ಕರ್ನಾಟಕ

karnataka

ದೊಡ್ಡಬಳ್ಳಾಪುರ: ಡಿಸಿ ಜೊತೆ ಕುಳಿತು ಕಾರ್ಯವೈಖರಿ ವೀಕ್ಷಣೆ ಮಾಡಿದ ವಿದ್ಯಾರ್ಥಿನಿ ವಿದ್ಯಾಶ್ರೀ

By

Published : Sep 23, 2022, 9:21 AM IST

Updated : Sep 23, 2022, 10:04 AM IST

district collector
ಜಿಲ್ಲಾಧಿಕಾರಿ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ಸ್ಫೂರ್ತಿ ಪಡೆದ ವಿದ್ಯಾರ್ಥಿನಿ

ಜಿಲ್ಲಾ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾಶ್ರೀ ಡಿ.ಎಂ. ಒಂದು ದಿನದ ಮಟ್ಟಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರೊಂದಿಗೆ ಕಾಲಕಳೆದು, ಕಾರ್ಯ ವೈಖರಿ ವೀಕ್ಷಿಸಿದರು.

ದೇವನಹಳ್ಳಿ: ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾಶ್ರೀ ಡಿ.ಎಂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರೊಂದಿಗೆ ಒಂದು ದಿನ ಕಾಲಕಳೆದು, ಜಿಲ್ಲಾಡಳಿತದ ಕಾರ್ಯ ವೈಖರಿ ವೀಕ್ಷಿಸುವ ಅಪೂರ್ವ ಅವಕಾಶ ಪಡೆದರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿದ್ಯಾಶ್ರೀ ಡಿ.ಎಂ. ಅವರನ್ನು ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿತ್ತು. ಒಂದು ದಿನ ಜಿಲ್ಲಾಧಿಕಾರಿಯವರೊಂದಿಗೆ ಕಚೇರಿಯಲ್ಲಿ ಇದ್ದು, ಅವರ ದಿನದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ, ಡಿಸಿ ಕಾರ್ಯ ಕಲಾಪಗಳನ್ನು ಹತ್ತಿರದಿಂದ ನೋಡುವ ಅವಕಾಶ ಪಡೆದುಕೊಂಡರು.

ಜಿಲ್ಲಾಧಿಕಾರಿ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ಸ್ಫೂರ್ತಿ ಪಡೆದ ವಿದ್ಯಾರ್ಥಿನಿ

ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಪೋಷಕರೊಂದಿಗೆ ಆಗಮಿಸಿದ ವಿದ್ಯಾಶ್ರೀ ಅವರನ್ನು ಡಿಸಿ ಆರ್.ಲತಾ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಆತ್ಮೀಯವಾಗಿ ಮಾತನಾಡಿದ ಜಿಲ್ಲಾಧಿಕಾರಿಯವರು ಮುಂದೆ ಏನಾಗಬೇಕೆಂದು ಬಯಸಿದ್ದೀರಾ ಅಂತಾ ವಿದ್ಯಾಶ್ರೀ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾಶ್ರೀ, ನಾನು ನಿಮ್ಮ ಹಾಗೆ ಜಿಲ್ಲಾಧಿಕಾರಿ ಆಗಬೇಕು ಎಂದು ಕೊಂಡಿದ್ದೇನೆ ಎಂದರು. ಬಳಿಕ ಜಿಲ್ಲಾಧಿಕಾರಿಯವರೊಂದಿಗೆ ಕಚೇರಿ ಸಭಾಂಗಣದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಇಲಾಖೆಗಳ ಆಂತರಿಕ ಸಭೆಗಳಲ್ಲಿ ವಿದ್ಯಾ ಜಿಲ್ಲಾಧಿಕಾರಿಗಳ ಪಕ್ಕದಲ್ಲೇ ಕುಳಿತು ವೀಕ್ಷಿಸಿದರು. ಸಭೆ ಸಂದರ್ಭದಲ್ಲಿ ಟಿಪ್ಪಣಿ ಸಹ ಮಾಡಿಕೊಳ್ಳುತ್ತಿದ್ದರು.

ಇದನ್ನೂ ಓದಿ:ಚಾಮರಾಜನಗರ ಜಿಲ್ಲಾಧಿಕಾರಿ ಪಕ್ಕ ಕುಳಿತು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿ

ಬಳಿಕ ಅನಿಸಿಕೆ ಹಂಚಿಕೊಂಡ ವಿದ್ಯಾಶ್ರೀ, ಜಿಲ್ಲಾಧಿಕಾರಿಯವರೊಂದಿಗೆ ಒಂದು ದಿನ ಇದ್ದು ಕಾರ್ಯ ಆಡಳಿತ ವೀಕ್ಷಿಸಲು ನನಗೆ ಅನುವು ಮಾಡಿಕೊಟ್ಟಿದ್ದು ದೊಡ್ಡ ಅವಕಾಶ. ಇದು ನನಗೆ ಮುಂದಿನ ಉನ್ನತ ವಿದ್ಯಾಭ್ಯಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಲಿದೆ. ಜಿಲ್ಲಾಧಿಕಾರಿಯವರ ಸಭೆ ಕಾರ್ಯಗಳಲ್ಲಿ ಪಾಲ್ಗೊಂಡು ಅವರು ತಾಳ್ಮೆ, ಸಹನೆಯಿಂದ ಮಾಹಿತಿ ಪಡೆಯುವ ಹಾಗೂ ಸಲಹೆ ಸೂಚನೆಗಳನ್ನು ನೀಡುವ ವೈಖರಿಯನ್ನು ಹತ್ತಿರದಿಂದ ನೋಡುವ ಸದವಕಾಶ ದೊರೆಯಿತು. ಇದು ನನಗೆ ಸ್ಫೂರ್ತಿದಾಯಕವಾಗಿದೆ ಎಂದು ವಿದ್ಯಾರ್ಥಿನಿ ಹೇಳಿದರು.

Last Updated :Sep 23, 2022, 10:04 AM IST

ABOUT THE AUTHOR

...view details