ಅಶ್ವಿನಿ ಪುನೀತ್ ರಾಜ್‍ಕುಮಾರ್, ವಿಜಯ್ ಕಿರಗಂದೂರು, ತಾರಾಗೆ 'ರಾಘವೇಂದ್ರ ಚಿತ್ರವಾಣಿ' ಪ್ರಶಸ್ತಿ

author img

By

Published : Jan 20, 2023, 12:28 PM IST

Shri Raghavendra Chitravani Award

ಸ್ಯಾಂಡಲ್​ವುಡ್​ನ ಜನಪ್ರಿಯ ಸಿನಿಮಾ ನಿರ್ಮಾಪಕರಾದ ವಿಜಯ್ ಕಿರಗಂದೂರು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಹಾಗು ಹಿರಿಯ ನಟಿ ತಾರಾ ಅನುರಾಧ ಅವರಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ನೀಡಲಾಗುತ್ತಿದೆ‌.

ಕಳೆದ 47 ವರ್ಷಗಳಿಂದ ಕನ್ನಡ ಸಿನಿಮಾರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯೇ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ಈ ಸುದೀರ್ಘಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪದ್ಧತಿ ಆರಂಭಿಸಿದ್ದರು.

ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ: ಕೇವಲ ಎರಡು ಪ್ರಶಸ್ತಿಗಳಿಂದ ಇಂಥದ್ದೊಂದು ಪ್ರಶಸ್ತಿ ಪ್ರದಾನ ಸಮಾರಂಭ ಶುರುವಾದ ಇತಿಹಾಸವಿದೆ. ಹೀಗೆ ಆರಂಭವಾದ ಸಮಾರಂಭವೀಗ 11 ಹಾಗು ಮೂರು ವಿಶೇಷ ಪ್ರಶಸ್ತಿಗಳಿಗೆ ವಿಸ್ತಾರವಾಗಿದೆ. ನಿರ್ಮಾಪಕರು ಮತ್ತು ಪತ್ರಕರ್ತರಿಗೆ ಮಾತ್ರವಲ್ಲದೇ ಕನ್ನಡ ಚಿತ್ರರಂಗಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಶಸ್ತಿಗೆ ಆಯ್ಕೆಯಾದ ಗಣ್ಯರು: ಪಿ.ಧನರಾಜ್ - ಹಿರಿಯ ಚಲನಚಿತ್ರ ನಿರ್ಮಾಪಕರು, ಈಶ್ವರ ದೈತೋಟ - ಹಿರಿಯ ಪತ್ರಕರ್ತರು,‌ ನಟ ಕುಮಾರ್ ಗೋವಿಂದ್, ಹಿರಿಯ ಪತ್ರಕರ್ತ ಸದಾಶಿವ ಶೆಣೈ, ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್, ಹಿರಿಯ ನಟಿ ತುಳಸಿ, ಸಂಗೀತ ನಿರ್ದೇಶಕ ನೋಬಿನ್ ಪಾಲ್, ನಿರ್ದೇಶಕ ಮಧುಚಂದ್ರ, ಶ್ರೀನಿವಾಸ ಕಲ್ಯಾಣ ನಿರ್ದೇಶಕ ಎಂ.ಜಿ. ಶ್ರೀನಿವಾಸ್ , 777 ಚಾರ್ಲಿ ಸಿನಿಮಾ ನಿರ್ದೇಶಕ ಕಿರಣ್ ರಾಜ್, ಗೀತ ರಚನೆಕಾರ ಪ್ರಮೋದ್, ಹಿರಿಯ ಪೋಷಕ ನಟ ಶ್ರೀನಿವಾಸಮೂರ್ತಿ.

ಮೂರು ವಿಶೇಷ ಪ್ರಶಸ್ತಿ: ಈ ಬಾರಿ ಇನ್ನೂ ಮೂರು ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. 2022ರಲ್ಲಿ ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರಗಳೆಂದರೆ 'ಕೆಜಿಎಫ್ 2' ಮತ್ತು 'ಕಾಂತಾರ'. ಈ ಎರಡೂ ಚಿತ್ರಗಳನ್ನು ನಿರ್ಮಿಸಿ, ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಿದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಕಳೆದ ವರ್ಷ ಬಿಡುಗಡೆಯಾದ 'ಗಂಧದ ಗುಡಿ' ಮೂಲಕ ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತನ್ನು ತಮ್ಮ ಕಣ್ಣುಗಳ ಮೂಲಕ ಕನ್ನಡಿಗರಿಗೆ ತೋರಿಸಿದವರು ದಿವಂಗತ ನಟ ಪುನೀತ್ ರಾಜ್​​ಕುಮಾರ್. ಇಂಥದ್ದೊಂದು ಅಪೂರ್ವ ಅನುಭವ ಕಟ್ಟಿಕೊಟ್ಟ ಪುನೀತ್ ಮತ್ತು ಈ ಸಾಹಸಕ್ಕೆ ಕೈ ಹಾಕಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ತಾರಾ ಅನುರಾಧ ಅವರ ಅಭಿನಯ, ಪಾತ್ರಗಳು ಮತ್ತು ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಗುರುತಿಸಿ ಅವರಿಗೂ ಈ ಬಾರಿ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.

ಇದನ್ನೂ ಓದಿ: ಅಳಿಯ ರಾಮಚರಣ್​ ’ನಾಟು ನಾಟು‘ ಹಾಡಿಗೆ ಅತ್ತೆ ಶೋಭನಾ ಕಾಮಿನೇನಿ ಸ್ಟೆಪ್ಸ್​

ಕಳೆದ ವರ್ಷ ಕೋವಿಡ್​ ಕಾರಣದಿಂದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿರಲಿಲ್ಲ. ಹಾಗಾಗಿ, ಕಳೆದ ವರ್ಷದ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತಿದೆ. ಸಂಸ್ಥೆಯ ಸ್ಥಾಪಕ ಡಿ.ವಿ, ಸುಧೀಂದ್ರ ಅವರ ಜನ್ಮದಿನ ಅಂದರೆ ಜನವರಿ 25ರಂದು ಈ ಸಮಾರಂಭವನ್ನು ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಂಜೆ 5ಕ್ಕೆ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ.

ಈ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್​, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್​ ಬಣಕಾರ್​, ನಟಿಯರಾದ ರಾಗಿಣಿ, 'ಎ' ಖ್ಯಾತಿಯ ಚಾಂದಿನಿ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.