ಕರ್ನಾಟಕ

karnataka

ಕರ್ನಾಟಕದಲ್ಲಿ ಕಾಂಗ್ರೆಸ್​ ದಿಗ್ವಿಜಯ: ಅದ್ವಿತೀಯ ಸಾಧನೆಯ ಹಿಂದಿನ ರೂವಾರಿ ಇವರೇ ಅಂತೆ!

By

Published : May 14, 2023, 2:12 PM IST

ಕರ್ನಾಟಕದ ಕಾಂಗ್ರೆಸ್​ ಗೆಲುವಿನಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಶ್ರಮದಷ್ಟೇ ಚುನಾವಣಾ ತಂತ್ರಗಾರ ಸುನಿಲ್ ಕಾನುಗೋಲು ಹಾಕಿದ್ದಾರೆ ಎಂದೇ ವಿಶ್ಲೇಷಿಸಲಾಗಿದೆ.

which-new-strategies-helped-congress-win-in-karnataka
ಕರ್ನಾಟಕದಲ್ಲಿ ಕಾಂಗ್ರೆಸ್​ ವಿಜಯದ ಹಿಂದಿರುವ ತಂತ್ರಗಾರ ಯಾರು?

ಹೈದರಾಬಾದ್​ (ತೆಲಂಗಾಣ): ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಚುನಾವಣಾ ಸಂದರ್ಭದಲ್ಲಿ ಕೈ ಪಾಳಯ ರೂಪಿಸಿದ ಹೊಸ - ಹೊಸ ಕಾರ್ಯತಂತ್ರಗಳು ಮತ್ತು ನಿರೂಪಣೆಗಳು ಸಹ ಪ್ರಮುಖ ಕಾರಣವಾಗಿವೆ. ಆಡಳಿತಾರೂಢ ಬಿಜೆಪಿ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್​ ಸಮರ್ಥವಾಗಿ ಜನರ ಮುಂದೆ ಬಿಂಬಿಸುವಲ್ಲಿಯೂ ಯಶ ಕಂಡಿದೆ. ಇದರಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಚುನಾವಣಾ ತಂತ್ರಗಾರ ಸುನಿಲ್ ಕಾನುಗೋಲು ಪಾತ್ರವೂ ಬಹುಮುಖ್ಯವಾಗಿದೆ.

ಸುನಿಲ್​ ಕಾನುಗೋಲು ಕರ್ನಾಟಕದವರೇ ಆಗಿದ್ದರೂ ಬೆಳೆದಿದ್ದು ನೆರೆಯ ತಮಿಳುನಾಡಿನ ಚೆನ್ನೈನಲ್ಲಿ. ಈ ಹಿಂದೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರೊಂದಿಗೆ ಕೆಲಸ ಮಾಡಿದ್ದರು. 2014ರಲ್ಲಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿಯ ಬಿಲಿಯನ್ ಮೈಂಡ್ಸ್ ಅಸೋಶಿಯೇಷನ್​ (Association of Billion Minds - ABM) ಮುಖ್ಯಸ್ಥರಾಗಿಯೂ ಇವರು ಸೇವೆ ಸಲ್ಲಿಸಿದರು.

