ETV Bharat / bharat

'ಅಣ್ಣಾಮಲೈ' ಹೆಸರಿನಲ್ಲೇನಿದೆ? ತಮಿಳುನಾಡಿಗಿದೆ ಈ ಹೆಸರಿನೊಂದಿಗೆ ಭಾವನಾತ್ಮಕ, ದೈವಿಕ ನಂಟು! - Annamalai

author img

By ETV Bharat Karnataka Team

Published : Apr 28, 2024, 2:26 PM IST

What is there in the name of Annamalai Tamil Nadu has an emotional divine connection
What is there in the name of Annamalai Tamil Nadu has an emotional divine connection

ಅಣ್ಣಾಮಲೈ ಎಂಬ ಹೆಸರು ತಮಿಳುನಾಡಿನ ಸಂಸ್ಕೃತಿಯಲ್ಲಿ ಭಾವನಾತ್ಮಕವಾಗಿ ಹಾಗೂ ದೈವಿಕವಾಗಿ ಬೆರೆತುಕೊಂಡಿದೆ.

ಚೆನ್ನೈ: ಅಣ್ಣಾಮಲೈ. ಈ ಹೆಸರನ್ನು ಇಂದು ಬಹುತೇಕರು ಕೇಳಿರಬಹುದು. ಪ್ರಸ್ತುತ ತಮಿಳುನಾಡಿನ ಜನಪ್ರಿಯ ಬಿಜೆಪಿ ಹಾಗೂ ರಾಜಕೀಯ ಮುಖಂಡರಾಗಿ ಕೆ.ಅಣ್ಣಾಮಲೈ ಅವರು ಜನಮಾನಸದಲ್ಲಿ ಬೆರೆತಿದ್ದಾರೆ. ಆದರೆ ಅಣ್ಣಾಮಲೈ ಈ ಹೆಸರಿನೊಂದಿಗೆ ತಮಿಳುನಾಡಿನ ಜನತೆ ಹಲವಾರು ರೀತಿಯಲ್ಲಿ ಭಾವನಾತ್ಮಕ, ಐತಿಹಾಸಿಕ ಹಾಗೂ ದೈವಿಕ ನಂಟು ಹೊಂದಿದ್ದಾರೆ. ಯಾವೆಲ್ಲ ರೀತಿಯಲ್ಲಿ ಅಣ್ಣಾಮಲೈ ಹೆಸರು ತಮಿಳುನಾಡಿನೊಂದಿಗೆ ಬೆಸೆದುಕೊಂಡಿದೆ ಎಂಬ ವಿಷಯ ಕುತೂಹಲಕರವಾಗಿದೆ.

ಬಿಜೆಪಿ ಮುಖಂಡ ಅಣ್ಣಾಮಲೈ ಅವರನ್ನೂ ಮೀರಿಸಿ ಜನಪ್ರಿಯತೆ ಗಳಿಸಿದ ಮತ್ತೊಬ್ಬ ಅಣ್ಣಾಮಲೈ ತಮಿಳುನಾಡಿನಲ್ಲಿ ಇದ್ದರು. ಹೀಗಾಗಿ ಈ ಹೆಸರು ತಮಿಳುನಾಡಿನ ಇತಿಹಾಸ ಮತ್ತು ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳೊಂದಿಗೆ ಆಳವಾಗಿ ಬೆಸೆದುಕೊಂಡಿದೆ.

ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಗಾಂಧೀಜಿಯವರ ಶಿಷ್ಯರಾಗಿದ್ದ ಚಿನ್ನ ಅಣ್ಣಾಮಲೈ (1920-1980) ಎಂಬ ಉತ್ಸಾಹಿ ಯುವಕ ದಕ್ಷಿಣ ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದರು. ಸ್ವಾತಂತ್ರ್ಯ ಚಳವಳಿಯ ತಾರೆ ಎಂದೇ ಹೆಸರುವಾಸಿಯಾಗಿದ್ದ ಚಿನ್ನ ಅಣ್ಣಾಮಲೈ ತಮ್ಮ ಭಾಷಣದಿಂದ ಜನರ ಮೇಲೆ ಮೋಡಿ ಮಾಡಿದ್ದರು.

