ಕರ್ನಾಟಕ

karnataka

ಜನಪ್ರಿಯ ಯೋಜನೆಗಳಿಗೆ ಹಣ ಸಂಗ್ರಹಿಸಬೇಕಿದೆ; ಅಗತ್ಯ ವಸ್ತುಗಳ ಬೆಲೆ ಏರಿಕೆ ಸಮರ್ಥಿಸಿಕೊಂಡ ಅರುಣ್ ಸಿಂಗ್!

By

Published : Sep 2, 2021, 3:28 PM IST

bjp karnataka incharge arun singh  reation

ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈ ಕುರಿತು ಸದ್ಯ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಪ್ರತಿಕ್ರಿಯಿಸಿದ್ದು, ತೆರಿಗೆ ಸಂಗ್ರಹಕ್ಕೆ ಬೆಲೆ ಏರಿಕೆ ಅನಿವಾರ್ಯ ಎಂದಿದ್ದಾರೆ. ಜನರಿಗೆಂದೇ ಜಾರಿಗೊಳಿಸಿರುವ ಬೇರೆ -ಬೇರೆ ಯೋಜನೆಗಳಿಗೆ ಹಣ ಒದಗಿಸಲು ಬೆಲೆ ಏರಿಕೆ ಅವಶ್ಯಕ ಎಂದು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು:ಮೋದಿ ಸರ್ಕಾರದಲ್ಲಿ ಬೆಲೆಗಳು ನಿಯಂತ್ರಣದಲ್ಲಿವೆ. ಅರ್ಥಶಾಸ್ತ್ರಜ್ಞರ ಬಳಿ ಕೇಳಿಕೊಳ್ಳಿ, ಆ ಬಗ್ಗೆ ಆರ್​ಬಿಐ ಗವರ್ನರ್ ಮಾತಾಡುತ್ತಾರೆ ಎಂದು ಬೆಲೆ ಏರಿಕೆ ಕುರಿತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಬೆಲೆ ಏರಿಕೆ ಬಗ್ಗೆ ಅರುಣ್​ ಸಿಂಗ್​ ಪ್ರತಿಕ್ರಿಯೆ

ಹವ್ಯಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಮೋದಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ರೈತರ ಅಕೌಂಟ್​ಗೆ ಆರು ಸಾವಿರ ರೂ. ಹಾಕುತ್ತಿದ್ದಾರೆ. ಆಯುಷ್​ಮಾನ್ ಭಾರತ ಯೋಜನೆಯಿಂದ ಜನರಿಗೆ ಅನುಕೂಲ ಆಗಿದೆ. ಜಲ ಮಿಷನ್ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಗಳಿಗೆ ಹಣದ ಅವಶ್ಯಕತೆ ಇದೆ. ಇದಕ್ಕಾಗಿ ಸ್ವಲ್ಪ ತೆರಿಗೆ ಸಂಗ್ರಹ ಬೇಕಾಗುತ್ತದೆ ಎಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.

ಯುಪಿಎ ಸರ್ಕಾರ ಇದ್ದಾಗಲೂ ಬೆಲೆ ಏರಿಕೆ ಆಗಿತ್ತು:

ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ಆಗುತ್ತಿರುವುದು ತಾತ್ಕಾಲಿಕ ಅಷ್ಟೇ. ಮುಂದಿನ ದಿನಗಳಲ್ಲಿ ಬೆಲೆ ಕಡಿಮೆ ಆಗಲಿದೆ. ಯುಪಿಎ ಸರ್ಕಾರ ಇದ್ದಾಗಲೂ ಬೆಲೆ ಏರಿಕೆ ಆಗಿತ್ತು. ಆಗ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ನೂರು ದಿನಗಳಲ್ಲಿ ಬೆಲೆ ನಿಯಂತ್ರಣ ಮಾಡುವುದಾಗಿ ಹೇಳಿದ್ದರು. ಆದರೆ ಅದು ಅವರಿಂದ ಆಗಿರಲಿಲ್ಲ. ಆಗ ಶೇ.15 ರಷ್ಟು ಬೆಲೆ ಏರಿಕೆ ಆಗಿತ್ತು. ಆದರೆ ಮೋದಿ ಅವಧಿಯಲ್ಲಿ ಬೆಲೆ ನಿಯಂತ್ರಣದಲ್ಲಿದೆ. ಮಾಧ್ಯಮದವರು ಹಣದುಬ್ಬರದ ಬಗ್ಗೆ ಚರ್ಚೆ ಮಾಡಬೇಕು. ಅದರ ಬದಲು ಒಂದು ಈರುಳ್ಳಿ, ಒಂದು ಟೊಮ್ಯಾಟೋ ಬಗ್ಗೆ ಚರ್ಚೆ ಮಾಡಬೇಡಿ. ನೀವು ಕಾಂಗ್ರೆಸ್ ರೀತಿ ಒಂದು ವಸ್ತು ಬಗ್ಗೆ ಪ್ರಶ್ನೆ ಮಾಡಿದರೆ ನಾನು ಉತ್ತರಿಸಲು ಆಗಲ್ಲ ಎಂದು ಹೇಳಿದರು.

