ಕರ್ನಾಟಕ

karnataka

ಕೊರತೆ ನೀಗಿಸಲು ವಿಫಲವಾದ ಹೊಸ ಮರಳು ನೀತಿ 2020; ಮತ್ತೆ ಹೊಸ ಮರಳು ನೀತಿಯ ಜಪ

By

Published : Sep 3, 2022, 11:53 AM IST

ಸಾಲು ಸಾಲು ಮರಳು ನೀತಿ ಜಾರಿಗೆ ತಂದರೂ ಸರ್ಕಾರ ವಿಫಲವಾಗುತ್ತಿದೆ. ಇದಕ್ಕೆ ಹಿಂದಿನ ನೀತಿಗಳ ಲೋಪಗಳನ್ನು ಗಮನಿಸಿ ಹೊಸ ಮರಳು ನೀತಿ ಜಾರಿಗೆ ತರಲು ಸರ್ಕಾರ ಚಿಂತಿಸಿದೆ.

Government is thinking of formulating a new sand policy
ಮತ್ತೆ ಹೊಸ ಮರಳು ನೀತಿಯ ಜಪ

ಬೆಂಗಳೂರು: ರಾಜ್ಯದ ಮರಳು ಕೊರತೆಯನ್ನು ನೀಗಿಸಿ, ಸುಲಭವಾಗಿ ಜನರ ಕೈಗೆ ಮರಳು ಸಿಗುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಹೊಸ ಮರಳು ನೀತಿ 2020ಅನ್ನು ಜಾರಿಗೆ ತಂದಿತ್ತು. ಆದರೆ, ಹೊಸ ಮರಳು ನೀತಿ ಮರಳು ಕೊರತೆ ನೀಗಿಸುವಲ್ಲಿ ಎಡವಿದೆ. ಇದಕ್ಕಾಗಿನೇ ಕೆಲ‌ ತಿದ್ದುಪಡಿಯೊಂದಿಗೆ ಹೊಸ ಮರಳು ನೀತಿಯನ್ನು ಮರು ಜಾರಿಗೆ ತರಲು ಸರ್ಕಾರ ಮುಂದಾಗಿದೆ.

ರಾಜ್ಯದ ಜನರ ಮರಳು ಕೊರತೆಯನ್ನು ನೀಗಿಸಿ, ಅಗ್ಗದ ಬೆಲೆಯಲ್ಲಿ ಮರಳು ಪೂರೈಸಲು ಪ್ರತಿ ಸರ್ಕಾರಗಳು ಹೊಸ ಮರಳು ನೀತಿಯನ್ನು ಜಾರಿಗೆ ತರುತ್ತವೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹೊಸ ಮರಳು ನೀತಿ ಜಾರಿಗೆ ತರಲಾಗಿತ್ತು. ಅದಾದ ಬಳಿಕ ಸಮ್ಮಿಶ್ರ ಸರ್ಕಾರದಲ್ಲೂ ಮತ್ತೊಂದು ಹೊಸ ಮರಳು ನೀತಿ ಜಾರಿಗೆ ಬಂದಿತ್ತು.

ಆದರೆ ಈ ಮರಳು ನೀತಿಯಿಂದ ಮರಳು ಕೊರತೆ ನೀಗಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಈಗಿನ ಬಿಜೆಪಿ ಸರ್ಕಾರ ರಾಜ್ಯದ ಜನರ ಮರಳು ಪರದಾಟವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ 2020 ರಲ್ಲಿ ಹೊಸ ಮರಳು ನೀತಿ ಜಾರಿಗೆ ತಂದಿತು.‌ ಆದರೆ, ಈ ಹೊಸ ಮರಳು ನೀತಿಯೂ ಜನರ ಮರಳು ಪರದಾಟ ನೀಗಿಸುವಲ್ಲಿ ವಿಫಲವಾಗಿದೆ. ಅದಕ್ಕಾಗಿ ಈ ಹೊಸ ಮರಳು ನೀತಿಯಲ್ಲಿನ ನ್ಯೂನತೆಗಳಿಗೆ ಕೆಲ ತಿದ್ದುಪಡಿ ತಂದು ಸುಲಭವಾಗಿ ಮರಳು ಲಭ್ಯವಾಗಿಸಲು ಸರ್ಕಾರ ನಿರ್ಧರಿಸಿದೆ.