ಚಿನ್ನ ಅಣ್ಣಾಮಲೈ ಅವರ ಹೋರಾಟದ ದಿನಗಳ ಬಗ್ಗೆ ಮಾತನಾಡಿದ ಖ್ಯಾತ ಶಾಸನಶಾಸ್ತ್ರಜ್ಞ ಮತ್ತು ಇತಿಹಾಸಕಾರ ಎಸ್ ರಾಮಚಂದ್ರನ್, "1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಅಣ್ಣಾಮಲೈ ಅವರನ್ನು ಬಂಧಿಸಲಾಗಿತ್ತು. ಆಗ ಜನ ತಿರುವಡನೈ (ರಾಮನಾಥಪುರಂ ಜಿಲ್ಲೆ) ಜೈಲಿಗೆ ನುಗ್ಗಿ ಅವರನ್ನು ಬಂಧಮುಕ್ತಗೊಳಿಸಿದ್ದರು" ಎಂದು ಸ್ಮರಿಸಿಕೊಂಡರು.

ತದನಂತರ ಮತ್ತೊಮ್ಮೆ ಚಿನ್ನ ಅಣ್ಣಾಮಲೈ ಅವರನ್ನು ಜೈಲಿಗೆ ಹಾಕಲಾಯಿತು. ಆಗ ನ್ಯಾಯಾಲಯದಲ್ಲಿ ಅವರ ಪರವಾಗಿ ಹಾಜರಾದ ಸಿ ರಾಜಗೋಪಾಲಾಚಾರಿ ನ್ಯಾಯಾಲಯದಲ್ಲಿ ವಾದ ಮಾಡಿ ಅಣ್ಣಾಮಲೈ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದರು. ಬರಹಗಾರ ಮತ್ತು ಉದಯೋನ್ಮುಖ ಪ್ರಕಾಶಕರಾಗಿದ್ದ ಚಿನ್ನ ಅಣ್ಣಾಮಲೈ ದ್ರಾವಿಡ ಚಳವಳಿಯನ್ನು ವಿರೋಧಿಸುತ್ತಿದ್ದರು.

ಚಿನ್ನ ಅಣ್ಣಾಮಲೈ ಅಲ್ಲದೆ ಮತ್ತೋರ್ವ ಅಣ್ಣಾಮಲೈ ತಮಿಳುನಾಡಿನ ಜನತೆಗೆ ಹತ್ತಿರವಾಗಿದ್ದಾರೆ. ತಮಿಳುನಾಡಿನ ಪ್ರಸಿದ್ಧ ಸಮಾಜ ಸೇವಕ ಮತ್ತು ಕೈಗಾರಿಕೋದ್ಯಮಿ ರಾಜಾ ಸರ್ ಅಣ್ಣಾಮಲೈ ಚೆಟ್ಟಿಯಾರ್ (1881-1948) ಅವರು ಹಿಂದೆ ಆಗಿ ಹೋದ ಮತ್ತೋರ್ವ ಜನಪ್ರಿಯ ಅಣ್ಣಾಮಲೈ ಹೆಸರಿನ ನಾಯಕರಾಗಿದ್ದಾರೆ. ಇವರು 1929 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.

ತಮಿಳು ಸಂಗೀತವನ್ನು ಪ್ರಚಾರ ಮಾಡಲು ಚೆಟ್ಟಿಯಾರ್ 1943 ರಲ್ಲಿ ತಮಿಳು ಇಸೈ ಸಂಗಮ್ ಅನ್ನು ಸ್ಥಾಪಿಸಿದರು ಮತ್ತು ಇಲ್ಲಿನ ಪ್ಯಾರೀಸ್ ಕಾರ್ನರ್​ನಲ್ಲಿರುವ ಭವ್ಯವಾದ ರಾಜಾ ಅಣ್ಣಾಮಲೈ ಮಂಡ್ರಮ್ ಕಟ್ಟಡವು ತಮಿಳು ಸಂಗೀತದ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ.

