ಪುಣೆ(ಮಹಾರಾಷ್ಟ್ರ): ಹೆದ್ದಾರಿ ಯೋಜನೆಗಳಿಗೆ ಭೂಮಿಯನ್ನು ಬಿಟ್ಟುಕೊಟ್ಟ ರೈತರಿಗೆ ಹೆಚ್ಚಿನ ಪರಿಹಾರ ನೀಡಲು 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯೊಬ್ಬರನ್ನು ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಬಂಧಿಸಿದೆ. ಪುಣೆ ವಿಭಾಗದ ಹೆಚ್ಚುವರಿ ವಿಭಾಗೀಯ ಆಯುಕ್ತ ಅನಿಲ್ ರಾಮೋದ್ ಬಂಧಿತ ಆರೋಪಿ.
ಈ ಕಾರ್ಯಾಚರಣೆ ಬಳಿಕ ಮಧ್ಯಾಹ್ನದ ವೇಳೆಗೆ ಕಂದಾಯ ಇಲಾಖೆಯಲ್ಲಿರುವ ರಾಮೋದ್ ಅವರ ಕಚೇರಿ ಹಾಗೂ ಸರ್ಕಾರಿ ನಿವಾಸ ಹಾಗೂ ಬ್ಯಾನರ್ನಲ್ಲಿರುವ ‘ಋತುಪರ್ಣ’ ಸೊಸೈಟಿಯ ಖಾಸಗಿ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತು. ಅವರ ಮನೆಯ ಆವರಣದಲ್ಲಿ ನಡೆಸಿದ ಶೋಧದಲ್ಲಿ 14 ಸ್ಥಿರಾಸ್ತಿಗಳ ದಾಖಲೆಗಳ ಜತೆಗೆ 6 ಕೋಟಿ ರೂ. ನಗದನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಿಲ್ ರಾಮೋದ್ ಐಎಎಸ್ ಅಧಿಕಾರಿಯಾಗಿದ್ದು, ಕಂದಾಯ ಇಲಾಖೆಯಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಮೋದ್ ಮೂಲತಃ ನಾಂದೇಡ್ನವರಾಗಿದ್ದು, ಕಳೆದ 2 ವರ್ಷಗಳಿಂದ ಪುಣೆಯಲ್ಲಿ ಹೆಚ್ಚುವರಿ ವಿಭಾಗೀಯ ಆಯುಕ್ತರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪುಣೆ, ಸತಾರಾ ಮತ್ತು ಸೊಲ್ಲಾಪುರ ಜಿಲ್ಲೆಗಳಿಗೆ ರಾಮೋದ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ದೂರುದಾರರು ತಮ್ಮ ಭೂಸ್ವಾಧೀನ ಕಾನೂನು ಸಂಬಂಧಿತ ಪ್ರಕರಣಗಳು ಮತ್ತು ಕುಂದುಕೊರತೆಗಳಿಗಾಗಿ ಸತಾರಾ ಮತ್ತು ಸೊಲ್ಲಾಪುರ ಜಿಲ್ಲೆಗಳ ಹಲವಾರು ರೈತರನ್ನು ಪ್ರತಿನಿಧಿಸುತ್ತಿದ್ದಾರೆ. ದೂರುದಾರರು ಪ್ರತಿನಿಧಿಸಿದ ರೈತರು, ಹೆದ್ದಾರಿ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿರುವ ತಮ್ಮ ಜಮೀನುಗಳಿಗೆ ಹೆಚ್ಚಿನ ಪರಿಹಾರವನ್ನು ಕೋರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.