ಕರ್ನಾಟಕ

karnataka

ಎಡಗೈ ಊತ, ನೋವು; ತಪಾಸಣೆಗೆ ಒಳಗಾದ ಸಿದ್ದರಾಮಯ್ಯ: ಡಿಕೆಶಿ ಆರೋಗ್ಯ ಚೇತರಿಕೆ

By

Published : May 12, 2023, 11:36 AM IST

ಕಾಂಗ್ರೆಸ್​ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈ ನೋವಿನಿಂದ ಬಳಲುತ್ತಿದ್ದರೆ, ಜ್ವರದಿಂದ ಬಳಲುತ್ತಿದ್ದ ಡಿ.ಕೆ.ಶಿವಕುಮಾರ್ ಆರೋಗ್ಯ ಸುಧಾರಿಸಿದೆ.

cng
ಡಿಕೆಶಿ,ಸಿದ್ದರಾಮಯ್ಯ

ಬೆಂಗಳೂರು: ಎಡಗೈ ನೋವಿನಿಂದ ಬಳಲುತ್ತಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದು ವೈದ್ಯರ ತಪಾಸಣೆಗೆ ಒಳಗಾದರು. ನಿರಂತರವಾಗಿ ಮತ ಪ್ರಚಾರ ಕಾರ್ಯದಲ್ಲಿ ತೊಡಗಿ ಬಳಲಿರುವ ಅವರ ಮನೆಗೆ ಆಗಮಿಸಿದ ವೈದ್ಯರು ತಪಾಸಣೆ ನಡೆಸಿದ್ದಾರೆ. ಎಡಗೈ ನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗಿದೆ. ಎರಡು ಕೈಗಳು ಊದಿಕೊಂಡಿದ್ದು, ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷಿಸಿ ಚಿಕಿತ್ಸೆ ನೀಡಲು ಖಾಸಗಿ ವೈದ್ಯರು ಆಗಮಿಸಿದ್ದರು.

ನಿರಂತರ ಪ್ರಚಾರ, ಜನರ ನಡುವೆ ಓಡಾಟ ನಡೆಸಿದ ಹಿನ್ನೆಲೆಯಲ್ಲಿ ಎಡಗೈಯಲ್ಲಿ ಊತ ಕಾಣಿಸಿಕೊಂಡಿದೆ. ವಿಶ್ರಾಂತಿ ಸಿಗದ ಹಿನ್ನೆಲೆಯಲ್ಲಿ ಕೊಂಚ ಬಳಲಿರುವ ಸಿದ್ದರಾಮಯ್ಯ ನಿನ್ನೆ ಸಹ ಸಾಕಷ್ಟು ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದರು. ಇಂದು ವೈದ್ಯರು ಬಂದು ಎಡಗೈ ಊತದ ತಪಾಸಣೆಯ ಜತೆಗೆ ಅವರ ಆರೋಗ್ಯ ತಪಾಸಣೆ ಮಾಡಿಕೊಂಡು ತೆರಳಿದ್ದಾರೆ.

ಇದನ್ನೂ ಓದಿ:ಸುಪ್ರೀಂ ತೀರ್ಪಿನ ಬೆನ್ನಲ್ಲೇ ಕೇಜ್ರಿವಾಲ್‌ ಸರ್ಕಾರದಿಂದ ಹೊಸ ಅಧಿಕಾರಿಗಳ ನೇಮಕ: ಕಠಿಣ ಕ್ರಮಗಳ ಎಚ್ಚರಿಕೆ

ಸಿದ್ದರಾಮಯ್ಯ ಖಾಸಗಿ ವೈದ್ಯ ರವಿಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಕೈ ಊತ ಸ್ವಲ್ಪ ಕಡಿಮೆಯಾಗಿದೆ. ಪೂರ್ಣ ಊತ ಕಡಿಮೆಯಾಗಲು 15 ದಿನ ರೆಸ್ಟ್ ಬೇಕು. Viral Herpes ಇನ್ಫೆಕ್ಷನ್‌ನಿಂದ ಕೈ ಊತ ಕಾಣಿಸಿಕೊಂಡಿದೆ. ಒತ್ತಡದಿಂದ ಇನ್ಫೆಕ್ಷನ್ ಕಾಣಿಸಿಕೊಂಡಿದೆ. ಇದನ್ನು ಹೊರತುಪಡಿಸಿ ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ ಎಂದರು.

ಸಂಜೆ ವರುಣಗೆ ಪ್ರಯಾಣ: ನಾಳೆ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಇಂದು ಸಂಜೆ ಮೈಸೂರಿಗೆ ತೆರಳಲಿದ್ದಾರೆ. ಬೆಂಗಳೂರಿಂದ ಸಂಜೆ ಮೈಸೂರು ಕಡೆ ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸುವರು. ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಫಲಿತಾಂಶ ನೋಡಿಕೊಂಡು ವರುಣ ಕಡೆ ಪ್ರಯಾಣ ಮಾಡಲು ತೀರ್ಮಾನಿಸಿದ್ದಾರೆ. ಬೆಳಿಗ್ಗೆಯೇ ಎದ್ದು ಹೇರ್ ಕಟಿಂಗ್, ಶೇವಿಂಗ್ ಮಾಡಿಕೊಂಡು ಫ್ರೆಷ್ ಆಗಿರುವ ಸಿದ್ದರಾಮಯ್ಯ ಉಪಹಾರ ಸೇವಿಸಿ ಕೆಲ ಆಪ್ತರ ಜತೆ ಸಮಾಲೋಚಿಸಿದ್ದಾರೆ.

ಡಿಕೆಶಿ ಆರೋಗ್ಯ ಚೇತರಿಕೆ:ನಿನ್ನೆ ಜ್ವರದಿಂದ ಬಳಲುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಇಂದು ಸಂಜೆಯ ವೇಳೆಗೆ ಅವರು ಸಂಪೂರ್ಣ ಚೇತರಿಸಿಕೊಳ್ಳಲಿದ್ದಾರೆ. ರಾತ್ರಿ ನಗರದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ. ನಾಳೆ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದ್ದು ಸುಮಾರು 12 ಗಂಟೆ ಹೊತ್ತಿಗೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಕನಕಪುರದತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಸಂಜೆ ಅಲ್ಲಿಂದ ಹಿಂದಿರುಗಿ ನಗರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸುದ್ದಿಗೋಷ್ಠಿ ನಡೆಸಬಹುದು ಎಂಬ ಮಾಹಿತಿ ಇದೆ.

ಇದನ್ನೂ ಓದಿ:ಕಾಂಗ್ರೆಸ್‌ನವರ ರೆಸಾರ್ಟ್​ ರಾಜಕೀಯದ ಮಾತು ಹಾಸ್ಯಾಸ್ಪದ: ಬಿ.ಸಿ.ಪಾಟೀಲ್

ABOUT THE AUTHOR

...view details