ಅಣ್ಣಾಮಲೈ ಎಂಬ ಹೆಸರು ಜನರ ನಂಬಿಕೆಯ ಅಂತರ್ಗತ ಭಾಗವೂ ಆಗಿದೆ. ಅಣ್ಣಾಮಲೈ ಹೆಸರು ದೇವರ ಶ್ರೇಷ್ಠತೆ, ಭವ್ಯತೆ ಮತ್ತು ಸರ್ವಶಕ್ತನ ಗುಣಗಳನ್ನು ಸೂಚಿಸುತ್ತದೆ ಎಂದು ಶ್ರೀ ವಜ್ರಗಿರಿ ವಡಿವೇಲನ್ ಗಿರಿವಾಲ ಕುಝು ಎಂಬ ಆಧ್ಯಾತ್ಮಿಕ ಸಂಘಟನೆಯ ಅಧ್ಯಕ್ಷ ಎಂ. ಸರವಣನ್ ಹೇಳಿದರು.

ಥೇವರಂ ಮತ್ತು ತಿರುವಸಗಂ ತಮಿಳು ಶೈವ ಧರ್ಮದ ಹನ್ನೆರಡು ಪವಿತ್ರ ಗ್ರಂಥಗಳ ಸಂಗ್ರಹವಾದ 'ಪನ್ನಿರು ತಿರುಮುರೈ' ನ ಭಾಗವಾಗಿವೆ. "ಶಿವನ ಅತ್ಯಂತ ಜನಪ್ರಿಯ ಹೆಸರು, ಅಣ್ಣಾಮಲೈ ಎಂಬ ಹೆಸರು ಶೈವ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಥೇವರಂ ಮತ್ತು ತಿರುವಸಗಂನಲ್ಲಿ ಶಿವನನ್ನು ಅಣ್ಣಾಮಲೈ ಎಂದು ಭಕ್ತಿಯಿಂದ ಹೊಗಳಲಾಗಿದೆ. ಅಣ್ಣಾಮಲೈ ಅರುಣಾಚಲೇಶ್ವರ ಎಂದು ಕರೆಯಲ್ಪಡುವ ತಿರುವಣ್ಣಾಮಲೈ ದೇವಾಲಯದ ಪ್ರಧಾನ ದೇವತೆ ಅಣ್ಣಾಮಲೈಯರ್ ಅವರನ್ನು ನೆನಪಿಗೆ ತರುತ್ತಾರೆ." ಎಂದು ಸರವಣನ್ ಹೇಳುತ್ತಾರೆ.

ಇದಲ್ಲದೆ, "ಅಣ್ಣಾಮಲೈ ಎಮ್ ಅನ್ನ ಪೋತ್ರಿ ಕಣ್ಣರ್ ಅಮುಧಾ ಕಡಲೆ ಪೋತ್ರಿ (ತಿರುವಸಗಂ)" ಎಂಬ ಪದ್ಯವನ್ನು ಉಚ್ಚರಿಸದೆ ಒಂದೇ ಒಂದು ಪೂಜೆಯನ್ನು ಪ್ರಾರಂಭಿಸಲಾಗುವುದಿಲ್ಲ ಎಂದು ಸರವಣನ್ ಹೇಳುತ್ತಾರೆ. ಇದು ತಿರುಮುರೈ ಧರ್ಮಗ್ರಂಥದಿಂದ ಪಠಿಸಲಾಗುವ ಶ್ಲೋಕಗಳ ಭಾಗವಾಗಿದೆ.

