ಕರ್ನಾಟಕ

karnataka

ಭಾರತಕ್ಕೆ ಬಂದ ಗಣರಾಜ್ಯೋತ್ಸವದ ಅತಿಥಿ ಈಜಿಪ್ಟ್​ ಅಧ್ಯಕ್ಷರಿಗೆ ಭವ್ಯ ಸ್ವಾಗತ

By

Published : Jan 25, 2023, 1:58 PM IST

Updated : Jan 25, 2023, 2:50 PM IST

welcome-egyptian-president

ಗಣತಂತ್ರ ಉತ್ಸವದ ಅತಿಥಿಯಾಗಿರುವ ಈಜಿಪ್ಟ್​ ಅಧ್ಯಕ್ಷ ಅಬ್ದೆಲ್​ ಫತ್ತಾಹ್​ ಎಲ್​ಸಿಸಿ ಅವರು ನವದೆಹಲಿಗೆ ಆಗಮಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು.

ಗಣರಾಜ್ಯೋತ್ಸವದ ಅತಿಥಿ ಈಜಿಪ್ಟ್​ ಅಧ್ಯಕ್ಷರಿಗೆ ಭವ್ಯ ಸ್ವಾಗತ

ನವದೆಹಲಿ:ಈ ಸಲದ ಗಣರಾಜ್ಯೋತ್ಸವದ ಅತಿಥಿಯಾಗಿರುವ ಈಜಿಪ್ಟ್​ ಅಧ್ಯಕ್ಷ ಅಬ್ದೆಲ್​ ಫತ್ತಾಹ್​ ಎಲ್​ಸಿಸಿ ಅವರು ಭಾರತಕ್ಕೆ ವಿಮಾನದಲ್ಲಿ ಬಂದಿಳಿದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಬರಮಾಡಿಕೊಂಡರು. ಇದೇ ವೇಳೆ, ಸಾಂಪ್ರದಾಯಿಕ ಜಾನಪದ ನೃತ್ಯ ಪ್ರದರ್ಶನ ನೀಡಲಾಯಿತು. ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದು ಇದೇ ಮೊದಲಾಗಿದೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಕೂಡ ಮೊದಲ ಬಾರಿಗೆ ದೇಶಕ್ಕೆ ಭೇಟಿ ನೀಡಿದ್ದಾರೆ. ನಾಳೆ ನಡೆಯುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಕಾರಣ ಅವರ ಭಾರತ ಭೇಟಿಯನ್ನು 'ಐತಿಹಾಸಿಕ' ಎಂದು ಬಣ್ಣಿಸಲಾಗಿದೆ.

ಅಬ್ದೆಲ್ ಫತ್ತಾಹ್ ಅವರ ಸ್ವಾಗತ ವೇಳೆ ವಿದೇಶಾಂಗ ಸಚಿವ ಎಸ್ ಜೈಶಂಕರ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸೇರಿದಂತೆ ಹಲವಾರು ಕೇಂದ್ರ ಸಚಿವರು, ಅಧಿಕಾರಿಗಳು ಇದ್ದರು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅವರು ಮೊದಲಿಗೆ ರಾಜ್‌ಘಾಟ್‌ನಲ್ಲಿನ ಮಹಾತ್ಮ ಗಾಂಧಿ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡಿದರು. ಬಳಿಕ ರಾಜಭವನಕ್ಕೆ ಬಂದ ಈಜಿಪ್ಟ್​ ಅಧ್ಯಕ್ಷರಿಗೆ ಭವ್ಯ ಸ್ವಾಗತ ನೀಡಲಾಯಿತು. ಈ ವೇಳೆ ಕೆಲಹೊತ್ತು ರಾಷ್ಟ್ರಪತಿಗಳೊಂದಿಗೆ ಮಾತುಕತೆ ನಡೆಸಿದರು.

ಪ್ರಧಾನಿ ಜೊತೆ ದ್ವಿಪಕ್ಷಿಯ ಒಪ್ಪಂದ:ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭಾರತ ಮತ್ತು ಈಜಿಪ್ಟ್ ಸೈಬರ್ ಭದ್ರತೆ, ಸಂಸ್ಕೃತಿ, ಮಾಹಿತಿ ತಂತ್ರಜ್ಞಾನ, ಯುವ ವಿಷಯಗಳ ಮೇಲೆ ಸಹಕಾರ ಮತ್ತು ಪ್ರಸಾರ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಂಡರು.

ಭಾರತ- ಈಜಿಪ್ಟ್ ರಾಷ್ಟ್ರಗಳ ನಡುವಿನ ರಾಜರಾಂತ್ರಿಕ ಸಂಬಂಧ 75 ನೇ ವರ್ಷಕ್ಕೆ ಕಾಲಿಟ್ಟಿದ್ದು, 74 ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಈಜಿಪ್ಟ್​ ಅಧ್ಯಕ್ಷರು ಆಗಮಿಸುತ್ತಿರುವುದು ಪ್ರಾಮುಖ್ಯತೆ ಪಡೆದಿದೆ. ಅಬ್ದುಲ್​ ಫತ್ತಾಹ್​ ಎಲ್​ಸಿಸಿ ಅವರು ತಮ್ಮ ದೇಶದ ಐವರು ಸಚಿವರು, ಹಿರಿಯ ಅಧಿಕಾರಿಗಳಿಂದಿಗೆ ದೆಹಲಿಗೆ ಬಂದಿದ್ದಾರೆ. ಜ.26 ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು, ಗೌರವ ಸ್ವೀಕರಿಸಲಿದ್ದಾರೆ. ಪಥಸಂಚಲನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಓದಿ:'ದಿನದ 8 ನಿಮಿಷದ ಕೆಲಸಕ್ಕೆ ವಾರ್ಷಿಕ 40 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದೇನೆ': IAS ಅಧಿಕಾರಿ ಅಶೋಕ್ ಖೇಮ್ಕಾ

Last Updated :Jan 25, 2023, 2:50 PM IST

ABOUT THE AUTHOR

...view details