೊಗರಿ ಬೆಳೆದು ನಿಂತಿತ್ತು. ಆದರೆ, ನೆಟೆ ರೋಗದಿಂದ 50 ಸಾವಿರ ಹಕ್ಟೇರ್​ ಪ್ರದೇಶದಲ್ಲಿ ಬೆಳೆ ಒಣಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿತ್ತು. ಅದರಂತೆ ನೆರೆಯ ಯಾದಗಿರಿ ಮತ್ತು ಬೀದರ್​ ಜಿಲ್ಲೆಯಲ್ಲಿ ಅಂದಾಜು ತಲಾ 10 ಸಾವಿರ ಹೆಕ್ಟೇರ್​ನಂತೆ ಒಟ್ಟು 20 ಸಾವಿರ ಹೆಕ್ಟೇರ್ ಹಾನಿಯಾಗಿತ್ತು. ಮೂರು ಜಿಲ್ಲೆಗಳು ಸೇರಿ ಒಟ್ಟು 70 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿನ ತೊಗರಿ ಬೆಳೆ ಒಣಗಿದೆ ಎಂದು ಕೃಷಿ ಇಲಾಖೆ ವರದಿ ನೀಡಿತ್ತು.

ಇದನ್ನೂ ಓದಿ:ಷಡಕ್ಷರಿ ಸ್ವಾಮಿ ನೇಮಕ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ ಪಡಿಸಿದ ಹೈಕೋರ್ಟ್

ABOUT THE AUTHOR

...view details