1990 ರ ದಶಕದಲ್ಲಿ ಈ ಹೆಸರು ತಮಿಳು ಪಾಪ್ ಸಂಸ್ಕೃತಿಯ ಭಾಗವಾಗಿತ್ತು. 1992 ರ ತಮಿಳು ಬ್ಲಾಕ್ ಬಸ್ಟರ್ "ಅಣ್ಣಾಮಲೈ" ಚಲನಚಿತ್ರದ ಶೀರ್ಷಿಕೆಯ ಬಗ್ಗೆ ಖ್ಯಾತ ಚಲನಚಿತ್ರ ನಿರ್ದೇಶಕ ಸುರೇಶ್ ಕೃಷ್ಣ ಅವರು ತಮ್ಮ ಪುಸ್ತಕ "ಬಾಶಾವುಮ್ ನಾನುಮ್" ನಲ್ಲಿ ಬರೆದಿದ್ದಾರೆ. ಅಣ್ಣಾಮಲೈ ಎಂಬ ಶೀರ್ಷಿಕೆಯನ್ನು ಖ್ಯಾತ ಚಲನಚಿತ್ರ ನಿರ್ಮಾಪಕ ಕೆ ಬಾಲಚಂದರ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ನಿರ್ಧರಿಸಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.

ಬಾಲಚಂದರ್ ಅವರ ನಿರ್ಮಾಣ ಸಂಸ್ಥೆ ಕವಿತಾಲಯ ಈ ಚಿತ್ರವನ್ನು ನಿರ್ಮಿಸಿತ್ತು. ಚಿತ್ರ ಭಾರಿ ಯಶಸ್ಸನ್ನು ಗಳಿಸಿತ್ತು. "ಮಲೈ ದಾ, ಅಣ್ಣಾಮಲೈ" ಎಂಬುದು ಆ ಚಿತ್ರದ ಜನಪ್ರಿಯ ರಜನಿಕಾಂತ್ ಅವರ ಪಂಚ್ ಲೈನ್ ಆಗಿತ್ತು. ಇದರಲ್ಲಿ ಅವರು "ಅಣ್ಣಾಮಲೈ" ಎಂಬ ಹಾಲು ಮಾರಾಟಗಾರನ ಪಾತ್ರವನ್ನು ನಿರ್ವಹಿಸಿದ್ದರು ಮತ್ತು ತಮ್ಮ ಮಿತ್ರನೇ ಶತ್ರುವಾದ ನಂತರ ಶ್ರೀಮಂತ ಉದ್ಯಮಿಯಾಗಿ ಜೀವನದಲ್ಲಿ ಯಶಸ್ಸು ಕಾಣುತ್ತಾರೆ.

ತಮಿಳು ಪದ 'ಮಲೈ' ಎಂದರೆ ಪರ್ವತ ಎಂದರ್ಥ. ನಾಯಕನ ಪರಾಕ್ರಮ, ಕಠಿಣ ಪರಿಶ್ರಮ ಮತ್ತು ಯಶಸ್ಸನ್ನು ಸೂಚಿಸಲು ಈ ಪದವನ್ನು ಚಿತ್ರದಲ್ಲಿ ಬುದ್ಧಿವಂತಿಕೆಯಿಂದ ಬಳಸಲಾಗಿದೆ. ಹಲವು ವರ್ಷಗಳ ಹಿಂದೆ ಬಾಕ್ಸ್ ಆಫೀಸ್​ನಲ್ಲಿ ಅಣ್ಣಾಮಲೈ ಚಿತ್ರದ ಅದ್ಭುತ ಗೆಲುವಿನಂತೆ, ತಮಿಳುನಾಡು ಬಿಜೆಪಿ ಕಾರ್ಯಕರ್ತರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ನಾಯಕ ಅಣ್ಣಾಮಲೈ ಅವರ ಗೆಲುವನ್ನು ನಿರೀಕ್ಷಿಸುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಇದನ್ನೂ ಓದಿ : I.N.D.I.A ಕೂಟ ಅಧಿಕಾರಕ್ಕೆ ಬಂದರೆ 'ವರ್ಷಕ್ಕೊಬ್ಬ ಪ್ರಧಾನಿ', ಕರ್ನಾಟಕದಲ್ಲಿ ಸಿಎಂ ಬದಲಿಗೆ ಸಿದ್ಧತೆ: ಮೋದಿ - Modi Slams INDIA Bloc

ETV Bharat Logo

Copyright © 2024 Ushodaya Enterprises Pvt. Ltd., All Rights Reserved.