ಬೆಂಗಳೂರು: ಲೋಕಾಯುಕ್ತ ಕಚೇರಿಗೆ ನುಗ್ಗಿ ಚಾಕುವಿನಿಂದ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರು ಇಂದು ನಗರದ ಸೆಷನ್ಸ್ ನ್ಯಾಯಾಲಯಕ್ಕೆ ತೆರಳಿ ಘಟನೆ ಕುರಿತು ವಿವರಣೆ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 56ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಕೆ. ನಾರಾಯಣ ಪ್ರಸಾದ್ ಅವರು ನಡೆಸಿದ ಮುಖ್ಯ ವಿಚಾರಣೆಯಲ್ಲಿ ಘಟನೆ ಕುರಿತು ಹೇಳಿಕೆ ನೀಡಲು ಬೆಳಗ್ಗೆ 11:30ರ ವೇಳೆಗೆ ನ್ಯಾ. ವಿಶ್ವನಾಥ ಶೆಟ್ಟಿ ಆಗಮಿಸಿದರು. ಬಳಿಕ 12 ಗಂಟೆಯಿಂದ 1:30ರವರೆಗೆ ಕಟಕಟೆಯಲ್ಲಿ ನಿಂತು ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿದರು.
ಘಟನೆ ವಿವರ:
ಅಂದು ಮಧ್ಯಾಹ್ನ ತೇಜರಾಜ ಶರ್ಮ ನನ್ನನ್ನು ಭೇಟಿಯಾಗಲು ಕಚೇರಿಗೆ ಆಗಮಿಸಿ, ನಮ್ಮ ನೌಕರನ ಕಡೆಯಿಂದ ಚೀಟಿ ಕಳುಹಿಸಿದ್ದ. ನಾನು ಶರ್ಮಾಗೆ ಒಳ ಬರಲು ಹೇಳಿದೆ. ಅವನು ಬಂದು ಎಂದಿನಂತೆ ದೂರು ಹೇಳಿಕೊಂಡ. ಪೀಠೋಪಕರಣಗಳ ಖರೀದಿಗೆ ಸಂಬಂಧಿಸಿದಂತೆ ತುಮಕೂರು-ಕೋಲಾರ ಜಿಲ್ಲೆಗಳಲ್ಲಿನ ಟೆಂಡರ್ ಹಂಚಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಈ ಕುರಿತು 2017ರಿಂದ ಈತನಕ ಆರು ದೂರುಗಳನ್ನು ನೀಡಿದ್ದೇನೆ. ಅವುಗಳಲ್ಲಿ 3 ದೂರುಗಳನ್ನು ಮುಚ್ಚಿ ಹಾಕಲಾಗಿದೆ. 2 ಬಾಕಿ ಇದ್ದು, 1ರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ.
ದೂರು ಆಲಿಸಿದ ನಾನು, ಈ ಕುರಿತು ನಮ್ಮ ಅಸಿಸ್ಟೆಂಟ್ ರಿಜಿಸ್ಟ್ರಾರ್ ಲಲಿತಾ ಅವರನ್ನು ಭೇಟಿಯಾಗಿ ಎಲ್ಲವನ್ನೂ ವಿವರವಾಗಿ ತಿಳಿಸು ಎಂದು ಸೂಚಿಸಿದೆ. ಇಷ್ಟು ಹೇಳುತ್ತಿದ್ದಂತೆಯೇ ಆತ ನನ್ನ ಎದುರು ಎರಗಿ ಚಾಕುವಿನಿಂದ ಹೊಟ್ಟೆ ಮತ್ತು ತೊಡೆಗೆ ಚುಚ್ಚಿದ. ಕೂಡಲೇ ನಾನು ಬಲವಾಗಿ ಪ್ರತಿಭಟಿಸಿ, ಜೋರಾಗಿ ಕೂಗಿಕೊಂಡೆ. ಆದರೆ, ನನ್ನ ಛೇಂಬರ್ ಸೌಂಡ್ ಪ್ರೂಫ್ ವ್ಯವಸ್ಥೆ ಹೊಂದಿರುವ ಕಾರಣ ದ್ವನಿ ಹೊರಗಿನವರಿಗೆ ಕೇಳಿಸಿಲ್ಲ ಎಂದೆನ್ನಿಸುತ್ತದೆ.