ಎಡವಿದ ಹೊಸ ಮರಳು ನೀತಿ 2020:ಹೊಸ ಮರಳು ನೀತಿ 2020 ರಾಜ್ಯದ ಮರಳು ಕೊರತೆ ನೀಗಿಸುವಲ್ಲಿ ವಿಫಲವಾಗಿದೆ. ಹೊಸ ಮರಳು ನೀತಿ ಜಾರಿಯಾದ ಬಳಿಕನೂ ರಾಜ್ಯ ಸುಮಾರು 10 ದಶ ಲಕ್ಷ ಮೆಟ್ರಿಕ್ ಟನ್ ಮರಳು ಕೊರತೆ ಎದುರಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಮರಳು ನೀತಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಟನ್ ಮರಳಿಗೆ 300 ರೂ. ನಿಗದಿ ಮಾಡಲಾಗಿದೆ. ನದಿ ಪಾತ್ರ ಹಾಗೂ ನಗರ ಪ್ರದೇಶಗಳಲ್ಲಿ ಮರಳು ಮಾರಾಟಕ್ಕೆ ಪ್ರತಿ ಟನ್ ಮರಳಿಗೆ 700 ರೂ. ನಿಗದಿ ಮಾಡಲಾಗಿದೆ. ಸರ್ಕಾರಿ ಯೋಜನೆಗಳು ಮತ್ತು ಬಡವರಿಗೆ ರಿಯಾಯಿತಿ ದರದಲ್ಲಿ ಮರಳು ನೀಡಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಸ್ಥಳೀಯ ತೊರೆ, ಕೆರೆಗಳಿಂದ ಮರಳು ತೆಗೆಯಲು ಆಯಾ ಗ್ರಾಮ ಪಂಚಾಯತಿಗಳಿಗೆ ಅನುಮತಿ ಕೊಡುವ ಅಧಿಕಾರ ನೀಡಲಾಗಿದೆ.

ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗಾಗಿ Hgml ಮತ್ತು ksmcl ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಈ ಸಂಸ್ಥೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಹಳ್ಳ, ಕೆರೆ ಪ್ರದೇಶಗಳಲ್ಲಿ ಮರಳು ತೆಗೆಯಲು ಮುಂದೆ ಬರುತ್ತಿಲ್ಲ. ಪ್ರತಿ ಟನ್ ಗೆ 700 ರೂ. ರಂತೆ ಮರಳು ಮಾರಾಟ ಬೆಲೆ ನಿಗದಿ ಮಾಡಿರುವುದರಿಂದ ಆ ಬೆಲೆಗೆ ಗ್ರಾಮೀಣ ಭಾಗದ ಕೆರೆ, ತೊರೆಗಳಿಂದ ಮರಳು ತೆಗೆಯಲು ಸಾಧ್ಯವಾಗುತ್ತಿಲ್ಲ.

ಇತ್ತ ಎರಡು ಸಂಸ್ಥೆಗಳು ಮರಳು ಬ್ಲಾಕ್​ಗಳಲ್ಲಿ ಗಣಿಗಾರಿಕೆ ನಡೆಸಲು ಪರಿಸರ ಇಲಾಖೆಯ ಅನುಮತಿ ಕೇಳಿದೆ. ಆದರೆ, ಪರಿಸರ ಇಲಾಖೆ ಅನುಮತಿ ಕೊಡದೇ ಇರುವ ಕಾರಣ ಮರಳುಗಾರಿಕೆ ಮಾಡಲಾಗುತ್ತಿಲ್ಲ. ಇದರಿಂದ ಮರಳು ಪೂರೈಕೆಯಲ್ಲಿ ಕೊರತೆಯಾಗುತ್ತಿದೆ ಎಂದು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮರಳು ಲಭ್ಯತೆಯ ಸ್ಥಿತಿಗತಿ ಏನಿದೆ?:ರಾಜ್ಯದಲ್ಲಿ ಸರ್ಕಾರಿ ಕಾಮಗಾರಿ ಮತ್ತು ಸಾರ್ವಜನಿಕರ ಗೃಹ ನಿರ್ಮಾಣ ಕಾಮಗಾರಿಗಳಿಗೆ ಅಂದಾಜು 45 ದಶಲಕ್ಷ ಮೆಟ್ರಿಕ್‌ ಟನ್ ಮರಳು ಬೇಡಿಕೆ ಇದೆ. ಈ ಪೈಕಿ ಅಂದಾಜು 30 ದಶಲಕ್ಷ ಮೆಟ್ರಿಕ್ ಟನ್ ಮರಳು 545 ಎಂ-ಸ್ಯಾಂಡ್ ಘಟಕಗಳಿಂದ ಪೂರೈಕೆಯಾಗುತ್ತಿದೆ. ಇನ್ನು ನದಿ ಪಾತ್ರದ ಟೆಂಡರ್ ಮತ್ತು ಹರಾಜು ಮೂಲಕ ಮಂಜೂರಾದ ಮರಳು ಬ್ಲಾಕ್​ಗಳಿಂದ ಮತ್ತು ಪಟ್ಟಾ ಜಮೀನಿನಲ್ಲಿ ಮಂಜೂರಾದ ಲೈಸೆನ್ಸ್ ಪ್ರದೇಶಗಳಿಂದ ಅಂದಾಜು 4-4.

