ಕರ್ನಾಟಕ

karnataka

ಸಿನಿಮಾ ಸಕ್ಸಸ್: ದೈವಕ್ಕೆ ಹರಕೆ ತೀರಿಸಿದ ಕಾಂತಾರ ಚಿತ್ರತಂಡ

By

Published : Jan 20, 2023, 4:51 PM IST

Panjurli god worship

ಸಿನಿಮಾ ಸಕ್ಸಸ್ ಹಿನ್ನೆಲೆ ಕಾಂತಾರ ಚಿತ್ರತಂಡ ಇತ್ತೀಚೆಗೆ ಪಂಜುರ್ಲಿ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದೆ.

ಹೊಂಬಾಳೆ ಫಿಲ್ಮ್ಸ್​ನ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಣದ ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿ, ಆ್ಯಕ್ಷನ್​ ಕಟ್​​ ಹೇಳಿರುವ ಕಾಂತಾರ ಸಿನಿಮಾ 2022ರ ಸೂಪರ್​ ಹಿಟ್ ಸಿನಿಮಾ ಆಗಿ ಹೊರ ಹೊಮ್ಮಿದೆ. ಕರಾವಳಿ ಸಂಸ್ಕ್ರತಿ, ಕಂಬಳ, ದೈವ ಆರಾಧನೆ ಜೊತೆಗೆ ಮಾನವ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಕಥಾಹಂದರವನ್ನೊಳಗೊಂಡ ಕಾಂತಾರ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ‌ಸಿನಿಮಾ ಸೂಪರ್​ ಹಿಟ್ ಆದ ಹಿನ್ನೆಲೆ ಚಿತ್ರ ತಂಡದಿಂದ ದೈವಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ, ಹರಕೆ ತೀರಿಸಲಾಗಿದೆ.

ಪಂಜುರ್ಲಿ ಕೋಲ ಕೊಟ್ಟು ಹರಕೆ ಸಲ್ಲಿಕೆ: ಹೌದು, ಇತ್ತೀಚೆಗೆ ಕರಾವಳಿ ಭಾಗದಲ್ಲಿ ಕಾಂತಾರ ಚಿತ್ರ ತಂಡದ ವತಿಯಿಂದ ಪಂಜುರ್ಲಿ ಕೋಲ ಕೊಟ್ಟು ಹರಕೆ ತೀರಿಸಲಾಗಿದೆ. ಪಂಜುರ್ಲಿ ಕೋಲದ ಕ್ಷಣಗಳನ್ನು ಹೊಂಬಾಳೆ ಫಿಲ್ಮ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಈ ವಿಡಿಯೋಗೆ ವರಾಹ ರೂಪಂ ಹಾಡನ್ನು ಬಳಸಲಾಗಿದ್ದು, ವಿಡಿಯೋ ಬಹಳ ಅದ್ಭುತವಾಗಿ, ದೈವಿಕವಾಗಿ ಮೂಡಿಬಂದಿದೆ. ಈ ದೃಶ್ಯಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಪಂಜುರ್ಲಿ ಕೋಲದಲ್ಲಿ ರಿಷಬ್ ಶೆಟ್ಟಿ ಕುಟುಂಬ, ನಿರ್ಮಾಪಕ ವಿಜಯ್ ಕಿರಂಗದೂರ್, ನಟಿ ಸಪ್ತಮಿ ಗೌಡ ಸೇರಿದಂತೆ ಚಿತ್ರ ತಂಡದ ಕೆಲವರು ಭಾಗಿಯಾಗಿದ್ದರು.

ಹೊಂಬಾಳೆ ಫಿಲ್ಮ್ಸ್ ಟ್ವೀಟ್:'' ಪ್ರಕೃತಿಗೆ ಶರಣಾಗಿ. ನಿಮ್ಮ ಜೀವನದಲ್ಲಿ ಸ್ವಾತಂತ್ರ್ಯ ಮತ್ತು ಯಶಸ್ಸನ್ನು ನಿಮಗೆ ನೀಡಿದ ಆ ಭಗವಂತನನ್ನು ಪ್ರಾರ್ಥಿಸಿ. ಕಾಂತಾರ ಚಿತ್ರ ತಂಡವು ದೈವವನ್ನು ವೀಕ್ಷಿಸಿತು ಜೊತೆಗೆ ದೈವದ ಆಶೀರ್ವಾದವನ್ನು ಪಡೆಯಿತು. ಹರಕೆ ತೀರಿಸಿದ ಕ್ಷಣಗಳು'' ಎಂದು ಹೊಂಬಾಳೆ ಫಿಲ್ಮ್ಸ್​ ಮತ್ತು ನಟ ರಿಷಬ್ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಕಾಂತಾರ ಚಿತ್ರತಂಡ: ಹೊಂಬಾಳೆ ಫಿಲ್ಮ್ಸ್​​ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರ್ ನಿರ್ಮಾಣದ ಈ ಚಿತ್ರ ಬಹುತೇಕ ಕರಾವಳಿ ಭಾಗದಲ್ಲಿ ಚಿತ್ರೀಕರಣಗೊಂಡಿದೆ. ಸಿನಿಮಾದಲ್ಲಿ ದಕ್ಷಿಣ ಕನ್ನಡದ ಪ್ರಾಕೃತಿಕ ಸೊಬಗು ಚೆನ್ನಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಮತ್ತು ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ:ಯುವನಟ ರಥ ಕಿರಣ್​ ಅಭಿನಯದ ಅಭಿರಾಮಚಂದ್ರ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಾಥ್

ಹೊಂಬಾಳೆ ಫಿಲ್ಮ್ಸ್​​ ಮುಂದಿನ ನಡೆ:ಕೆಜಿಎಫ್ 2, ಕಾಂತಾರ ಅಂತಹ ಸೂಪರ್​ ಹಿಟ್ ಸಿನಿಮಾಗಳ ಮೂಲಕ ಕಳೆದ ಸಾಲಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಸಿನಿಮಾ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್​​ ಈಗ ಇತರ ಭಾಷೆಯ ಚಿತ್ರಗಳತ್ತ ಕೂಡ ಗಮನ ಹರಿಸಿದೆ. ಮುಂಬರುವ ಐದು ವರ್ಷಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ನಾವು ನಿರ್ಧರಿಸಿದ್ದೇವೆ. ಮನೋರಂಜನಾ ಕ್ಷೇತ್ರ ಬರುವ ದಿನಗಳಲ್ಲಿ ಮತ್ತಷ್ಟು ಬೆಳೆಯಲಿದೆ. ಎಂದು ಇತ್ತೀಚೆಗೆ ನಿರ್ಮಾಪಕ ವಿಜಯ್ ಕಿರಂಗದೂರ್ ತಿಳಿಸಿದ್ದರು. ಈ ಹಿನ್ನೆಲೆ ಕನ್ನಡ ಚಿತ್ರಗಳ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

ಇದನ್ನೂ ಓದಿ:ಅಶ್ವಿನಿ ಪುನೀತ್ ರಾಜ್‍ಕುಮಾರ್, ವಿಜಯ್ ಕಿರಗಂದೂರು, ತಾರಾಗೆ 'ರಾಘವೇಂದ್ರ ಚಿತ್ರವಾಣಿ' ಪ್ರಶಸ್ತಿ

ABOUT THE AUTHOR

...view details