ಸುನಿಲ್ ಕಾನುಗೋಲು

ಬಿಜೆಪಿಯ ಪರವಾಗಿ ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್​ ಚುನಾವಣೆಯಲ್ಲೂ ಚುನಾವಣಾ ಪ್ರಚಾರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ವಿಜಯಶಾಲಿಯಾಗಿತ್ತು. 2018ರಲ್ಲಿ ಕರ್ನಾಟಕದಲ್ಲೂ ಬಿಜೆಪಿ ಪರ ಇದೇ ಸುನಿಲ್ ಕಾನುಗೋಲು ಕೆಲಸವನ್ನೂ ಮಾಡಿದ್ದರು. ಆಗ ಅತಿದೊಡ್ಡ ಪಕ್ಷವಾಗಿ ಕಮಲ ಪಕ್ಷ ಹೊರಹೊಮ್ಮಿತ್ತು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್​ ಪರವಾಗಿ ಚುನಾವಣಾ ತಂತ್ರಗಳನ್ನು ಸುನಿಲ್​ ಕಾನುಗೋಲು ರೂಪಿಸಿದ್ದರು. ಕಳೆದ ವರ್ಷದ ಮಾರ್ಚ್‌ನಲ್ಲಿ ಅವರನ್ನು ಕಾಂಗ್ರೆಸ್ ನೇಮಿಸಿಕೊಂಡಿತ್ತು. ಇದಾದ ಎರಡು ತಿಂಗಳ ನಂತರ ಸೋನಿಯಾ ಗಾಂಧಿಯವರು ಕಾನುಗೋಲು ಅವರನ್ನು ಪಕ್ಷದ 2024ರ ಲೋಕಸಭಾ ಚುನಾವಣಾ ಕಾರ್ಯಪಡೆಯ ಸದಸ್ಯರನ್ನಾಗಿ ನೇಮಿಸಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಡೆದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಮುಖ ಪಾತ್ರವನ್ನು ಸುನಿಲ್ ಕಾನುಗೋಲು ವಹಿಸಿದ್ದರು. ಕರ್ನಾಟಕ ಮೂಲಕ ಸಾಗಿದ್ದ ಈ ಯಾತ್ರೆಯು ರಾಜ್ಯ ಚುನಾವಣೆಗೆ ಮುನ್ನ ಕಾಂಗ್ರೆಸ್ ಜನರೊಂದಿಗೆ ಸಂಪರ್ಕ ಸಾಧಿಸಲು ನೆರವಾಗಿತ್ತು. ಬಹುಮುಖ್ಯವಾಗಿ ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮಾಡುವಲ್ಲಿ ತಮ್ಮ ಪ್ರಭಾವವನ್ನು ಬೀರಿದ್ದರು. ತಮ್ಮದೇ ಆದ ಸಮೀಕ್ಷೆ ಮೂಲಕ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿದ್ದರು. ಕೆಲವರನ್ನು ಹೊರತುಪಡಿಸಿ ಕಾನುಗೋಲು ತಂಡ ನಡೆಸಿದ ಸಮೀಕ್ಷೆಗಳ ಆಧಾರದ ಮೇಲೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಕಾಂಗ್ರೆಸ್​ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನು ನಡೆಸುವಲ್ಲಿ ಸುನಿಲ್​ ಪ್ರಬಲ ತಂತ್ರಗಾರಿಕೆ ರೂಪಿಸಿದ್ದರು. ಈ ಹಿಂದೆ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪರವಾಗಿ ಕೆಲಸ ಮಾಡಿದ್ದರು.

ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್​ಗೆ ತನ್ನ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸುವ ಅನಿರ್ವಾಯತೆ ಇದೆ. ಜೊತೆಗೆ ರಾಜಸ್ಥಾನ ಮತ್ತು ಛತ್ತೀಸ್‌ಗಢ ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳುವುದು ಹಾಗೂ ಮಧ್ಯಪ್ರದೇಶದಲ್ಲಿ ಅಧಿಕಾರ ಬರುವ ಮುಖ್ಯವಾದ ಸವಾಲು ಕೈ ಪಾಳಯದ ಮುಂದಿದೆ. ಇಷ್ಟೇ ಅಲ್ಲ, ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸುವ ದೊಡ್ಡ ಸವಾಲು ಕಾಂಗ್ರೆಸ್​ಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಪಕ್ಷಕ್ಕೆ ಸಿಕ್ಕಿರುವ ಸರಳ ಬಹುಮತದ ಗೆಲುವು ಮತ್ತು ಚುನಾವಣಾ ತಂತ್ರಗಾರಿಕೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ:40% ಕಮಿಷನ್ ಆರೋಪ; ಕಮಲ ವಿರುದ್ಧ ಕಾಂಗ್ರೆಸ್ ಹೋರಾಟ ಯಶಸ್ವಿ

ABOUT THE AUTHOR

...view details