ಬೆಂಗಳೂರು: ಸದನದಲ್ಲಿ ನಾವು ಸರ್ಕಾರದ ಹಗರಣಗಳ ವಿರುದ್ಧ ನಡೆಸುತ್ತಿರುವ ಹೋರಾಟದಿಂದ ಭಯಗೊಂಡಿರುವ ಸರ್ಕಾರ ಅರ್ಕಾವತಿ ರಿ-ಡೂ ಪ್ರಕರಣ ತನಿಖೆಯ ಮಾತನ್ನು ಆಡುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ.
ಸರಣಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, ಸದನದಲ್ಲಿ ಈ ಸರ್ಕಾರದ ಹಗರಣಗಳ ಬಗ್ಗೆ ನಾವು ಪ್ರಶ್ನೆ ಮಾಡುವ ವಿಚಾರ ಬಿಜೆಪಿಯವರಿಗೆ ಮೈಚಳಿ ಹುಟ್ಟಿಸಿದೆ. ಹಾಗಾಗಿ ಅರ್ಕಾವತಿ ರಿ-ಡೂ ಪ್ರಕರಣದ ತನಿಖೆಯ ಬಗ್ಗೆ ಮಾತಾಡುತ್ತಿದ್ದಾರೆ. ಬುಟ್ಟಿಯೊಳಗಿನ ಹಾವು ಬಿಡ್ತೀವಿ ಎಂದು ಹೆದರಿಸುವ ಬದಲು ತನಿಖೆ ನಡೆಸಲಿ. ಸರ್ಕಾರ ಅವರದ್ದೇ ಅಲ್ಲವೇ? ಬ್ಲಾಕ್ಮೇಲ್ ಮಾಡಿದರೆ ಹೆದರುವವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗುತ್ತಿದೆ. ಮೊನ್ನೆಯಷ್ಟೇ ದೊಡ್ಡಬಳ್ಳಾಪುರದಲ್ಲಿ ಖಾಲಿ ಕುರ್ಚಿಗಳ ಎದುರು 'ಜನ ಸ್ಪಂದನ'ಯಾತ್ರೆ ಎಂಬ ಪ್ಲಾಫ್ ಶೋ ನಡೆಸಿರುವ ಬಿಜೆಪಿಯವರು ಇಂದು ಸದನದಲ್ಲಿ ಉತ್ತರಿಸಲೇಬೇಕಾದ ಅನೇಕ ಪ್ರಶ್ನೆಗಳಿವೆ. 40 ಪರ್ಸೆಂಟ್ ಕಮೀಷನ್, ಪಿಎಸ್ಐ ಹಗರಣ, ನೆರೆ ನಿರ್ವಹಣೆ ವೈಫಲ್ಯದ ಬಗ್ಗೆ ಸದನದಲ್ಲಿ ಉತ್ತರಿಸಲೇಬೇಕು ಎಂದರು.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಮಳೆಯಿಂದಾಗಿ ಜೀವಹಾನಿ, ಆಸ್ತಿ ಹಾನಿ ಸಂಭವಿಸಿದೆ. ಸಂಕಷ್ಟಕ್ಕೊಳಗಾದ ಜನರ ಜೀವದ ಬಗ್ಗೆ ಯೋಚಿಸದ ಸರ್ಕಾರ ಮಾನ ಮರ್ಯಾದೆ ಇಲ್ಲದೆ ಜನಸ್ಪಂದನ ಯಾತ್ರೆ ಮಾಡಿದೆ. ಈ ಸರ್ಕಾರ ಜನರ ಯಾವ ಸಮಸ್ಯೆಗೆ ಸ್ಪಂದಿಸಿದೆ ಎಂದು ಸದನದಲ್ಲಿ ಹೇಳಲಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಉಭಯ ಸದನಗಳಲ್ಲೂ ಹೋರಾಟ: ಬಿ ಕೆ ಹರಿಪ್ರಸಾದ್