ಕರ್ನಾಟಕ

karnataka

ಚಾಕು ಇರಿತ ಪ್ರಕರಣ: ನ್ಯಾಯಾಲಯದಲ್ಲಿ ಘಟನೆ ವಿವರಿಸಿದ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ

By

Published : Feb 15, 2020, 7:55 PM IST

ಲೋಕಾಯುಕ್ತ ಕಚೇರಿಗೆ ನುಗ್ಗಿ ಚಾಕುವಿನಿಂದ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರು ಇಂದು ನಗರದ ಸೆಷನ್ಸ್ ನ್ಯಾಯಾಲಯಕ್ಕೆ ತೆರಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 56ನೇ ಸೆಷನ್ಸ್ ಕೋರ್ಟ್​ ನ್ಯಾಯಾಧೀಶ ಕೆ. ನಾರಾಯಣ ಪ್ರಸಾದ್ ನೇತೃತ್ವದ ವಿಚಾರಣೆಗೆ ಹಾಜರಾಗಿ ಘಟನೆ ವಿವರಿಸಿದರು.

knife-stabbing-case-lokayukta-justice-vishwanath-shetty
ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ

ಬೆಂಗಳೂರು: ಲೋಕಾಯುಕ್ತ ಕಚೇರಿಗೆ ನುಗ್ಗಿ ಚಾಕುವಿನಿಂದ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರು ಇಂದು ನಗರದ ಸೆಷನ್ಸ್ ನ್ಯಾಯಾಲಯಕ್ಕೆ ತೆರಳಿ ಘಟನೆ ಕುರಿತು ವಿವರಣೆ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 56ನೇ ಸೆಷನ್ಸ್ ಕೋರ್ಟ್​ ನ್ಯಾಯಾಧೀಶ ಕೆ. ನಾರಾಯಣ ಪ್ರಸಾದ್ ಅವರು ನಡೆಸಿದ ಮುಖ್ಯ ವಿಚಾರಣೆಯಲ್ಲಿ ಘಟನೆ ಕುರಿತು ಹೇಳಿಕೆ ನೀಡಲು ಬೆಳಗ್ಗೆ 11:30ರ ವೇಳೆಗೆ ನ್ಯಾ. ವಿಶ್ವನಾಥ ಶೆಟ್ಟಿ ಆಗಮಿಸಿದರು. ಬಳಿಕ 12 ಗಂಟೆಯಿಂದ 1:30ರವರೆಗೆ ಕಟಕಟೆಯಲ್ಲಿ ನಿಂತು ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿದರು.

ಘಟನೆ ವಿವರ:

ಅಂದು ಮಧ್ಯಾಹ್ನ ತೇಜರಾಜ ಶರ್ಮ ನನ್ನನ್ನು ಭೇಟಿಯಾಗಲು ಕಚೇರಿಗೆ ಆಗಮಿಸಿ, ನಮ್ಮ ನೌಕರನ ಕಡೆಯಿಂದ ಚೀಟಿ ಕಳುಹಿಸಿದ್ದ. ನಾನು ಶರ್ಮಾಗೆ ಒಳ ಬರಲು ಹೇಳಿದೆ. ಅವನು ಬಂದು ಎಂದಿನಂತೆ ದೂರು ಹೇಳಿಕೊಂಡ. ಪೀಠೋಪಕರಣಗಳ ಖರೀದಿಗೆ ಸಂಬಂಧಿಸಿದಂತೆ ತುಮಕೂರು-ಕೋಲಾರ ಜಿಲ್ಲೆಗಳಲ್ಲಿನ ಟೆಂಡರ್ ಹಂಚಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಈ ಕುರಿತು 2017ರಿಂದ ಈತನಕ ಆರು ದೂರುಗಳನ್ನು ನೀಡಿದ್ದೇನೆ. ಅವುಗಳಲ್ಲಿ 3 ದೂರುಗಳನ್ನು ಮುಚ್ಚಿ ಹಾಕಲಾಗಿದೆ. 2 ಬಾಕಿ ಇದ್ದು, 1ರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ‌.