ಡಬಲ್​ ಇಂಜಿನ್ ಸರ್ಕಾರ:

ಕರ್ನಾಟಕದಲ್ಲಿ ಬೊಮ್ಮಾಯಿ‌ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಮೋದಿ ಸರ್ಕಾರದ ಪೂರ್ಣ ಆಶೀರ್ವಾದ ಬೊಮ್ಮಾಯಿ‌ ಸರ್ಕಾರದ ಮೇಲೆ ಇದೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸ ಆಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿವೆ ಎಂದರು.

ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆ:

ನಾನು ಪಕ್ಷ ಬಲಪಡಿಸುವ ಸಲುವಾಗಿ ನಾಲ್ಕು ದಿನ ಪ್ರವಾಸ ಮಾಡಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸಲು ಸಭೆ ಮಾಡಲಾಗಿದೆ. ಅಲ್ಲಿ ಬೂತ್ ಕಮಿಟಿ ರಚನೆ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಸರ್ಕಾರದ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಬೇಕು. ಇಲ್ಲಿಂದ ಬೊಮ್ಮಾಯಿ‌ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿದೆ. ಬಡವರು, ರೈತರು,ಮಹಿಳೆಯರು ಹಾಗು ಉಚಿತ ಜನಪ್ರಿಯ ಯೋಜನೆಗಳನ್ನ ಪ್ರಚಾರ ಮಾಡಬೇಕು ಎಂದು ಮಂಡಲ, ಜಿಲ್ಲಾ ಕಾರ್ಯಕರ್ತರಿಗೆ ಹೇಳಿದ್ದೇವೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲಿ ಕೆಲಸ ಮಾಡುತ್ತಿರುವ ರೀತಿ ನೋಡಿದರೆ ಖಂಡಿತವಾಗಿಯೂ ಹಳೆ ಮೈಸೂರು ಭಾಗದಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್​ಡಿಕೆ ಗೌರವದಿಂದ ಮಾತನಾಡಬೇಕು:

ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ ಸಂಬಂಧ ಈಗಾಗಲೇ ಪ್ರತಿಕ್ರಿಯೆ ಕೊಟ್ಟಿದ್ದೇನೆ. ಅವರು ಗೌರವದಿಂದ ಮಾತನಾಡಬೇಕು ಎಂದು ಹೆಚ್​ಡಿಕೆ ವಿರುದ್ಧ ಅರುಣ್​ ಸಿಂಗ್​ ಅಸಮಾಧಾನ ಹೊರಹಾಕಿದರು.

ಡಾ.ಸಿ.ಎನ್.ಅಶ್ವತ್ಥ ನಾರಾಯಣ ನಿವಾಸಕ್ಕೆ ಭೇಟಿ:

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು, ಇಂದು ಬೆಳಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನಿವಾಸಕ್ಕೆ ಭೇಟಿ ನೀಡಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿದ್ಧರಾಜು ಸೇರಿದಂತೆ ಇತರರು ಇದ್ದರು.

ಸಚಿವ ಅಶ್ವತ್ಥ ನಾರಾಯಣ್​ ನಿವಾಸಕ್ಕೆ ಭೇಟಿ

ಕೆಲ ದಿನಗಳಿಂದ ರಾಜ್ಯದ ವಿವಿಧ ಕಡೆ ಪ್ರವಾಸ ನಡೆಸುತ್ತಿರುವ ಅರುಣ್ ಸಿಂಗ್, ಪಕ್ಷದ ಹಲವು ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.

ABOUT THE AUTHOR

...view details