ETV Bharat / bharat

ಆಪ್​ನೊಂದಿಗೆ ಮೈತ್ರಿ ವಿರೋಧಿಸಿ ದೆಹಲಿ ಕಾಂಗ್ರೆಸ್​ ಅಧ್ಯಕ್ಷರ ರಾಜೀನಾಮೆ - Delhi Congress president

author img

By ANI

Published : Apr 28, 2024, 3:44 PM IST

Delhi Congress chief Arvinder Singh Lovely resigns, says party allied with AAP
Delhi Congress chief Arvinder Singh Lovely resigns, says party allied with AAP

ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನವದೆಹಲಿ: ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಎಪಿಯೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದನ್ನು ವಿರೋಧಿಸಿ ತಾವು ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.

"ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು, ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುವ ಏಕೈಕ ಉದ್ದೇಶದಿಂದ ಎಎಪಿ ಪಕ್ಷ ಸ್ಥಾಪನೆಯಾಗಿದೆ. ಅಂಥ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ದೆಹಲಿ ಕಾಂಗ್ರೆಸ್ ಘಟಕ ವಿರೋಧಿಸಿತ್ತು. ಅದರ ಹೊರತಾಗಿಯೂ ದೆಹಲಿಯಲ್ಲಿ ಎಎಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿತು" ಎಂದು ಅರವಿಂದರ್ ಸಿಂಗ್ ಲವ್ಲಿ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಲವ್ಲಿ ಅವರು ಆಗಸ್ಟ್ 2023 ರಲ್ಲಿ ಈ ಹುದ್ದೆಗೆ ನೇಮಕಗೊಂಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ, ದೆಹಲಿ ಕಾಂಗ್ರೆಸ್ ಹಿರಿಯ ನಾಯಕರು ಸರ್ವಾನುಮತದಿಂದ ತೆಗೆದುಕೊಂಡ ಎಲ್ಲ ನಿರ್ಧಾರಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ (ದೆಹಲಿ ಉಸ್ತುವಾರಿ) ಏಕಪಕ್ಷೀಯವಾಗಿ ತಿರಸ್ಕರಿಸಿದ್ದಾರೆ ಎಂದು ಲವ್ಲಿ ಹೇಳಿದ್ದಾರೆ.

"ನಾನು ಡಿಪಿಸಿಸಿ ಅಧ್ಯಕ್ಷರಾಗಿ ನೇಮಕವಾದಾಗಿನಿಂದ, ಡಿಪಿಸಿಸಿಯಲ್ಲಿ ಯಾವುದೇ ಹಿರಿಯ ಸ್ಥಾನಗಳಿಗೆ ನೇಮಕಾತಿಗಳನ್ನು ಮಾಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿಯವರು (ದೆಹಲಿ ಉಸ್ತುವಾರಿ) ನನಗೆ ಅವಕಾಶ ನೀಡಿಲ್ಲ. ಡಿಪಿಸಿಸಿಯ ಮಾಧ್ಯಮ ಮುಖ್ಯಸ್ಥರ ಸ್ಥಾನಕ್ಕೆ ಹಿರಿಯ ನಾಯಕನನ್ನು ನೇಮಿಸಬೇಕೆಂಬ ನನ್ನ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಯಿತು. ನಗರದ ಎಲ್ಲಾ ಬ್ಲಾಕ್​ಗಳಿಗೆ ಅಧ್ಯಕ್ಷರನ್ನು ನೇಮಿಸಲು ಕೂಡ ಈವರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯವರು ಡಿಪಿಸಿಸಿಗೆ ಅನುಮತಿ ನೀಡಿಲ್ಲ. ಇದರಿಂದಾಗಿ ದೆಹಲಿಯ 150 ಕ್ಕೂ ಹೆಚ್ಚು ಬ್ಲಾಕ್​ಗಳಿಗೆ ಅಧ್ಯಕ್ಷರನ್ನು ನೇಮಿಸಲು ಸಾಧ್ಯವಾಗಿಲ್ಲ" ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೈತ್ರಿಯ ನಂತರ ಪ್ರಸ್ತುತ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ದೆಹಲಿಯಲ್ಲಿ ಕಾಂಗ್ರೆಸ್​ಗೆ ಕೇವಲ ಮೂರು ಲೋಕಸಭಾ ಸಂಸದೀಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ ಎಂದು ಅರವಿಂದರ್ ಸಿಂಗ್ ಲವ್ಲಿ ತಿಳಿಸಿದ್ದಾರೆ. ಅಲ್ಲದೆ ಈಶಾನ್ಯ ದೆಹಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕನ್ಹಯ್ಯ ಕುಮಾರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರನ್ನು ಹೊಗಳಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಿಲ್ಲದ ಕಾರಣ ತಮ್ಮ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಲವ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಜನರನ್ನು ಹೆದರಿಸಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಮಮತಾ ಬ್ಯಾನರ್ಜಿ: ಜೆ.ಪಿ.ನಡ್ಡಾ ವಾಗ್ದಾಳಿ - Sandeshkhali Arms Recovery

ETV Bharat Logo

Copyright © 2024 Ushodaya Enterprises Pvt. Ltd., All Rights Reserved.