ETV Bharat / state

ಅಪಘಾತಕ್ಕೀಡಾದ ವಾಹನದ ದುರಸ್ತಿಗೆ ವೆಚ್ಚ ಭರಿಸಿದ ಬಳಿಕ ಹೆಚ್ಚಿನ ಪರಿಹಾರ ಕೇಳಲಾಗದು : ಹೈಕೋರ್ಟ್ - High Court

author img

By ETV Bharat Karnataka Team

Published : May 14, 2024, 10:50 PM IST

ಅಪರಾಧ ವಾಹನದ ವಿಮಾ ಕಂಪನಿಗೆ ಹೆಚ್ಚಿನ ಪರಿಹಾರವನ್ನು ನೀಡುವಂತೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

High court
ಹೈಕೋರ್ಟ್ (ETV Bharat)

ಬೆಂಗಳೂರು : ಅಪಘಾತಕ್ಕೀಡಾದ ವಾಹನದ ದುರಸ್ತಿಗೆ ಆಗಿರುವ ಸಂಪೂರ್ಣ ವೆಚ್ಚವನ್ನು ವಿಮಾ ಕಂಪನಿ ಭರಿಸಿದ ಬಳಿಕವೂ ಹೆಚ್ಚಿನ ಪಾವತಿ ಪಡೆಯಲು ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣ ಸಂಬಂಧ ಮೋಟಾರು ವಾಹನ ಹಕ್ಕುಗಳ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ನಗರದ ಕುಮಾರವೇಲ್ ಜಾನಕಿರಾಮ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠ ಈ ಆದೆಶ ನೀಡಿದೆ. ಅಲ್ಲದೆ, ಅಪರಾಧ ವಾಹನದ ವಿಮಾ ಕಂಪನಿಗೆ ಹೆಚ್ಚಿನ ಪರಿಹಾರ ನೀಡುವಂತೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಹಾನಿಗೊಳಗಾದ ವಾಹನಕ್ಕೆ ರಾಯಲ್ ಸುಂದರಂ ಅಲಯನ್ಸ್ ಇನ್ಶುರೆನ್ಸ್ ಕಂಪನಿಯಲ್ಲಿ ವಿಮೆಯನ್ನು ಮಾಡಲಾಗಿದೆ. ಅಪಘಾತಕ್ಕೊಳಗಾದ ಬಳಿಕ ಯಾವುದೇ ತಕರಾರು ಅಥವಾ ಅಡ್ಡಿಯಿಲ್ಲದೆ, ನಷ್ಟವನ್ನು ಕಂಪನಿ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಿದೆ. ಬಳಿಕ ಅರ್ಜಿದಾರರು ಅಪಘಾತಕ್ಕೀಡು ಮಾಡಿದ ವಾಹನದ ವಿಮಾ ಕಂಪನಿಯಿಂದ ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದು, ನ್ಯಾಯಮಂಡಳಿ ಆ ಮನವಿಯನ್ನು ತಿರಸ್ಕರಿಸಿದೆ. ಇದು ಸಮರ್ಥನಿಯವಾಗಿದೆ ಎಂದು ಪೀಠ ತಿಳಿಸಿದೆ.

ಹಕ್ಕುದಾರರು ಪರಿಹಾರವಾಗಿ ತನ್ನ ವಾಹನದ ವಿಮಾ ಕಂಪನಿಯಿಂದ ಪೂರ್ಣ ಮೊತ್ತವನ್ನು ಪಡೆದಿದ್ದರೆ, ಬಳಿಕ ಆತ ತನ್ನ ವಾಹನದ ದುರಸ್ತಿಗಾಗಿ ಅಪರಾಧ ವಾಹನದ ವಿಮಾ ಕಂಪನಿಯಿಂದ ಹೆಚ್ಚಿನ ಪಾವತಿಯನ್ನು ಕ್ಲೈಮ್ ಮಾಡಲಾಗುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಜತೆಗೆ ವಾಹನ ಹಕ್ಕುಗಳ ನ್ಯಾಯಮಂಡಳಿಯ ಆದೇಶ ಪುರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ ಏನು ?: 2009ರ ಮೇ 12 ರಂದು ಬೆಳಗ್ಗೆ ಸುಮಾರು 9:30 ಗಂಟೆಗೆ ಅರ್ಜಿದಾರರ ತಂದೆ ಅವರ ಸಂಬಂಧಿ ಪಿ. ಪ್ರಕಾಶ್ ಎಂಬುವವರೊಂದಿಗೆ ವೈದ್ಯಕೀಯ ತಪಾಸಣೆಗಾಗಿ ನಾರಾಯಣ ಹೃದಯಾಲಯಕ್ಕೆ ಮಾರುತಿ ಓಮ್ನಿ ಕಾರಿನಲ್ಲಿ ಹೋಗುತ್ತಿದ್ದರು. ಹೊಸೂರು ರಸ್ತೆಯ ಹಳೇ ಚಂದಾಪುರ ವೃತ್ತದ ಬಳಿ ಬಂದಾಗ ಅವರು ಯು-ಟರ್ನ್ ತೆಗೆದುಕೊಳ್ಳುವ ಸಲುವಾಗಿ ವಾಹನವನ್ನು ನಿಧಾನಗೊಳಿಸಿದರು.

ಆ ಸಮಯದಲ್ಲಿ ಮಹೀಂದ್ರಾ ಮ್ಯಾಕ್ಸಿ ಪಿಕ್ ಅಪ್ ವಾಹನ ಚಾಲಕನು ಏಕಾಏಕಿ ಮತ್ತು ನಿರ್ಲಕ್ಷತನದಿಂದ ಬಂದು ಮಾರುತಿ ಓಮ್ನಿಗೆ ಡಿಕ್ಕಿ ಹೊಡೆದು ಅಪಘಾತಕ್ಕೊಳಪಡಿಸುತ್ತಾನೆ. ಡಿಕ್ಕಿಯ ರಭಸಕ್ಕೆ ಮಾರುತಿ ಓಮ್ನಿ ವ್ಯಾನ್ ದುರಸ್ತಿಗೆ ಸಾಧ್ಯವಾಗದಷ್ಟು ಜಖಂಗೊಂಡಿತ್ತು. ಮಾರುತಿ ಓಮ್ನಿ ವ್ಯಾನ್‌ಗೆ ಹಾನಿಯಾದ ಕಾರಣ ಪರಿಹಾರಕ್ಕಾಗಿ ಮೋಟಾರು ವಾಹನ ಹಕ್ಕುಗಳ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದರು.

ನ್ಯಾಯಮಂಡಳಿಯೂ ಅರ್ಜಿದಾರರು ತಮ್ಮ ವಿಮಾ ಕಂಪನಿಯಿಂದ ವಾಹನಕ್ಕಾದ ಹಾನಿಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದಲ್ಲಿ ಪರಿಹಾರವನ್ನು ಪಡೆದುಕೊಂಡಿದ್ದು, ಅಪಾರಾಧಕ್ಕೀಡು ಮಾಡಿದ ವಾಹನ ಕಂಪನಿಯಿಂದ ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿ ಇರುವುದನ್ನು ಗಮನಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : ಒಂದೇ ಆರೋಪದಲ್ಲಿ ಎರಡು ಪ್ರಕರಣಗಳನ್ನು ಒಂದೇ ಕೋರ್ಟ್​ನಲ್ಲಿ ವಿಚಾರಣೆ ನಡೆಸಬಹುದು: ಹೈಕೋರ್ಟ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.