ದೂರು ಆಲಿಸಿದ ನಾನು, ಈ ಕುರಿತು ನಮ್ಮ ಅಸಿಸ್ಟೆಂಟ್ ರಿಜಿಸ್ಟ್ರಾರ್ ಲಲಿತಾ ಅವರನ್ನು ಭೇಟಿಯಾಗಿ ಎಲ್ಲವನ್ನೂ ವಿವರವಾಗಿ ತಿಳಿಸು ಎಂದು ಸೂಚಿಸಿದೆ. ಇಷ್ಟು ಹೇಳುತ್ತಿದ್ದಂತೆಯೇ ಆತ ನನ್ನ ಎದುರು ಎರಗಿ ಚಾಕುವಿನಿಂದ ಹೊಟ್ಟೆ ಮತ್ತು ತೊಡೆಗೆ ಚುಚ್ಚಿದ. ಕೂಡಲೇ ನಾನು ಬಲವಾಗಿ ಪ್ರತಿಭಟಿಸಿ, ಜೋರಾಗಿ ಕೂಗಿಕೊಂಡೆ. ಆದರೆ, ನನ್ನ ಛೇಂಬರ್ ಸೌಂಡ್ ಪ್ರೂಫ್ ವ್ಯವಸ್ಥೆ ಹೊಂದಿರುವ ಕಾರಣ ದ್ವನಿ ಹೊರಗಿನವರಿಗೆ ಕೇಳಿಸಿಲ್ಲ ಎಂದೆನ್ನಿಸುತ್ತದೆ.

ಎರಡು-ಮೂರು ನಿಮಿಷಗಳ ಬಳಿಕ ಒಳಗೆ ಬಂದ ನನ್ನ ಗನ್ ಮ್ಯಾನ್ ಕ್ಷಣಾರ್ಧದಲ್ಲಿ ಎಚ್ಚೆತ್ತು, ತನ್ನ ಬಳಿ ಇದ್ದ ರಿವಾಲ್ವರ್ ಅನ್ನು ತೇಜರಾಜ್ ಕಡೆಗೆ ತೋರಿಸಿದ. ಕೂಡಲೇ ಆತ ಚಾಕು ಬಿಸಾಡಿದ. ತಕ್ಷಣವೇ ಜಮಾಯಿಸಿದ ನಮ್ಮ ಸಿಬ್ಬಂದಿ ಅವನನ್ನು ವಶಕ್ಕೆ ತೆಗೆದುಕೊಂಡರು. ನನ್ನನ್ನು ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಶಾಲಾ ದಿನಗಳಲ್ಲಿ ನಾನೊಬ್ಬ ಎನ್​ಸಿಸಿ ಕೆಡೆಟ್ ಆಗಿದ್ದ ಕಾರಣ ನನ್ನ ಮೇಲಿನ ಹಲ್ಲೆಯನ್ನು ಇಳಿವಯಸಿನಲ್ಲೂ ಸಮರ್ಥವಾಗಿ ತಡೆಯಲು ಸಾಧ್ಯವಾಯಿತು ಎಂದು ವಿವರಿಸಿದರು.

ವಿಚಾರಣೆ ಮುಂದೂಡಿದ ಕೋರ್ಟ್:

ನ್ಯಾ. ವಿಶ್ವನಾಥ ಶೆಟ್ಟಿ ಅವರ ಮುಖ್ಯ ವಿಚಾರಣೆ ಮುಗಿದ ಕೂಡಲೇ ಪಾಟಿ ಸವಾಲನ್ನು ಇಂದೇ ನಡೆಸಿ ಎಂದು ನ್ಯಾಯಾಧೀಶರು ಆರೋಪಿ ಪರ ವಕೀಲ ನಟರಾಜ ಶರ್ಮ ಅವರಿಗೆ ಸೂಚಿಸಿದರು. ಆದರೆ, ನಟರಾಜ ಶರ್ಮ ಅವರು, ಪ್ರಾಸಿಕ್ಯೂಷನ್ ನಮಗೆ ಬೇಕಾದ ದಾಖಲೆಗಳನ್ನು ಇನ್ನೂ ಒದಗಿಸಿಲ್ಲ. ಆದ್ದರಿಂದ ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಕೋರಿಕೆ ಮಾನ್ಯ ಮಾಡಿದ ನ್ಯಾಯಾಧೀಶರು ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿದರು.

ಇತಿಹಾಸದಲ್ಲಿ ಇದೇ ಮೊದಲು:

ಕರ್ನಾಟಕ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಎದಿರು ಕಟಕಟೆಯಲ್ಲಿ ನಿಂತು ವಿಚಾರಣೆಗೆ ಒಳಪಟ್ಟಂತಾಗಿದೆ.

ABOUT THE AUTHOR

...view details