5 ದಶಲಕ್ಷ ಮೆಟ್ರಿಕ್ ಟನ್‌ ಮರಳು ಪೂರೈಕೆಯಾಗುತ್ತಿದೆ. ಅಂದಾಜು 2 ದಶಲಕ್ಷ ಮೆಟ್ರಿಕ್‌ ಟನ್‌ ಹೊರ ರಾಜ್ಯದ ಎಂಇಂಡ್ ಹಾಗೂ ನದಿ ಮರಳು ಪೂರೈಕೆಯಾಗುತ್ತಿದೆ. ಆ ಮೂಲಕ ಸುಮಾರು 10 ದಶಲಕ್ಷ ಮೆಟ್ರಿಕ್ ಟನ್ ಮರಳು ಕೊರತೆಯಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಹಿತಿ ನೀಡಿದೆ. ಪ್ರಸ್ತುತ ರಾಜ್ಯದಲ್ಲಿ ಟೆಂಡರ್-ಕಂ-ಹರಾಜು ಮೂಲಕ 198 ಬ್ಲಾಕ್ ಗಳಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಪಟ್ಟಾ ಜಮೀನುಗಳ 128 ಮರಳು ಲೈಸೆನ್ಸ್ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆ ನಿರ್ವಹಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಹೊಸ ಮರಳು ನೀತಿಯಡಿ ಗುರುತಿಸಿದ ಬ್ಲಾಕ್​ಗಳು:ಹೊಸ ಮರಳು ನೀತಿ-2020ರಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಗುರುತಿಸಿರುವ ಒಟ್ಟು 254 ಮರಳು ಬ್ಲಾಕ್​ಗಳ ಪ್ರತಿ 189 ಮರಳು ಬ್ಲಾಕ್​​ಗಳಿಗೆ ಅಧಿಸೂಚನೆ ಹೊರಡಿಸಿ, 166 ಮರಳು ಬ್ಲಾಕ್​ಗಳಿಗೆ ಕಾರ್ಯಾದೇಶ ನೀಡಲಾಗಿದೆ. 43 ಮರಳು ಬ್ಲಾಕ್​ಗಳು ಕಾರ್ಯನಿರ್ವಹಿಸುತ್ತಿದ್ದು, 17,011 ಮೆ.ಟನ್ ಮರಳನ್ನು ವಿಲೇವಾರಿ ಮಾಡಲಾಗಿದೆ.

KSMCL ಸಂಸ್ಥೆಗೆ 33 ಮತ್ತು HGML ಸಂಸ್ಥೆಗೆ 43 ಮರಳು ಬ್ಲಾಕ್​ಗಳಲ್ಲಿ ಗಣಿಗಾರಿಕೆ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಈ ಸಂಸ್ಥೆಗಳು ಮರಳುಗಾರಿಕೆಗೆ ಪರಿಸರ ಅನುಮತಿ ಪತ್ರ ಪಡೆಯಲು ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇತ್ತ KSMCL ವತಿಯಿಂದ ದಕ್ಷಿಣ ಕನ್ನಡ ಜಿಲೆಯ ಆದ್ಯಪಾಡಿ ಮತ್ತು ಶಂಭೂರು ಹಾಗೂ ಉಡುಪಿ ಜಿಲ್ಲೆಯ ಬಂಟ್ವಾಡಿ, ಕಿಂಡಿ ‌ಅಣೆಕಟ್ಟು ಹಿನ್ನೀರಿನ ಪ್ರದೇಶಗಳಲ್ಲಿ, ಹೂಳಿನೊಂದಿಗೆ ದೊರೆಯುವ 54,790 ಮೆ.ಟನ್ ಮರಳನ್ನು ತೆಗೆದು, ಸ್ಪಾಕ್ ಯಾರ್ಡ್​ನಲ್ಲಿ ಸಂಗ್ರಹಿಸಿದೆ. 49,088 ಮೆ.ಟನ್‌ ಮರಳನ್ನು ಆನ್ ಲೈನ್‌ ಬುಕಿಂಗ್ ಮೂಲಕ ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಪೂರೈಕೆ ಮಾಡಲಾಗಿದ್ದು, 3.44 ಕೋಟಿ ರೂ. ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ :ಗೌರಿ ಗಣೇಶ ಹಬ್ಬದ ಎಫೆಕ್ಟ್​.. ಬೆಂಗಳೂರಲ್ಲಿ ಹೆಚ್ಚುವರಿ 500 ಟನ್ ಹಸಿ ತ್ಯಾಜ್ಯ ಉತ್ಪತ್ತಿ

ABOUT THE AUTHOR

...view details