ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತ ಹೇಳಿಕೆ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿವಾಸಕ್ಕೆ ದೆಹಲಿ ಪೊಲೀಸರು ರವಿವಾರ ಭೇಟಿ ನೀಡಿದ್ದಾರೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿದೆ. ಪೊಲೀಸರ ಈ ಕ್ರಮವು ಕೇಂದ್ರ ಸರ್ಕಾರದ ಬೆದರಿಕೆಯ ರಾಜಕಾರಣ ಎಂದು ಕಾಂಗ್ರೆಸ್ ಟೀಕಿಸಿದೆ. ಇದೇ ವೇಳೆ ಪೊಲೀಸರು ತಮ್ಮ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸಲು ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ಮಾಡಿದ್ದಾರೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.
ಶ್ರೀನಗರದಲ್ಲಿ ಹಮ್ಮಿಕೊಂಡಿದ್ದ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಕಳೆದ ಗುರುವಾರ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಇದರ ಭಾಗವಾಗಿ ಇಂದು ರಾಹುಲ್ ನಿವಾಸಕ್ಕೆ ಪೊಲೀಸರು ತೆರಳಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ''ರಾಹುಲ್ ಗಾಂಧಿ ನೋಟಿಸ್ಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಸುಮಾರು 10 ದಿನಗಳ ಕಾಲಾವಕಾಶ ಕೋರಿದ್ದರು. ಆದರೆ ಇಂದು ಮತ್ತೆ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಅಷ್ಟೊಂದು ಆತುರವೇನು'' ಎಂದು ಪ್ರಶ್ನಿಸಿದ್ದಾರೆ.
''ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ವಯನಾಡ್ ಸಂಸದರನ್ನು ಪ್ರಶ್ನಿಸುವಂತಹ ಅಧಿಕಾರ ದೆಹಲಿ ಪೊಲೀಸರಿಗೆ ಇಲ್ಲ. ಹಾಗಾದರೆ, ಕಳೆದ 45 ದಿನಗಳಿಂದ ಪೊಲೀಸರು ಏನು ಮಾಡುತ್ತಿದ್ದರು'' ಎಂದೂ ಅವರು ಪ್ರಶ್ನೆ ಮಾಡಿದರು. ಅಲ್ಲದೇ, ''ಯಾತ್ರೆಯು ಸುಮಾರು 4000 ಕಿ.ಮೀ ಕ್ರಮಿಸಿ 12 ರಾಜ್ಯಗಳ ಮೂಲಕ ಸಾಗಿತ್ತು. ಯಾತ್ರೆಯಲ್ಲಿ ಲಕ್ಷಗಟ್ಟಲೆ ಜನರನ್ನು ಭೇಟಿಯಾಗುತ್ತಾರೆ. ರಾಹುಲ್ ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡ ಮಹಿಳೆಯರ ವಿವರಗಳನ್ನು ಪೊಲೀಸರು ಕೇಳುತ್ತಿದ್ದಾರೆ. ಸಾಮಾನ್ಯವಾಗಿ, ಒಬ್ಬ ನಾಯಕ ತಾಳ್ಮೆಯಿಂದ ಇಂತಹ ಕುಂದುಕೊರತೆಗಳನ್ನು ಆಲಿಸುತ್ತಾರೆ. ಈ ಬಗ್ಗೆ ವಿವರವಾದ ಪ್ರತಿಕ್ರಿಯೆಯನ್ನು ಸೂಕ್ತ ಸಮಯಕ್ಕೆ ಸಲ್ಲಿಸುತ್ತೇವೆ'' ಎಂದು ಸಿಂಘ್ವಿ ಸ್ಪಷ್ಟನೆ ನೀಡಿದರು.
ಬಿಜೆಪಿಯವರೆಗೆ ನೋಟಿಸ್ ಕಳುಹಿಸಬಹುದೇ - ಗೆಹ್ಲೋಟ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿ, ''ದೆಹಲಿ ಪೊಲೀಸರ ಕ್ರಮವು ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ತೋರಿಸುತ್ತೆ. ಲಂಡನ್ ಪ್ರವಾಸದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ರಾಹುಲ್ ಗಾಂಧಿ ಇದನ್ನೇ ಹೇಳಿದ್ದರು'' ಎಂದರು.